ಮ್ಯಾನ್ಮಾರ್‌ನೊಂದಿಗೆ ಭಾರತದ ಭೂಪ್ರದೇಶ ವಿನಿಮಯದ ಚರ್ಚೆ; ವಿದೇಶಾಂಗ ಸಚಿವಾಲಯ ಮಾಹಿತಿ

ದಶಕಗಳಿಂದ ಇತ್ಯರ್ಥವಾಗದೆ ಉಳಿದಿರುವ ಗಡಿ ರೇಖೆಯ ಸಮಸ್ಯೆಯನ್ನು ಬಗೆಹರಿಸಲು ಮಣಿಪುರ ಗಡಿಯಲ್ಲಿ ಸಣ್ಣ ಪ್ರಮಾಣದ ಭೂಪ್ರದೇಶ ವಿನಿಮಯ ಮಾಡಿಕೊಳ್ಳುವ ಕುರಿತು ಭಾರತ ಹಾಗೂ ಮ್ಯಾನ್ಮಾರ್ ಮಾತುಕತೆ ನಡೆಸುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಮಂಗಳವಾರ ಇದನ್ನು ದೃಢಪಡಿಸಿದೆ. ಈ ಕುರಿತು ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಗಡಿಯ ಇತ್ಯರ್ಥವಾಗದ ಭಾಗಗಳ ಕುರಿತು ಚರ್ಚೆಗಳು ಮುಂದುವರಿದಿವೆ ಎಂದಿದ್ದಾರೆ. ಆದರೆ ಭೂಮಿ ವಿನಿಮಯದ ವರದಿಗಳನ್ನು ನೇರವಾಗಿ ದೃಢೀಕರಿಸಲು ಅವರು ನಿರಾಕರಿಸಿದ್ದಾರೆ.

ಮ್ಯಾನ್ಮಾರ್‌ನೊಂದಿಗೆ ಭಾರತದ ಭೂಪ್ರದೇಶ ವಿನಿಮಯದ ಚರ್ಚೆ; ವಿದೇಶಾಂಗ ಸಚಿವಾಲಯ ಮಾಹಿತಿ
Jaiswal
Image Credit source: PTI

Updated on: Aug 05, 2026 | 7:20 PM

ನವದೆಹಲಿ, ಆಗಸ್ಟ್ 5: ಮಣಿಪುರದ ಗಡಿ ಭಾಗದಲ್ಲಿ ದಶಕಗಳಿಂದ ಇತ್ಯರ್ಥವಾಗದೆ ಉಳಿದಿರುವ ಗಡಿ ರೇಖೆಯನ್ನು ಇತ್ಯರ್ಥಪಡಿಸಲು ಭಾರತ ಮತ್ತು ಮ್ಯಾನ್ಮಾರ್ ಭೂಪ್ರದೇಶ ವಿನಿಮಯದ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ ಎನ್ನಲಾಗಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal), “ಗಡಿಯಲ್ಲಿ ಇನ್ನೂ ಇತ್ಯರ್ಥವಾಗದ ಕೆಲವು ಪ್ರದೇಶಗಳಿವೆ. ಆ ವಲಯಗಳ ಕುರಿತು ಚರ್ಚೆಗಳು ಪ್ರಸ್ತುತ ನಡೆಯುತ್ತಿವೆ” ಎಂದು ಖಚಿತಪಡಿಸಿದ್ದಾರೆ.

ಮಣಿಪುರದ ಗಡಿಯಲ್ಲಿ ಮ್ಯಾನ್ಮಾರ್‌ನೊಂದಿಗೆ ಭೂಮಿ ವಿನಿಮಯ ಮಾಡಿಕೊಳ್ಳಲು ಭಾರತ ಯೋಚಿಸುತ್ತಿದೆಯೇ? ಎಂಬ ಪ್ರಶ್ನೆಗೆ ರಣಧೀರ್ ಜೈಸ್ವಾಲ್ ನೇರವಾಗಿ ಹೌದು ಎಂದು ದೃಢಪಡಿಸದಿದ್ದರೂ, ಗಡಿಯ ಇತ್ಯರ್ಥವಾಗದ ಭಾಗಗಳನ್ನು ಬಗೆಹರಿಸಲು ದ್ವಿಪಕ್ಷೀಯ ಚರ್ಚೆಗಳು ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಅಮೆರಿಕ ಮೂಲದ ದಿ ಡಿಪ್ಲೋಮ್ಯಾಟ್ ನಿಯತಕಾಲಿಕೆಯು ನವದೆಹಲಿ ಇಂತಹ ಪ್ರಸ್ತಾವನೆಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಎಂದು ವರದಿ ಮಾಡಿದ ಬೆನ್ನಲ್ಲೇ ಜೈಸ್ವಾಲ್ ಅವರಿಂದ ಈ ಹೇಳಿಕೆ ಬಂದಿದೆ.

ಇದನ್ನೂ ಓದಿ: ಮ್ಯಾನ್ಮಾರ್‌ನಿಂದ ಥೈಲ್ಯಾಂಡ್‌ಗೆ ಬಂದಿಳಿದ ಬಳಿಕ ಬಂಧಿತರಾಗಿರುವ ಭಾರತೀಯ ಪ್ರಜೆಗಳನ್ನು ವಾಪಾಸ್ ಕರೆತರಲು ಪ್ರಯತ್ನ

ಭಾರತ ಮತ್ತು ಮ್ಯಾನ್ಮಾರ್ ಗಡಿ ಬಿಕ್ಕಟ್ಟು:

ಭಾರತ ಮತ್ತು ಮ್ಯಾನ್ಮಾರ್ ನಡುವೆ ಒಟ್ಟು 1,643 ಕಿಲೋಮೀಟರ್ ಉದ್ದದ ಅಂತಾರಾಷ್ಟ್ರೀಯ ಗಡಿಯಿದೆ. ಇದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಗಡಿಯ ಹೆಚ್ಚಿನ ಭಾಗವು ದಟ್ಟವಾದ ಕಾಡು ಮತ್ತು ಪರ್ವತಗಳಿಂದ ಕೂಡಿದ್ದು, ಗಡಿಯ ಎರಡೂ ಬದಿಗಳಲ್ಲಿ ಒಂದೇ ಜನಾಂಗೀಯ ಸಮುದಾಯಗಳು ವಾಸಿಸುತ್ತಿವೆ. ಭಾರತದ ಗೃಹ ಸಚಿವಾಲಯದ ಪ್ರಕಾರ, ಸುಮಾರು 1,472 ಕಿಮೀ ಗಡಿಯನ್ನು ಗಡಿ ಕಂಬಗಳ ಮೂಲಕ ಗುರುತಿಸಲಾಗಿದೆ. ಆದರೆ, ಸುಮಾರು 171 ಕಿಮೀ ಭಾಗವು ಇನ್ನೂ ಇತ್ಯರ್ಥವಾಗದೆ ಉಳಿದಿದೆ. ಇವು ಮುಖ್ಯವಾಗಿ ಅರುಣಾಚಲ ಪ್ರದೇಶದ ಲೋಹಿತ್ ವಲಯ ಮತ್ತು ಮಣಿಪುರದ ಕಬಾವ್ ಕಣಿವೆಯಲ್ಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us