ತಂಗಿ ಜತೆ ಜಗಳವಾಡಿದ್ದಕ್ಕೆ ಬೈದ ತಂದೆ; ತರಕಾರಿ ಕತ್ತರಿಸುವ ಚಾಕುವಿನಿಂದ ಅಪ್ಪನಿಗೆ ಇರಿದು ಕೊಂದೇಬಿಟ್ಟ 13 ವರ್ಷದ ಮಗ

ತಂದೆಯಿಂದ ಬೈಸಿಕೊಂಡಿದ್ದಕ್ಕೆ ಸಿಟ್ಟಿಗೆದ್ದ 13 ವರ್ಷದ ಮಗ ಅಲ್ಲೇ ತರಕಾರಿ ಹೆಚ್ಚಲು ಇಟ್ಟಿದ್ದ ಚಾಕುವನ್ನು ಬಳಸಿ ಅಪ್ಪನ ಹೊಟ್ಟೆಗೆ ಇರಿದು ಬಿಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ಹೇಳಿರುವಂತೆ ಚಾಕುವಿನ ಇರಿತದ ತೀವ್ರತೆ ಎಷ್ಟಿತ್ತೆಂದರೆ ಒಂದೇ ಇರಿತಕ್ಕೆ ವ್ಯಕ್ತಿ ಕುಸಿದು ಬಿದ್ದಿದ್ದಾರೆ.

ತಂಗಿ ಜತೆ ಜಗಳವಾಡಿದ್ದಕ್ಕೆ ಬೈದ ತಂದೆ; ತರಕಾರಿ ಕತ್ತರಿಸುವ ಚಾಕುವಿನಿಂದ ಅಪ್ಪನಿಗೆ ಇರಿದು ಕೊಂದೇಬಿಟ್ಟ 13 ವರ್ಷದ ಮಗ
ಪ್ರಾತಿನಿಧಿಕ ಚಿತ್ರ

Updated on: May 21, 2021 | 1:32 PM

ಪುಣೆ: ಕೆಲವೊಮ್ಮೆ ಚಿಕ್ಕ ಮಕ್ಕಳು ಮಾಡುವ ಯಡವಟ್ಟು ದೊಡ್ಡ ಅನಾಹುತವನ್ನೇ ಸೃಷ್ಟಿಸಿಬಿಡುತ್ತದೆ. ಎಷ್ಟೋ ಘಟನೆಗಳಲ್ಲಿ ಕ್ಷಣ ಮಾತ್ರದ ಸಿಟ್ಟಿನಿಂದ ಮಕ್ಕಳು ಮಾಡುವ ಕೆಲಸಕ್ಕೆ ಕೆಲವರ ಜೀವವೇ ಹೋಗಿದೆ. ಇಲ್ಲೂ ಅದೇ ತೆರನಾದ ಒಂದು ಘಟನೆ ನಡೆದಿದ್ದು ಅಣ್ಣ, ತಂಗಿಯ ನಡುವಿನ ಜಗಳ ಬಿಡಿಸಲು ಹೋದ ಅಪ್ಪನಿಗೆ 13 ವರ್ಷದ ಮಗ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತ ನೆರೆಯ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಘಟಿಸಿದ್ದು, ವಾಚ್​ಮನ್ ಆಗಿ ಕುಟುಂಬವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಮಗನ ಕೈಯಿಂದಲೇ ಜೀವ ಕಳೆದುಕೊಂಡಿದ್ದಾರೆ.

ಪುಣೆಯ ಭಾರತೀ ವಿದ್ಯಾಪೀಠ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಮೇ 20) ಸಂಜೆ 5.30ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಬಾಲಾಪರಾಧಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತ ವ್ಯಕ್ತಿ ಪತ್ನಿ ಹಾಗೂ ನಾಲ್ಕು ಮಕ್ಕಳ ಜತೆ ಅಪಾರ್ಟ್​ಮೆಂಟ್ ಒಂದರ ಪಾರ್ಕಿಂಗ್ ಲಾಟ್​ನಲ್ಲಿ ವಾಸಿಸುತ್ತಿದ್ದು, ಸಂಜೆ 5.30ರ ಸುಮಾರಿಗೆ ತರಕಾರಿ ಹೆಚ್ಚುತ್ತಾ ಕುಳಿತಿದ್ದರು. ಈ ವೇಳೆ 13ವರ್ಷದ ಮಗ ಹಾಗೂ ಇನ್ನೊಬ್ಬಳು ಮಗಳ ನಡುವೆ ಜಗಳವಾಗಿದೆ. ಜಗಳ ಜೋರಾದಾಗ ಬಿಡಿಸಲು ಹೋದ ತಂದೆ ಇಬ್ಬರಿಗೂ ಬೈದು ಸುಮ್ಮನಾಗಿಸಿದ್ದಾರೆ.

ಆದರೆ, ತಂದೆಯಿಂದ ಬೈಸಿಕೊಂಡಿದ್ದಕ್ಕೆ ಸಿಟ್ಟಿಗೆದ್ದ 13 ವರ್ಷದ ಮಗ ಅಲ್ಲೇ ತರಕಾರಿ ಹೆಚ್ಚಲು ಇಟ್ಟಿದ್ದ ಚಾಕುವನ್ನು ಬಳಸಿ ಅಪ್ಪನ ಹೊಟ್ಟೆಗೆ ಇರಿದು ಬಿಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ಹೇಳಿರುವಂತೆ ಚಾಕುವಿನ ಇರಿತದ ತೀವ್ರತೆ ಎಷ್ಟಿತ್ತೆಂದರೆ ಒಂದೇ ಇರಿತಕ್ಕೆ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ಘಟನೆ ನಡೆಯುತ್ತಿರುವಂತೆ ಧಾವಿಸಿದ ನೆರೆಹೊರೆಯವರು ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದ್ದಾರೆ. ಆದರೆ, ಆಸ್ಪತ್ರೆಗೆ ಹೋದಾಗ ಆತನನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿಯನ್ನು ನೋಡಿಕೊಂಡು ಸಂಸಾರ ನಿಭಾಯಿಸುತ್ತಿದ್ದ ವ್ಯಕ್ತಿ ಮಗನ ಅಚಾತುರ್ಯದಿಂದ ಜೀವ ಕಳೆದುಕೊಂಡಿದ್ದು ಇಡೀ ಕುಟುಂಬವೇ ಆಘಾತದಲ್ಲಿದೆ. ಸದ್ಯ ಭಾರತೀ ವಿದ್ಯಾಪೀಠ ಠಾಣೆಯ ಪೊಲೀಸರು 13 ವರ್ಷದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:
ಬೆಚ್ಚಿ ಬೀಳಿಸಿದ ನಿರ್ದೇಶಕನ ಕೊಲೆ; ಮದುವೆ ಆಗದೇ ಇರುವುದಕ್ಕೆ ಮಗನನ್ನು ಕತ್ತರಿಸಿ ಕೊಂದ ತಂದೆ

ಮೈಸೂರಿನಲ್ಲಿ ಭೀಕರ ಘಟನೆ; ತಾಯಿ, ಪತ್ನಿ, ಮಕ್ಕಳಿಬ್ಬರನ್ನು ಬರ್ಬರವಾಗಿ ಕೊಲೆಗೈದ ವ್ಯಕ್ತಿ

Loading...
Unable to load recommendations.
Follow Us