ಸಿಂಧೂ ಜಲ ಒಪ್ಪಂದದ ಬಗ್ಗೆ ನಮ್ಮ ನಿಲುವು ಬದಲಾಗಿಲ್ಲ; ಪಾಕಿಸ್ತಾನದ ಬೆದರಿಕೆಗೆ ಭಾರತ ತಿರುಗೇಟು

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೂ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (IWT) ಅಮಾನತು ಆದೇಶ ಮುಂದುವರಿಯಲಿದೆ ಎಂದು ಭಾರತ ಪುನರುಚ್ಚರಿಸಿದೆ. ಏಪ್ರಿಲ್ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರವು ಈ ಐತಿಹಾಸಿಕ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಭಾರತವು ನೀರನ್ನು ಒಂದು ರಾಜತಾಂತ್ರಿಕ ಆಯುಧವನ್ನಾಗಿ ಬಳಸುತ್ತಿದ್ದು, ಇದು "ಜಲ ಯುದ್ಧಕ್ಕೆ" ಕಾರಣವಾಗಬಹುದು ಎಂದು ಪಾಕಿಸ್ತಾನದ ಸಚಿವರು ಎಚ್ಚರಿಸಿದ್ದರು. ಇದಕ್ಕೆ ಭಾರತ ಪ್ರತಿಕ್ರಿಯೆ ನೀಡಿದೆ.

ಸಿಂಧೂ ಜಲ ಒಪ್ಪಂದದ ಬಗ್ಗೆ ನಮ್ಮ ನಿಲುವು ಬದಲಾಗಿಲ್ಲ; ಪಾಕಿಸ್ತಾನದ ಬೆದರಿಕೆಗೆ ಭಾರತ ತಿರುಗೇಟು
Randhir Jaiswal
Image Credit source: PTI

Updated on: Jul 03, 2026 | 8:30 PM

ಮುಖ್ಯಾಂಶಗಳು

  • ಸಿಂಧೂ ಜಲ ಒಪ್ಪಂದದ ಬಗ್ಗೆ ಪಾಕಿಸ್ತಾನಕ್ಕೆ ಭಾರತ ತಿರುಗೇಟು
  • ಭಯೋತ್ಪಾದನೆ ನಿಲ್ಲಿಸಿ ಎಂದ ಭಾರತ
  • ಪಾಕ್ ಬೆದರಿಕೆಗೆ ಭಾರತ ಉತ್ತರ

ನವದೆಹಲಿ, ಜುಲೈ 3: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (IWT) ಅಡಿಯಲ್ಲಿ ತನಗೆ ಸಿಗಬೇಕಾದ ನೀರಿನ ಪಾಲಿಗೆ ಧಕ್ಕೆ ತರದಂತೆ ಪಾಕಿಸ್ತಾನ (Pakistan) ಭಾರತಕ್ಕೆ ಎಚ್ಚರಿಕೆ ನೀಡಿದ ಕೆಲವೇ ದಿನಗಳ ನಂತರ, ಭಾರತ ಸರ್ಕಾರವು ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪುನರುಚ್ಚರಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಕೊನೆಗಾಣಿಸಲು ಪಾಕಿಸ್ತಾನ ಸೂಕ್ತ ಕ್ರಮಗಳನ್ನು ಕೈಗೊಳ್ಳುವವರೆಗೆ ಈ ಒಪ್ಪಂದವು ಅಮಾನತಿನಲ್ಲಿಯೇ ಇರಲಿದೆ ಎಂದು ಭಾರತ ಪ್ರತಿಪಾದಿಸಿದೆ.

ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಈ ಒಪ್ಪಂದದ ಕುರಿತು ಭಾರತದ ನಿಲುವು ಬದಲಾಗಿಲ್ಲ ಎಂದು ಹೇಳಿದರು. “ಸಿಂಧೂ ಜಲ ಒಪ್ಪಂದದ ಕುರಿತು ಭಾರತದ ನಿಲುವು ಸ್ಥಿರವಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಪ್ರತಿಕ್ರಿಯೆಯಾಗಿ ಸಿಂಧೂ ಜಲ ಒಪ್ಪಂದ (IWT) ಅಮಾನತ್ತಿನಲ್ಲಿದೆ. ಪಾಕಿಸ್ತಾನವು ನಂಬಿಕಸ್ಥ ಹಾಗೂ ಎಂದಿಗೂ ಬದಲಾಗದ ರೀತಿಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ತ್ಯಜಿಸಬೇಕು” ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಜಲ ದಿಗ್ಬಂಧನಕ್ಕೆ ಕಂಗೆಟ್ಟು ಚೀನಾ ಸಹಾಯ ಕೋರಿದ ಪಾಕಿಸ್ತಾನ

ಸಿಂಧೂ ಒಪ್ಪಂದದ ಕುರಿತು ಪಾಕಿಸ್ತಾನದ ಎಚ್ಚರಿಕೆ:

ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯವು ಈ ಪ್ರತಿಕ್ರಿಯೆ ನೀಡಿದೆ. ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಸಿಗಬೇಕಾದ ನೀರಿನ ಪಾಲನ್ನು ಕಸಿದುಕೊಳ್ಳಲು ಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು ಎಂದು ಅವರು ಹೇಳಿದ್ದರು. ಸರ್ಕಾರದ ನಿಲುವನ್ನು ಬೆಂಬಲಿಸಿ ಮಾತನಾಡಿದ್ದ ಪಾಕಿಸ್ತಾನದ ಮಾಹಿತಿ ಸಚಿವ ಅಟಾವುಲ್ಲಾ ತರಾರ್, 1960ರ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯ ಈ ಒಪ್ಪಂದವು ಕಾನೂನುಬದ್ಧವಾಗಿ ಬದ್ಧವಾಗಿದ್ದು, ಇದನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.


ಇದನ್ನೂ ಓದಿ: ಪಾಕಿಸ್ತಾನದ ಬಿಕ್ಕಟ್ಟಿಗೆ ಅಲ್ಲಿನ ಮಿಲಿಟರಿ ಕಾರಣವೇ ವಿನಃ ಭಾರತವಲ್ಲ; ಸಿಂಗಾಪುರದ ಮಾಜಿ ರಾಯಭಾರಿ ವ್ಯಂಗ್ಯ

ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದಕ್ಕೆ ಸುಮಾರು 9 ವರ್ಷಗಳ ಮಾತುಕತೆಯ ನಂತರ 1960ರ ಸೆಪ್ಟೆಂಬರ್ 19ರಂದು ಸಹಿ ಹಾಕಲಾಗಿತ್ತು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಾಚೆಗಿನ ನದಿ ವ್ಯವಸ್ಥೆಯ ಹಂಚಿಕೆ ಮತ್ತು ನಿರ್ವಹಣೆಯನ್ನು ನಿಯಂತ್ರಿಸುತ್ತದೆ. 2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಸರಣಿ ಶಿಕ್ಷಾರ್ಹ ಕ್ರಮಗಳನ್ನು ಘೋಷಿಸಿತ್ತು. ಅವುಗಳಲ್ಲಿ ಪಾಕಿಸ್ತಾನದ ನಿರಂತರ ಗಡಿಯಾಚೆಗಿನ ಭಯೋತ್ಪಾದನೆಯ ಬೆಂಬಲವನ್ನು ಉಲ್ಲೇಖಿಸಿ 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತ್ತಿನಲ್ಲಿಡುವ ನಿರ್ಧಾರವೂ ಒಂದಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us