ಸಂತ್ರಸ್ತೆಯ ಕಾಲುಗಳನ್ನು ಒಂದಾಗಿಸಿ, ತೊಡೆಗಳ ಸಂಧಿಯಲ್ಲಿ ನಡೆಸುವ ಲೈಂಗಿಕ ಕ್ರಿಯೆಯೂ ಅತ್ಯಾಚಾರ: ಕೇರಳ ಹೈಕೋರ್ಟ್​ ಮಹತ್ವದ ತೀರ್ಪು

ಪ್ರಸ್ತುತ ಪ್ರಕರಣದಲ್ಲಿ, ಸಂತ್ರಸ್ತೆಯ ವಯಸ್ಸು ನಿಖರವಾಗಿ ಎಷ್ಟು ಎಂಬುದನ್ನು ಕೋರ್ಟ್​ಗೆ ತಿಳಿಸಲು ಪ್ರಾಸಿಕ್ಯೂಷನ್​ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಹೈಕೋರ್ಟ್ ತೆಗೆದುಹಾಕಿದೆ.

ಸಂತ್ರಸ್ತೆಯ ಕಾಲುಗಳನ್ನು ಒಂದಾಗಿಸಿ, ತೊಡೆಗಳ ಸಂಧಿಯಲ್ಲಿ ನಡೆಸುವ ಲೈಂಗಿಕ ಕ್ರಿಯೆಯೂ ಅತ್ಯಾಚಾರ: ಕೇರಳ ಹೈಕೋರ್ಟ್​ ಮಹತ್ವದ ತೀರ್ಪು
ಸಾಂಕೇತಿಕ ಚಿತ್ರ
Edited By:

Updated on: Aug 05, 2021 | 5:10 PM

ಅತ್ಯಾಚಾರಕ್ಕೆ ಸಂಬಂಧಪಟ್ಟು ಇರುವ ಕಾನೂನಿನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಒಂದು ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್ (Kerala High court)​ ನೀಡಿದೆ. ಸಂತ್ರಸ್ತೆಯೊಂದಿಗೆ ಆರೋಪಿ ಸಂಭೋಗ ನಡೆಸಿದರಷ್ಟೇ ಅತ್ಯಾಚಾರ ಎನ್ನಿಸಿಕೊಳ್ಳುವುದಿಲ್ಲ. ಆರೋಪಿ ತನ್ನ ಶಿಶ್ನವನ್ನು ಆಕೆಯ ತೊಡೆಗಳ ಸಂಧಿಯಲ್ಲಿ ತಾಗಿಸಿ ಉಜ್ಜುವ ಮೂಲಕ ನಡೆಸುವ ಲೈಂಗಿಕ ಕ್ರಿಯೆಯೂ ಅತ್ಯಾಚಾರವೇ ಆಗಿರುತ್ತದೆ ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ. ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪದಡಿ ಬಂಧಿತನಾದ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಈ ತೀರ್ಪು ನೀಡಿದೆ.

ಅಪ್ರಾಪ್ತೆಯನ್ನು ರೇಪ್​ ಮಾಡಿದ್ದ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆತ ತನ್ನ ವಿರುದ್ಧದ ದೂರನ್ನು ಮರುಪರಿಶೀಲನೆ ಮಾಡುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ನಾನು ಆಕೆಯೊಂದಿಗೆ ಸಂಭೋಗ ನಡೆಸಿಲ್ಲ. ಬದಲಾಗಿ ಎರಡೂ ಕಾಲುಗಳನ್ನು ಒಟ್ಟಾಗಿಸಿ, ತೊಡೆಗಳ ಸಂಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದೆ. ಇದೂ ಕೂಡ ಅತ್ಯಾಚಾರ ಎನ್ನಿಸಿಕೊಳ್ಳುತ್ತದೆಯೇ ಎಂಬುದನ್ನು ಮರುಪರಿಶೀಲನೆ ಮಾಡುವಂತೆ ತನ್ನ ಮನವಿಯಲ್ಲಿ ಉಲ್ಲೇಖಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಕೆ.ವಿನೋದ್​ ಚಂದ್ರನ್​ ಮತ್ತು ನ್ಯಾಯಾಧೀಶ ಜಿಯಾದ್​ ರೆಹ್ಮಾನ್​ ಅವರನ್ನೊಳಗೊಂಡ ಪೀಠ ಹೀಗೆ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ ಪ್ರಕಾರ, ಆರೋಪಿ ಸಂತ್ರಸ್ತೆಯ ತೊಡೆಗಳ ಮೇಲೆ ಶಿಶ್ನವನ್ನು ಉಜ್ಜುವುದು ಒಂದು ಅಸಹಜ ಲೈಂಗಿಕ ಕ್ರಿಯೆಯೇ ಆಗಿದೆ. ಸಂಭೋಗಕ್ಕೆ ಬಲವಂತವಾಗಿ ಪ್ರಯತ್ನ ಮಾಡುವುದೂ ಅತ್ಯಾಚಾರವೇ ಆಗಿದೆ. ಹೀಗೆಲ್ಲ ಮಾಡುವುದರಿಂದಲೂ ಸಂಪೂರ್ಣ ಲೈಂಗಿಕ ಕ್ರಿಯೆ ನಡೆಸಿದಷ್ಟೇ ಸುಖವನ್ನು ಆರೋಪಿ ಪಡೆಯುತ್ತಾನೆ. ಹಾಗಾಗಿ ಇದು ಅಪರಾಧವೇ ಆಗಿದೆ ಎಂದು ನ್ಯಾಯಪೀಠ ವಿವರಿಸಿದೆ.

ಪ್ರಸ್ತುತ ಪ್ರಕರಣದಲ್ಲಿ, ಸಂತ್ರಸ್ತೆಯ ವಯಸ್ಸು ನಿಖರವಾಗಿ ಎಷ್ಟು ಎಂಬುದನ್ನು ಕೋರ್ಟ್​ಗೆ ತಿಳಿಸಲು ಪ್ರಾಸಿಕ್ಯೂಷನ್​ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಹೈಕೋರ್ಟ್ ತೆಗೆದುಹಾಕಿದೆ. ಆದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಅದು ಅತ್ಯಾಚಾರ ಎಂದೇ ಹೇಳಿ, ಜೀವಾವಧಿ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಟೀ ಶರ್ಟ್, ಬರ್ಮುದಾ ಧರಿಸಿ ಮಧ್ಯರಾತ್ರಿ ಠಾಣೆಗೆ ಬಂದ ಪೊಲೀಸ್ ವರಿಷ್ಠಾಧಿಕಾರಿ; ಗುರುತು ತಿಳಿಯದೇ ಸಿಬ್ಬಂದಿ ತಬ್ಬಿಬ್ಬು

ಮಸಾಲೆ ದೋಸೆ ಬೊಂಬಾಟ್ ಗುರು ಎಂದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್

Web contact

TV9 Kannada

Read More
Follow Us