ಪಾಕಿಸ್ತಾನಕ್ಕೆ ಮೊದಲು ತಿಳಿಸಿದೆವು; ಬಾಲಾಕೋಟ್ ಸ್ಟ್ರೈಕ್ ಹೊಸ ರಹಸ್ಯ ಬಿಚ್ಚಿಟ್ಟ ಪ್ರಧಾನಿ

|

Updated on: Apr 30, 2024 | 11:48 AM

Narendra Modi on Balakot Airstrike incident: 2019ರಲ್ಲಿ ಕಾಶ್ಮೀರದ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಬಾಲಾಕೋಟ್ ಏರ್​ಸ್ಟ್ರೈಕ್ ಘಟನೆಯ ಬಗ್ಗೆ ನರೇಂದ್ರ ಮೋದಿ ಹೊಸ ರಹಸ್ಯವೊಂದನ್ನು ತೆರೆದಿಟ್ಟಿದ್ದಾರೆ. ಬಾಲಾಕೋಟ್ ದಾಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಮೊದಲು ಪಾಕಿಸ್ತಾನಕ್ಕೆ ತಿಳಿಸಲಾಗಿತ್ತು. ಏರ್ ಸ್ಟ್ರೈಕ್​ನಲ್ಲಿ ಎಷ್ಟು ಹಾನಿಯಾಗಿದೆ, ಎಷ್ಟು ಮಂದಿ ಸತ್ತಿದ್ದಾರೆ ಇತ್ಯಾದಿ ಮಾಹಿತಿಯನ್ನು ಪಾಕಿಸ್ತಾನಕ್ಕೆ ಮೊದಲು ತಿಳಿಸಲಾಯಿತು ಎಂದು ಮೋದಿ ಹೇಳಿದ್ದಾರೆ. ಬಾಗಲಕೋಟೆಯ ನವನಗರದಲ್ಲಿ ಏಪ್ರಿಲ್ 29ರಂದು ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪಾಕಿಸ್ತಾನಕ್ಕೆ ಮೊದಲು ತಿಳಿಸಿದೆವು; ಬಾಲಾಕೋಟ್ ಸ್ಟ್ರೈಕ್ ಹೊಸ ರಹಸ್ಯ ಬಿಚ್ಚಿಟ್ಟ ಪ್ರಧಾನಿ
ನರೇಂದ್ರ ಮೋದಿ
Follow us on

ಬಾಗಲಕೋಟೆ, ಏಪ್ರಿಲ್ 30: ಐದು ವರ್ಷದ ಹಿಂದೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತದ ವಾಯುದಾಳಿ (Balakot airstrike) ನಡೆದ ಘಟನೆಯ ಬಗ್ಗೆ ನರೇಂದ್ರ ಮೋದಿ ಹೊಸ ರಹಸ್ಯ ವಿಚಾರ ಹೊರಗೆಡವಿದ್ದಾರೆ. 2019ರ ಬಾಲಾಕೋಟ್ ಏರ್​ಸ್ಟ್ರೈಕ್ ಆದ ಬಳಿಕ ಆ ಘಟನೆ ಬಗ್ಗೆ ಪ್ರಪಂಚಕ್ಕೆ ತಿಳಿಸುವ ಮೊದಲು ಪಾಕಿಸ್ತಾನಕ್ಕೆ ಮಾಹಿತಿ ನೀಡಿದೆವು ಎಂದು ಹೇಳಿದ್ದಾರೆ ನರೇಂದ್ರ ಮೋದಿ. ನಿನ್ನೆ ಸೋಮವಾರ ಬಾಗಲಕೋಟೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಎದುರಾಳಿಯ ಎದೆಗೆ ಎದೆಯೊಡ್ಡಿ ಹೋರಾಡುವುದು ತಮ್ಮ ಜಾಯಮಾನ ಎಂದಿದ್ದಾರೆ.

