ಅಟಲ್ ಸುರಂಗದ ಬಳಿ ಹಿಮಪಾತದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

ಶನಿವಾರ ರಾತ್ರಿ 12.33ರ ವರೆಗೂ ನಡೆದ ಕಾರ್ಯಾಚರಣೆಯ ಬಳಿಕ, ಹಿಮಪಾತದಲ್ಲಿ ಸಿಲುಕಿ ಹಾಕಿಕೊಂಡಿದ್ದ ಪ್ರವಾಸಿಗರನ್ನು ಮನಾಲಿಯ ಸುರಕ್ಷಿತ ತಾಣಗಳಿಗೆ ಕರೆದೊಯ್ಯಲಾಗಿದೆ.

ಅಟಲ್ ಸುರಂಗದ ಬಳಿ ಹಿಮಪಾತದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು
ಹಿಮಾಚಲ ಪ್ರದೇಶದ ರೊಹ್ಟಾಂಗ್ ಅಟಲ್ ಸುರಂಗಮಾರ್ಗದ ಬಳಿ ಪೊಲೀಸರು ಪ್ರವಾಸಿಗರನ್ನು ರಕ್ಷಿಸಿದರು.
Edited By:

Updated on: Apr 06, 2022 | 11:04 PM

ಶಿಮ್ಲಾ: ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶದ ಅಟಲ್ ರೊಹ್ಟಾಂಗ್ ಸುರಂಗಮಾರ್ಗದ ಬಳಿ ಪೊಲೀಸರು ರಕ್ಷಿಸಿದ್ದಾರೆ.

ಕೆಲ ಪ್ರವಾಸಿಗರು ಶನಿವಾರ ಬೆಳಿಗ್ಗೆ ಸುರಂಗಮಾರ್ಗದ ಮೂಲಕ ಪ್ರಯಾಣ ನಡೆಸಿದ್ದರು. ಆದರೆ, ಸಂಜೆಯ ವೇಳೆಗೆ ಲಹಾವುಲ್ ಬಳಿ ಯಾವುದೇ ವಿಶ್ರಾಂತಿ ತಾಣ ಕಾಣದೆ ದಾರಿ ಮಧ್ಯೆ ಸಿಲುಕಿಕೊಂಡಿದ್ದರು. ಮನಾಲಿ, ಕುಲು ಪ್ರದೇಶಕ್ಕೆ ತೆರಳಬೇಕಿದ್ದ ಪ್ರವಾಸಿಗರು ಹಿಮಪಾತದಿಂದ ದಾರಿ ಕಾಣದೆ ಪರದಾಡುವಂತಾಗಿದ್ದು ಎಂದು ಕುಲು ಎಸ್.ಪಿ. ಗೌರವ್ ಸಿಂಗ್ ಹೇಳಿದ್ದಾರೆ.

ಲಹಾವುಲ್-ಸ್ಪಿಟಿ ಪೊಲೀಸರು, ಕುಲು ಪೊಲೀಸರ ಸಹಕಾರದೊಂದಿಗೆ ವಾಹನ ಕಳುಹಿಸಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ . 48 ಆಸನಗಳನ್ನು ಹೊಂದಿರುವ ಒಂದು ಬಸ್, 24 ಆಸನಗಳ ಪೊಲೀಸ್ ವಾಹನ ಸಹಿತ ಸುಮಾರು 70 ವಾಹನಗಳನ್ನು ಬಳಸಿ ರಕ್ಷಣಾಕಾರ್ಯ ನಡೆಸಲಾಗಿದೆ ಎಂದು ಗೌರವ್ ಸಿಂಗ್ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಶನಿವಾರ ಸಂಜೆ ಆರಂಭವಾಗಿ, ಮಧ್ಯರಾತ್ರಿಯವರೆಗೂ ಮುಂದುವರೆದಿತ್ತು ಎಂದೂ ಅವರು ತಿಳಿಸಿದ್ದಾರೆ.

ಶನಿವಾರ ರಾತ್ರಿ 12.33ರ ವರೆಗೂ ನಡೆದ ಕಾರ್ಯಾಚರಣೆಯ ಬಳಿಕ, ಹಿಮಪಾತದಲ್ಲಿ ಸಿಲುಕಿ ಹಾಕಿಕೊಂಡಿದ್ದ ಪ್ರವಾಸಿಗರನ್ನು ಮನಾಲಿಯ ಸುರಕ್ಷಿತ ತಾಣಗಳಿಗೆ ಕರೆದೊಯ್ಯಲಾಗಿದೆ. ಸ್ಟೇಷನ್ ಹೌಸ್ ಅಧಿಕಾರಿಗಳ ತಂಡವು, ಹಿಮಪಾತದಲ್ಲಿ ಸಿಲುಕಿಹಾಕಿಕೊಂಡಿರುವ ಪ್ರವಾಸಿಗರು ದಾರಿಮಧ್ಯೆ ಉಳಿದುಕೊಂಡಿರುವ ಬಗ್ಗೆಯೂ ಪರಿಶೀಲನೆ ನಡೆಸಿದೆ.

ಸುರಂಗಮಾರ್ಗದ ಬಳಿ ಮುಂದಿನ ದಿನಗಳಲ್ಲೂ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಂಗಳವಾರ ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಹಿಮಪಾತ ಆಗುವ ಸೂಚನೆ ನೀಡಿದೆ. ಜನವರಿ 3ರಿಂದ 5ರವರೆಗೆ ಹಾಗೂ 8ನೇ ತಾರೀಖಿನಂದು ಹಿಮಪಾತ ಆಗಲಿರುವ ಬಗ್ಗೆ ಹವಾಮಾನ ಇಲಾಖೆ ಹೇಳಿಕೆ ನೀಡಿದೆ.

ಅಟಲ್ ರೊಹ್ಟಾಂಗ್ ಸುರಂಗಮಾರ್ಗವು ಅಕ್ಟೋಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆಗೊಂಡಿತ್ತು. ಆ ಬಳಿಕ, ಲಹಾವುಲ್-ಮನಾಲಿ ಪ್ರದೇಶವನ್ನು ಸಂಪರ್ಕಿಸುವ ಈ ಸುರಂಗಮಾರ್ಗಕ್ಕೆ ಮನಾಲಿಗೆ ಬರುವ ಬಹುತೇಕ ಎಲ್ಲಾ ಪ್ರವಾಸಿಗರೂ ಭೇಟಿ ನೀಡುತ್ತಿದ್ದಾರೆ.

Photo Gallery | ಚಳಿಗೆ ಸವಾಲೊಡ್ಡುತ್ತಿರುವ ದೆಹಲಿ ಚಲೋ ಚಳುವಳಿಕಾರರು

Published On - 5:42 pm, Sun, 3 January 21