ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಪ್ರತಿಯೊಬ್ಬ ತಂದೆಗೂ ತನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು, ಆಕೆಯನ್ನು ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕು ಎಂದೆಲ್ಲ ಸಾಕಷ್ಟು ಕನಸುಗಳಿರುತ್ತವೆ. ಆ ತಂದೆ ಕೂಡ ಅದೇ ರೀತಿ ಕನಸುಗಳನ್ನು ಹೊತ್ತು ಮಗಳ ಮದುವೆಗೆ ಸಿದ್ಧತೆ ನಡೆಸಿದ್ದರು. ಮದುವೆಯ ದಿನ ಮಂಟಪದಲ್ಲಿ ವರನ ಕೈಗೆ ಮಗಳ ಕೈಯನ್ನಿಟ್ಟು ಕನ್ಯಾದಾನ ಮಾಡುವಾಗಲೇ ಆ ತಂದೆಯ ಎದೆಯಲ್ಲಿ ಸಣ್ಣದೊಂದು ನೋವು ಕಾಣಿಸಿಕೊಂಡಿತ್ತು. ಮದುವೆಯ ಓಡಾಟದಿಂದ ಆಯಾಸವಾಗಿದ್ದರಿಂದ ಹೀಗಾಗಿರಬಹುದು ಎಂದುಕೊಂಡ ಸುಮ್ಮನಾದ ಅವರು ಕನ್ಯಾದಾನ ಮಾಡಿ ಮುಗಿಸುವಷ್ಟರಲ್ಲಿ ಹೃದಯಾಘಾತದಿಂದ ಕುಸಿದುಬಿದ್ದಿದ್ದರು!

ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!
Father Died During Kanyadan

Updated on: May 15, 2026 | 3:31 PM

ನವದೆಹಲಿ, ಮೇ 15: ಮದುವೆ ಮನೆಯ ತುಂಬ ಸಂತೋಷದ ವಾತಾವರಣವಿತ್ತು. ಮನೆ ಮಗಳ ಮದುವೆಯಾದ್ದರಿಂದ ಕುಟುಂಬದವರೆಲ್ಲ ಸಂಭ್ರಮದಲ್ಲಿದ್ದರು. ಆದರೆ, ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ಮದುವೆ (Wedding) ಮನೆ ಸೂತಕದ ಮನೆಯಾಗಿಹೋಯಿತು. ಮಹಾರಾಷ್ಟ್ರದ ಸಿಂಧ್‌ಖೇಡ್ ರಾಜಾ ತಾಲ್ಲೂಕಿನ ವರ್ದಾದಿಯಲ್ಲಿ ವಧುವಿನ ಕನ್ಯಾದಾನ ಮಾಡಿದ ತಂದೆ ತಂದೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವರ್ದಾದಿಯ ಕುರುಮದಾಸ್ ಭೂತೇಕರ್ ಅವರ ಪುತ್ರಿ ನಂದಿನಿ, ಜಲ್ನಾ ಜಿಲ್ಲೆಯ ಮಾಂಥಾದ ಪ್ರದೀಪ್ ನಾನೋಟೆ ಅವರನ್ನು ವಿವಾಹವಾದರು. ಗುರುವಾರ ಸಂಜೆ ಮುಖ್ಯ ವಿವಾಹ ಸಮಾರಂಭ ಪ್ರಾರಂಭವಾಯಿತು. ಅದ್ದೂರಿಯಾಗಿ ನಡೆದ ಈ ವಿವಾಹದಲ್ಲಿ ಕುರುಮದಾಸ್ ತನ್ನ ಮಗಳ ಕೈಯನ್ನು ವರನ ಮನೆಯವರ ಕೈಗೆ ಒಪ್ಪಿಸುವ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ಅವರಿಗೆ ಎದೆಯಲ್ಲಿ ನೋವುಂಟಾಯಿತು. ಅದರ ನಂತರ, ಅವರು ವಿವಾಹ ಸಮಾರಂಭ ನಡೆಯುತ್ತಿರುವ ಸ್ಥಳದಲ್ಲಿಯೇ ಕುಸಿದುಬಿದ್ದರು.

ಇದನ್ನೂ ಓದಿ: ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ

ಆರಂಭದಲ್ಲಿ, ಅಲ್ಲಿದ್ದವರು ಒತ್ತಡ ಅಥವಾ ಆಯಾಸದಿಂದ ಅವರು ಮೂರ್ಛೆ ಹೋಗಿರಬೇಕು ಎಂದು ಭಾವಿಸಿದ್ದರು. ಸಂಬಂಧಿಕರು ಅವರನ್ನು ಬೇಗನೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದರಿಂದಾಗಿ ಸಂತೋಷ ತುಂಬಿದ್ದ ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿತು.

ಮೃತ ಕುರುಮದಾಸ್ ಭೂಟೇಕರ್ ಅವರ ಆರೋಗ್ಯ ಸ್ವಲ್ಪ ಸಮಯದಿಂದ ಕ್ಷೀಣಿಸುತ್ತಿತ್ತು. ಡಿಸೆಂಬರ್‌ನಲ್ಲಿ ಅವರಿಗೆ ಬೈಪಾಸ್ ಸರ್ಜರಿ ನಡೆದಿತ್ತು. ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರು. ಆದರೆ ಅವರು ತಮ್ಮ ಮಗಳ ಮದುವೆಯನ್ನು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮಾಡಿಸುವ ಕನಸನ್ನು ಹೊಂದಿದ್ದರು. ಈ ಕನಸನ್ನು ನನಸಾಗಿಸಲು ಅವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಮಗಳ ಮದುವೆಯಲ್ಲೇ ಅವರು ಪ್ರಾಣ ಬಿಡುವಂತಾಯಿತು.

ಇದನ್ನೂ ಓದಿ: Video: ವಂದೇ ಭಾರತ್ ರೈಲು ಟಿಕೆಟ್‌ ಹಾಫ್ ರೇಟ್‌ಗೆ ಮಾರಾಟ, ಟಿಟಿಇ ಅಮಾನತು

ಈ ಘಟನೆಯ ಸುದ್ದಿ ಆ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಮಗಳನ್ನು ಸಂತೋಷದಿಂದ ಗಂಡನ ಮನೆಗೆ ಕಳುಹಿಸಬೇಕಾದ ಮನೆಯಿಂದ ತಂದೆಯ ಅಂತ್ಯಕ್ರಿಯೆಯ ಮೆರವಣಿಗೆ ಹೊರಡುವಂತಾಯಿತು. ಇದು ಕುಟುಂಬಸ್ಥರ ಮತ್ತು ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us