ಬಾಲಾಕೋಟ್ ಏರ್​ಸ್ಟ್ರೈಕ್ ಆದ ಬಳಿಕ ಪಾಕಿಸ್ತಾನಕ್ಕೆ ಮಾಹಿತಿ ನೀಡಲು ಪ್ರಧಾನಿ ಮೋದಿ ಯತ್ನಿಸಿದ್ದರಂತೆ. ಅತ್ತಲಿಂದ ಯಾರೂ ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ. ಇತ್ತ ಬಾಲಾಕೋಟ್ ದಾಳಿ ಬಗ್ಗೆ ಭಾರತೀಯ ಸೇನಾ ಪಡೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಸಮಯ ನಿಗದಿಯಾಗಿತ್ತು. ಆದರೆ, ಪಾಕಿಸ್ತಾನಕ್ಕೆ ಮಾಹಿತಿ ನೀಡದೇ ಮಾಧ್ಯಮಕ್ಕೆ ಬಹಿರಂಗಪಡಿಸಬಾರದು ಎಂಬುದು ಮೋದಿ ನಿಲುವಾಗಿತ್ತು. ಹೀಗಾಗಿ, ಮಾಧ್ಯಮ ಸುದ್ದಿಗೋಷ್ಠಿಯನ್ನು ಮುಂದಕ್ಕೆ ಹಾಕಲಾಗಿತ್ತಂತೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ನಿರ್ವಹಿಸುತ್ತಿಲ್ಲ, ವಸೂಲಿ ಗ್ಯಾಂಗ್​ ನಡೆಸುತ್ತಿದ್ದಾರೆ: ಮೋದಿ

‘ಪಾಕಿಸ್ತಾನದ ಕಡೆಯವರನ್ನು ಸಂಪರ್ಕಿಸುವವರೆಗೂ ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ಮುಂದಕ್ಕೆ ಹಾಕಲು ಸೇನಾಪಡೆಗಳಿಗೆ ನಿರ್ದೇಶನ ನೀಡಿದೆ. ಮೋದಿಗೆ ಬಚ್ಚಿಟ್ಟುಕೊಳ್ಳುವುದು, ಹಿಂಬದಿಯಿಂದ ದಾಳಿ ಮಾಡುವುದರಲ್ಲಿ ನಂಬಿಕೆ ಇಲ್ಲ. ಆತ ಬಹಿರಂಗವಾಗಿ ಹೋರಾಡುತ್ತಾನೆ… ಎದುರಾಳಿಯ ಕಣ್ಣಿಗೆ ಕಣ್ಣಿಟ್ಟು ನೋಡುವುದು ಮತ್ತು ಸತ್ಯವನ್ನು ಹೇಳುವುದು ನವಭಾರತದ ನೀತಿ’ ಎಂದು ಬಾಗಲಕೋಟೆಯ ನವನಗರದಲ್ಲಿ ಮೋದಿ ಆರ್ಭಟಿಸಿದ್ದಾರೆ.

2019ರ ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮ ಬಳಿ ಸಿಆರ್​ಪಿಎಫ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ಗಳ ಮೇಲೆ ಪ್ರಬಲ ಬಾಂಬ್ ದಾಳಿ ಆಗಿತ್ತು. ಆ ದುರ್ಘಟನೆಯಲ್ಲಿ 40 ಮಂದಿ ಯೋಧರು ಬಲಿಯಾಗಿದ್ದರು. ಆ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಲು ಭಾರತ ಸೇನೆ ಯೋಜಿಸಿತ್ತು. ಫೆಬ್ರುವರಿ 26ರಂದು ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಭಾರತದ ಫೈಟರ್ ಜೆಟ್​ಗಳು ದಾಳಿ ಮಾಡಿ ಮರಳಿದ್ದವು.

ಇದನ್ನೂ ಓದಿ: ಭಾರತ ಸೂಪರ್​​​ ಪವರ್​​ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ, ಸಂಸತ್ತಿನಲ್ಲಿ ಗುಡುಗಿದ ಪಾಕ್​​​ ನಾಯಕ

ಈ ಅನಿರೀಕ್ಷಿತ ದಾಳಿಗೆ ಸೂಕ್ತವಾಗಿ ಸ್ಪಂದಿಸುವ ಸಮಯಾವಕಾಶ ಪಾಕಿಸ್ತಾನಕ್ಕೆ ಇರಲಿಲ್ಲ. ಅದಾದ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಫೈಟರ್ ಜೆಟ್ ಚಕಮಕಿ ನಡೆಯಿತು. ಈ ವೇಳೆ ಭಾರತದ ಫೈಟರ್ ಪೈಲಟ್ ಅಭಿನಂದನ್ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಭಾಗದಲ್ಲಿ ಇಳಿದು ಶತ್ರುಗಳ ಸೆರೆ ಸಿಕ್ಕರು. ಕೆಲ ದಿನಗಳ ಬಳಿಕ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿ ಮರಳಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Tue, 30 April 24