ಚೀನಾ ಗಡಿ ಭಾಗದಲ್ಲಿ 10,000 ಯೋಧರ ಪ್ರಬಲ ಪಡೆ ನಿಯೋಜಿಸಿದ ಭಾರತೀಯ ಸೇನೆ; ಶಾಂತಿಕಾಲದಲ್ಲೂ ಯುದ್ಧಕ್ಕೆ ಸನ್ನದ್ಧ ಸ್ಥಿತಿ ಎಂದ ರಾಜನಾಥ್

|

Updated on: Mar 07, 2024 | 5:24 PM

India-China Conflict: ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಸೂಕ್ಷ್ಮ ಎನಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ ಇನ್ನಷ್ಟು ಸೈನಿಕರನ್ನು ನಿಯೋಜಿಸಿದೆ. ಈಗಾಗಲೇ ಇರುವ 9,000 ಸೈನಿಕರ ಜೊತೆಗೆ ಪಶ್ಚಿಮ ಗಡಿಭಾಗದಲ್ಲಿದ್ದ 10,000 ಸೈನಿಕರ ಪ್ರಬಲ ಪಡೆಗಳನ್ನು ಚೀನಾ ಗಡಿಭಾಗಕ್ಕೆ ಕರೆತರಲಾಗಿದೆ. ಇದರೊಂದಿಗೆ ಚೀನಾ ಗಡಿಭಾಗವನ್ನು ಭಾರತ ಹೆಚ್ಚು ಭದ್ರ ಮಾಡಿಕೊಳ್ಳುತ್ತಿದೆ.

ಚೀನಾ ಗಡಿ ಭಾಗದಲ್ಲಿ 10,000 ಯೋಧರ ಪ್ರಬಲ ಪಡೆ ನಿಯೋಜಿಸಿದ ಭಾರತೀಯ ಸೇನೆ; ಶಾಂತಿಕಾಲದಲ್ಲೂ ಯುದ್ಧಕ್ಕೆ ಸನ್ನದ್ಧ ಸ್ಥಿತಿ ಎಂದ ರಾಜನಾಥ್
ಭಾರತೀಯ ಸೇನೆ
Follow us on

ನವದೆಹಲಿ, ಮಾರ್ಚ್ 7: ಚೀನಾದ ಗಡಿಭಾಗದಲ್ಲಿ (India China border) ಹೆಚ್ಚು ಅಪಾಯ ಇರುವುದನ್ನು ಮನಗಂಡು ಮುನ್ನೆಚ್ಚರಿಕೆಯಾಗಿ ಭಾರತ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಚೀನಾ ಗಡಿಭಾಗದಲ್ಲಿ ತನ್ನ ಭದ್ರತೆಯನ್ನು ಬಲಪಡಿಸಲು ಭಾರತೀಯ ಸೇನೆ ಬಹಳಷ್ಟು ಹೆಚ್ಚುವರಿ ಸೈನಿಕರ ಪ್ರಬಲ ಪಡೆಯನ್ನು ನಿಯೋಜಿಸಿದೆ. ವರದಿಗಳ ಪ್ರಕಾರ 10,000 ಸೈನಿಕರ ದೊಡ್ಡ ಪಡೆಯೇ ಚೀನಾ ಗಡಿ ಕಾಯಲು ಹೋಗಿದೆ. ಪಶ್ಚಿಮ ಭಾಗದ ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜನೆಯಾಗಿದ್ದ ಪ್ರಬಲ ಪಡೆಗಳೆನ್ನಲಾಗಿದೆ. ಭಾರತ ಮತ್ತು ಚೀನಾ ನಡುವೆ ಸೂಕ್ಷ್ಮ ಎನಿಸಿರುವ ಗಡಿಭಾಗದಲ್ಲಿ ಇವರು ರಕ್ಷಣಾ ಕಾರ್ಯ ನೋಡಿಕೊಳ್ಳಲಿದ್ದಾರೆ. ಈಗಾಗಲೇ ಈ ಜಾಗಗಳಲ್ಲಿ 9,000 ಸೈನಿಕರಿದ್ದಾರೆ. ಈಗ ಒಟ್ಟಾರೆ ಹತ್ತಿರಹತ್ತಿರ 20,000 ಸೈನಿಕರ ಪ್ರಬಲ ಸೇನಾ ಪಡೆಯೇ ಭಾರತ ಚೀನಾ ಸೂಕ್ಷ್ಮ ಗಡಿಭಾಗಗಳಲ್ಲಿ ನಿಯೋಜನೆ ಆಗಲಿದೆ. ಚೀನಾದ ಟೆಬೆಟ್ ಪ್ರಾಂತ್ಯ ಮತ್ತು ಭಾರತದ ಉತ್ತರಾಖಂಡ್, ಹಿಮಾಚಲಪ್ರದೇಶವನ್ನು ಪ್ರತ್ಯೇಕಿಸುವ ಗಡಿಭಾಗದಲ್ಲಿ ಈ ಸೈನಿಕರ ಪಹರೆ ಇರಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

