Hindi Diwas: ಯಾವುದೇ ಭಾರತೀಯ ಭಾಷೆಗೆ ಹಿಂದಿ ಪ್ರತಿಸ್ಪರ್ಧಿಯಲ್ಲ, ಎಲ್ಲ ಭಾಷೆಗಳಿಗೆ ಹಿಂದಿ ಮಿತ್ರ ಭಾಷೆ; ಅಮಿತ್ ಶಾ

‘ಹಿಂದಿಯು ಭಾರತದ ಎಲ್ಲ ಭಾಷೆಗಳ ಸ್ನೇಹಿತ, ಅದು ಯಾವುದೇ ಭಾಷೆಯ ಪ್ರತಿಸ್ಪರ್ಧಿಯಲ್ಲ’ ಎಂದು ಪುನರುಚ್ಚರಿಸಿದರು.

Hindi Diwas: ಯಾವುದೇ ಭಾರತೀಯ ಭಾಷೆಗೆ ಹಿಂದಿ ಪ್ರತಿಸ್ಪರ್ಧಿಯಲ್ಲ, ಎಲ್ಲ ಭಾಷೆಗಳಿಗೆ ಹಿಂದಿ ಮಿತ್ರ ಭಾಷೆ; ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 14, 2022 | 6:47 PM

ದೆಹಲಿ: ಯಾವುದೇ ಭಾರತೀಯ ಭಾಷೆಗೆ ಹಿಂದಿ ಪ್ರತಿಸ್ಪರ್ಧಿಯಲ್ಲ. ಅದು ದೇಶದ ಇತರ ಎಲ್ಲಾ ಭಾಷೆಗಳ ‘ಸ್ನೇಹಿತ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shash) ಬುಧವಾರ (ಸೆ 14) ಹೇಳಿದರು. ‘ಹಿಂದಿ ದಿವಸ್’ (Hindi Diwas) ಪ್ರಯುಕ್ತ ನಡೆದ ‘ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಭಾರತದ ಏಕತೆಗೆ ಹಿಂದಿಯ ಅಗತ್ಯವನ್ನು ವಿವರಿಸಿದರು. ಇದೇ ವೇಳೆ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ‘ಹಿಂದಿಯು ಇಡೀ ರಾಷ್ಟ್ರವನ್ನು ಅಧಿಕೃತ ಭಾಷೆಯಾಗಿ ಏಕತೆಯ ಎಳೆಯಲ್ಲಿ ಒಂದುಗೂಡಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಹಿಂದಿಯು ನಮ್ಮ ಆಡಳಿತ ಭಾಷೆಯಾಗಿದೆ. ಅದಕ್ಕೆ ಪ್ರಾಮುಖ್ಯತೆ ಕೊಡಲೇಬೇಕು. ಹಿಂದಿಯನ್ನು ಸದೃಢಗೊಳಿಸದಿದ್ದರೆ ಭಾರತದ ಇತರ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸಲು ಆಗುವುದಿಲ್ಲ’ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಿಂದಿ ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳನ್ನು ಏಕಕಾಲಕ್ಕೆ ಮುನ್ನೆಲೆಗೆ ತರಲು, ಪ್ರೋತ್ಸಾಹ ನೀಡಲು ಬದ್ಧವಾಗಿದೆ. ಭಾರತವು ಹಲವು ಭಾಷೆಗಳ ದೇಶ. ಇದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಇತರ ಭಾರತೀಯ ಭಾಷೆಗಳಿಂದ ಅಗತ್ಯ ಪದಗಳನ್ನು ಹಿಂದಿ ಮುಕ್ತವಾಗಿ ಸ್ವೀಕರಿಸುವ ಮೂಲಕ ಪದಸಂಪತ್ತು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳು ಒಂದು ಮತ್ತೊಂದರೊಂದಿಗೆ ಸ್ಪರ್ಧಿಸುತ್ತಿವೆ ಎಂದು ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಹಿಂದಿಯು ಭಾರತದ ಎಲ್ಲ ಭಾಷೆಗಳ ಸ್ನೇಹಿತ, ಅದು ಯಾವುದೇ ಭಾಷೆಯ ಪ್ರತಿಸ್ಪರ್ಧಿಯಲ್ಲ’ ಎಂದು ಪುನರುಚ್ಚರಿಸಿದರು.

ಶುಭ ಕೋರಿದ ಮೋದಿ

ಹಿಂದಿ ದಿವಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭ ಕೋರಿದರು. ‘ಹಿಂದಿಯು ಪ್ರಪಂಚದಾದ್ಯಂತ ಭಾರತಕ್ಕೆ ವಿಶೇಷ ಗೌರವ ತಂದಿದೆ. ಅದರ ಸರಳತೆ, ಸ್ವಾಭಾವಿಕತೆ ಮತ್ತು ಸಂವೇದನಾಶೀಲತೆ ಯಾವಾಗಲೂ ಆಕರ್ಷಿಸುತ್ತದೆ. ಹಿಂದಿಯನ್ನು ಸಮೃದ್ಧ ಮತ್ತು ಸಶಕ್ತಗೊಳಿಸುವಲ್ಲಿ ದಣಿವರಿಯದ ಕೊಡುಗೆ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಹಿಂದಿ ದಿವಸ್​ಗೆ ವಿರೋಧ

ಭಾರತದ ಹಿಂದಿಯೇತರ ಭಾಷಿಕರು ಇರುವ ರಾಜ್ಯಗಳ ಜನತೆಯ ಮೇಲೆ ಹಿಂದಿಯನ್ನು ಹೇರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆಕ್ಷೇಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರ ಬರೆದಿದ್ದರು. ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟಿಸಿದ ಕನ್ನಡ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದರು.

ಇಂದು ಹಿಂದಿ ದಿವಸ್

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಿಸಲಾಗುತ್ತದೆ. ಹಿಂದಿಯನ್ನು ಭಾರತದ ಭಾರತದ ಅಧಿಕೃತ ಭಾಷೆಯಾಗಿ ಘೋಷಿಸಿದ ನಂತರ ಈ ದಿನಾಚರಣೆಯು ಚಾಲ್ತಿಗೆ ಬಂತು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಿಂದಿ ದಿವಸ್ ಆಚರಣೆ ಅರಂಭಿಸಿದರು.

Published On - 6:47 pm, Wed, 14 September 22