
ನವದೆಹಲಿ, ಸೆಪ್ಟೆಂಬರ್ 2: 2019ರ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿ, ಪಾಕಿಸ್ತಾನದ ಗಡಿಯೊಳಗೆ ಇಳಿದು ಶೌರ್ಯ ಮೆರೆದಿದ್ದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ತಮ್ಮ ಸೇವಾ ಅವಧಿ ಮುಗಿಯುವ ಮುನ್ನವೇ ವಾಯುಪಡೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಅವರು ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆಗೊಳ್ಳಲು ವಾಯುಪಡೆಯ ಸೇವೆಯಿಂದ ನಿವೃತ್ತರಾಗಿದ್ದಾರೆ.
ಅಭಿನಂದನ್ ವರ್ಧಮಾನ್ ಯಾರು?:
2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಬಾಲಾಕೋಟ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಫೆಬ್ರವರಿ 27ರಂದು ಪಾಕಿಸ್ತಾನದ ಯುದ್ಧವಿಮಾನಗಳು ಭಾರತದ ಗಡಿ ಪ್ರವೇಶಿಸಿದಾಗ, ಅಭಿನಂದನ್ ತಮ್ಮ ‘ಮಿಗ್-21 ಬೈಸನ್’ ವಿಮಾನದ ಮೂಲಕ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು.
ಇದನ್ನೂ ಓದಿ: 2019ರಲ್ಲಿ ವಿಂಗ್ ಕಮಾಂಡರ್ ಅಭಿನಂದನ್ರನ್ನು ಸೆರೆ ಹಿಡಿದಿದ್ದ ಪಾಕ್ ಮೇಜರ್ ಮೊಯಿಜ್ ಸಾವು
ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಅಭಿನಂದನ್:
ಯುದ್ಧದ ಸಮಯದಲ್ಲಿ ಅಭಿನಂದನ್ ಅವರ ವಿಮಾನಕ್ಕೂ ಹಾನಿಯಾದ ಹಿನ್ನೆಲೆಯಲ್ಲಿ, ಅಭಿನಂದನ್ ಪ್ಯಾರಾಶೂಟ್ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ನೆಲಕ್ಕೆ ಇಳಿದು ಪಾಕಿಸ್ತಾನಿ ಸೇನೆಯ ವಶವಾಗಿದ್ದರು. ಶತ್ರುಗಳ ವಶದಲ್ಲಿದ್ದಾಗಲೂ ಅವರು ತೋರಿಸಿದ ಧೈರ್ಯ ಮತ್ತು ಸ್ಥಿರತೆ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಮಾರ್ಚ್ 2ರಂದು ವಾಘಾ ಗಡಿಯ ಮೂಲಕ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತು.
ಅಪಾರ ಶೌರ್ಯ ಮತ್ತು ದೇಶಭಕ್ತಿಯನ್ನು ಪ್ರದರ್ಶಿಸಿದ್ದಕ್ಕಾಗಿ ಅಭಿನಂದನ್ ವರ್ಧಮಾನ್ ಅವರಿಗೆ ಭಾರತದ ಮೂರನೇ ಅತ್ಯುನ್ನತ ಮಿಲಿಟರಿ ಗೌರವವಾದ ‘ವೀರ್ ಚಕ್ರ’ ನೀಡಿ ಗೌರವಿಸಲಾಗಿತ್ತು. 2004ರ ಜೂನ್ 19ರಂದು ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ನಿಯೋಜನೆಗೊಂಡಿದ್ದ ಅಭಿನಂದನ್, ಡಿಸೆಂಬರ್ 2021ರಲ್ಲಿ ‘ವಲ್ವಿಂಗ್ ಕಮಾಂಡರ್’ ಹುದ್ದೆಯಿಂದ ‘ಗ್ರೂಪ್ ಕ್ಯಾಪ್ಟನ್’ ಆಗಿ ಬಡ್ತಿ ಪಡೆದಿದ್ದರು. 22 ವರ್ಷಗಳಿಗೂ ಹೆಚ್ಚು ಕಾಲ ದೇಶಕ್ಕೆ ಸಲ್ಲಿಸಿದ ಸೇವೆಗೆ ವಿದಾಯ ಹೇಳಿ ಅವರು ಕಮರ್ಷಿಯಲ್ ಪೈಲಟ್ ಆಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