2020ರಲ್ಲಿ ಗಾಲ್ವನ್ ಕಣಿವೆ ಸಂಘರ್ಷ ಕಲಿಸಿದ ಪಾಠ

2020ರಲ್ಲಿ ಲಡಾಖ್ ಗಡಿಭಾಗದ ಗಾಲ್ವನ್ ಗಣಿವೆಯಲ್ಲಿ ಚೀನೀ ಅತಿಕ್ರಮಣ ತಡೆಯಲು ಭಾರತೀಯ ಸೈನಿಕರು ಯತ್ನಿಸಿದ್ದರು. ಆಗ ಎರಡೂ ಕಡೆ ತೀವ್ರ ಸಂಘರ್ಷವಾಗಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಬಲಿಯಾಗಿದ್ದರು. ಅಸಹಾಯಕ ಸ್ಥಿತಿಯಲ್ಲೂ ಭಾರತೀಯ ಸೈನಿಕರು ವೀರೋಚಿತವಾಗಿ ಪ್ರತಿ ದಾಳಿ ಮಾಡಿ ಹಲವರನ್ನು ಸಂಹರಿಸಿದ್ದೂ ಹೌದು. ಗಾಲ್ವನ್ ರೀತಿಯಲ್ಲಿ ಆಗ ಬೇರೆ ಬೇರೆ ಕಡೆ ಸಂಘರ್ಷಗಳಾಗಿದ್ದವು.

ಆ ಘಟನೆಗಳ ಬಳಿಕ ಭಾರತೀಯ ಸರ್ಕಾರ ಮತ್ತು ಸೇನೆ ಹೆಚ್ಚು ಜಾಗೃತಗೊಂಡು, ಗಡಿಭಾಗದಲ್ಲಿ ಮೂಲಸೌಕರ್ಯ ಹೆಚ್ಚಿಸುತ್ತಿವೆ. ಕ್ಷಿಪಣಿಗಳು, ಯುದ್ಧವಿಮಾನಗಳನ್ನು ಆಯಕಟ್ಟಿನ ಜಾಗದಲ್ಲಿ ನೆಲೆಗೊಳಿಸಲಾಗಿದೆ. ಬಹಳಷ್ಟು ಸೇನಾ ಪಡೆಗಳನ್ನು ಗಡಿಭಾಗದ ಸಮೀಪ ನಿಯೋಜಿಸಲಾಗಿದೆ.

ಇದನ್ನೂ ಓದಿ: ಇ200 ಪ್ಲೇನ್; ಈ ವರ್ಷದೊಳಗೆ ಭಾರತದಲ್ಲಿ ನೋಡುತ್ತೀರಿ ಫ್ಲೈಯಿಂಗ್ ಟ್ಯಾಕ್ಸಿ; ರೈಡಿಂಗ್ ಕೂಡ ದುಬಾರಿ ಇಲ್ಲ

2020ರಲ್ಲಿ ನಾವು ಎದುರಿಸಿದಂಥ ಸ್ಥಿತಿ ಮತ್ತೊಮ್ಮೆ ಎದುರಾದೀತೆಂಬ ಸಾಧ್ಯತೆಯೇ ನಮ್ಮನ್ನು ಸದಾ ಕಾಲ ಸಕ್ರಿಯವಾಗಿರಿಸಿದೆ ಎಂದು ಕಳೆದ ತಿಂಗಳು ಭಾರತದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ಹೇಳಿದ್ದರು.

