ಮುಂಗಾರು ಆಗಮನಕ್ಕೆ ದಿನಗಣನೆ: ಜೂನ್ 4 ರಂದು ಕೇರಳ ಪ್ರವೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ

Monsoon Rain 2026: ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ನೈಋತ್ಯ ಮುಂಗಾರು ಜೂನ್ 4 ರಂದು ಕೇರಳ ಪ್ರವೇಶಿಸಲಿದೆ. ಇದು ಮುಂದಿನ 6-7 ದಿನಗಳಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ ತರಲಿದೆ. ಜುಲೈ ವೇಳೆಗೆ ಇಡೀ ಭಾರತವನ್ನು ಆವರಿಸಿ, ಉತ್ತರ ಭಾರತದ ಬಿಸಿಲ ಬೇಗೆಗೆ ಮುಕ್ತಿ ನೀಡಲಿದೆ. ರೈತರು ಬಿತ್ತನೆಗೆ ಸಿದ್ಧರಾಗಲು ಇದು ಸಕಾಲ.

ಮುಂಗಾರು ಆಗಮನಕ್ಕೆ ದಿನಗಣನೆ: ಜೂನ್ 4 ರಂದು ಕೇರಳ ಪ್ರವೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ
ಮಳೆ
Image Credit source: PTI

Updated on: Jun 03, 2026 | 10:54 AM

ನವದೆಹಲಿ, ಜೂನ್ 03: ದೇಶಾದ್ಯಂತ ಮಳೆ(Rain)ಯ ಕಣ್ಣಾ ಮುಚ್ಚಾಲೆ ಶುರುವಾಗಿದೆ. ಕೆಲವೆಡೆ ಮಳೆ ವಿಪರೀತವಾಗಿದ್ದರೆ ಇನ್ನೂ ಕೆಲವೆಡೆ ಒಮ್ಮೆಯೂ ಮಳೆಯೇ ಆಗಿಲ್ಲ.ಬಿಸಿಲ ಬೇಗೆಯಿಂದ ಕಂಗಾಲಾಗಿರುವ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ತಂಪು ಸುದ್ದಿ ನೀಡಿದೆ. ನೈಋತ್ಯ  ಮುಂಗಾರು ಜೂನ್ 4 ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಾರು ಆರಂಭದ ಬೆನ್ನಲ್ಲೇ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂದಿನ 6 ರಿಂದ 7 ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಕೇರಳ ತಲುಪಬೇಕಿದ್ದ ಮುಂಗಾರು ಈ ಬಾರಿ ಸಣ್ಣ ಬದಲಾವಣೆಗಳನ್ನು ಕಂಡಿದೆ. ಹವಾಮಾನ ಇಲಾಖೆಯು ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತದೆ.

ಸದ್ಯ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ದಟ್ಟವಾದ ಮೋಡಗಳು ಕವಿದಿದ್ದರೂ, ಅರಬ್ಬಿ ಸಮುದ್ರದ ಮೇಲೆ ಬೀಸಬೇಕಾದ ಪಶ್ಚಿಮ ಮಾರುತಗಳ (Westerly winds) ವೇಗ ಇನ್ನು ಅಗತ್ಯ ಮಟ್ಟವನ್ನು ತಲುಪಿಲ್ಲ. ಈ ತಾಂತ್ರಿಕ ಕಾರಣಗಳಿಂದಾಗಿ ಆರಂಭದ ದಿನಾಂಕವನ್ನು ಮೇ 26 ರಿಂದ ಜೂನ್ 4 ಕ್ಕೆ ಪರಿಷ್ಕರಿಸಲಾಗಿದ್ದರೂ, ಜೂನ್ 8 ರೊಳಗಿನ ಆಗಮನವನ್ನು ಹವಾಮಾನ ತಜ್ಞರು ‘ಸಾಮಾನ್ಯ ಅವಧಿ’ ಎಂದೇ ಪರಿಗಣಿಸುತ್ತಾರೆ.

ಪೋಸ್ಟ್

ಮುಂಗಾರು ಪ್ರವೇಶದ ಪ್ರಭಾವದಿಂದಾಗಿ ಕೇರಳದ ಹಲವು ಜಿಲ್ಲೆಗಳಿಗೆ ಈಗಾಗಲೇ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಜೂನ್ 7 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.

ಮತ್ತಷ್ಟು ಓದಿ:

ಜೂನ್ 4 ರಂದು ಕೇರಳ ಪ್ರವೇಶಿಸಲಿರುವ ಈ ಮಾರುತಗಳು ಕ್ರಮೇಣ ದೇಶದ ಇತರೆ ಭಾಗಗಳಿಗೆ ವ್ಯಾಪಿಸಲಿದ್ದು, ಜುಲೈ ಮೊದಲ ವಾರದ ವೇಳೆಗೆ ಇಡೀ ಭಾರತವನ್ನು ಆವರಿಸಲಿವೆ. ಇದರಿಂದಾಗಿ ಪ್ರಸ್ತುತ 45 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ಹೊಂದಿರುವ ಉತ್ತರ ಭಾರತದ ರಾಜ್ಯಗಳಿಗೂ ಶೀಘ್ರದಲ್ಲೇ ಬಿಸಿಲ ಬೇಗೆಯಿಂದ ಮುಕ್ತಿ ಸಿಗಲಿದೆ.

ಹವಾಮಾನದ ಬದಲಾವಣೆಗಳ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಸಾರ್ವಜನಿಕರು ಸ್ಥಳೀಯ ಹವಾಮಾನ ವರದಿಗಳನ್ನು ಗಮನಿಸಿ ಮುಂಜಾಗ್ರತೆ ವಹಿಸುವಂತೆ ಐಎಂಡಿ ತಿಳಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us