ಶಾಂತಿಕಾಲದಲ್ಲೂ ನಾವು ಯುದ್ಧಸನ್ನದ್ಧ ಸ್ಥಿತಿಯಲ್ಲಿರಬೇಕು: ರಾಜನಾಥ್ ಸಿಂಗ್

ಸದ್ಯ ಯಾವ ಯುದ್ಧ ಸಾಧ್ಯತೆ ಇಲ್ಲ ಎಂದು ನೆಮ್ಮದಿಯಾಗಿ ಇರುವಂತಿಲ್ಲ. ಭಾರತ ಸದಾ ಕಾಲ ಯುದ್ಧಕ್ಕೆ ಸಿದ್ದವಿದ್ದೇ ಇರಬೇಕು. ಶಾಂತಿಕಾಲದಲ್ಲೂ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಇದೇ ವೇಳೆ ರಾಜನಾಥ್ ಸಿಂಗ್ ಹೇಳಿದ್ದಾರೆ.

ಎನ್​ಡಿಟಿವಿ ಆಯೋಜಿಸಿದ ಡಿಫೆನ್ಸ್ ಸಮಿಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವರಾದ ಅವರು, ‘ನೆಲದಿಂದಲೇ ಆಗಲೀ, ಆಗಸದಿಂದಲೇ ಆಗಲೀ, ಅಥವಾ ಸಮುದ್ರದಿಂದಲೇ ಆಗಲೀ ಯಾರಾದರೂ ದಾಳಿ ಮಾಡಿದರೆ ನಮ್ಮ ಪಡೆಗಳು ಸರಿಯಾಗಿಯೇ ಉತ್ತರಿಸುತ್ತವೆ. ನಾವು ಯಾವ ದೇಶದ ಮೇಲೂ ಆಕ್ರಮಣ ಮಾಡಿಲ್ಲ. ಅಥವಾ ಯಾರದೇ ನೆಲವನ್ನೂ ಕಬಳಿಸಿಲ್ಲ. ಆದರೆ, ನಮ್ಮ ಮೇಲೆ ಯಾರಾದರೂ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬಲ್ಲ ಸಾಮರ್ಥ್ಯ ಹೊಂದಿದ್ದೇವೆ,’ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಗುಜರಾತ್ ಪಾಕಿಸ್ತಾನವಲ್ಲ ಎಂದ ದೇವೇಂದ್ರ ಫಡ್ನವಿಸ್​

ಭಾರತಕ್ಕೆ ಈಗ ಹೆಚ್ಚು ಬೆಲೆ ಎಂದ ರಾಜನಾಥ್

ಕಳೆದ 10 ವರ್ಷದಲ್ಲಿ ಭಾರತದ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದಕ್ಕೆ ರಾಜನಾಥ್ ಸಿಂಗ್ ಒಂದು ನಿದರ್ಶನ ನೀಡಿದ್ದಾರೆ. ತಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲೂ ಸಚಿವನಾಗಿದ್ದೆ. ಈಗಲೂ ಸಚಿವನಾಗಿದ್ದೇನೆ. ಆಗ ತಾನು ಬೇರೆ ದೇಶಗಳಿಗೆ ಹೋಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡಿದಾಗ ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿರಲಿಲ್ಲ. ಈಗ ನಾವು ಆ ವೇದಿಕೆಗಳಲ್ಲಿ ಮಾತನಾಡಿದರೆ ಇಡೀ ವಿಶ್ವ ಆಲಿಸುತ್ತದೆ. ಈ ರೀತಿ ನಮ್ಮ ಪ್ರಭಾವ ಬೆಳೆದಿದೆ ಎಂದು ಎನ್​ಡಿಟಿವಿ ಡಿಫೆನ್ಸ್ ಸಮಿಟ್​ನಲ್ಲಿ ಗುರುವಾರ ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