
ನವದೆಹಲಿ, ಸೆಪ್ಟೆಂಬರ್ 1: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಇಂದು (ಸೋಮವಾರ) ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ ಎಂದು ಎಎನ್ಐ ಮೂಲಗಳು ತಿಳಿಸಿವೆ. ಅವರು ಇಂದು ದಕ್ಷಿಣ ದೆಹಲಿಯ ಚತ್ತರ್ಪುರದಲ್ಲಿರುವ ಖಾಸಗಿ ಫಾರ್ಮ್ಹೌಸ್ಗೆ ಸ್ಥಳಾಂತರಗೊಂಡಿದ್ದಾರೆ. ನಂತರ ಅವರು ಮಾಜಿ ಉಪರಾಷ್ಟ್ರಪತಿಗಳಿಗೆ ಅರ್ಹವಾದ ಟೈಪ್ -8 ಬಂಗಲೆಗೆ ತೆರಳಲಿದ್ದಾರೆ. ಚತ್ತರ್ಪುರದ ಗದೈಪುರ್ ಪ್ರದೇಶದಲ್ಲಿರುವ ಫಾರ್ಮ್ಹೌಸ್ ಐಎನ್ಎಲ್ಡಿ ನಾಯಕ ಅಭಯ್ ಚೌತಲಾ ಅವರಿಗೆ ಸೇರಿದೆ.
ಈಗಾಗಲೇ ಸರ್ಕಾರಿ ನಿವಾಸವನ್ನು ಅವರಿಗೆ ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಅಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಅವರು ಶಿಫ್ಟ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಭಾರತದ ಮಾಜಿ ಉಪರಾಷ್ಟ್ರಪತಿಯಾದ 74 ವರ್ಷದ ಜಗದೀಪ್ ಧನ್ಖರ್ ದೆಹಲಿಯ ಚತ್ತರ್ಪುರದ ಗದೈಪುರ ಪ್ರದೇಶದಲ್ಲಿ ಪ್ರಮುಖ ಜಾಟ್ ನಾಯಕ ಮತ್ತು ಹಿರಿಯ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ನಾಯಕ ಅಭಯ್ ಚೌತಲಾ ಅವರ ಒಡೆತನದ ಫಾರ್ಮ್ಹೌಸ್ಗೆ ಸ್ಥಳಾಂತರಗೊಂಡಿದ್ದಾರೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಜಗದೀಪ್ ಧನಖರ್ ರಾಜೀನಾಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕಾರ
ಜುಲೈ 21ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಾರ್ವಜನಿಕವಾಗಿ ಜಗದೀಪ್ ಧನ್ಖರ್ ಎಲ್ಲೂ ಕಾಣಿಸಿರಲಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿ, ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಈ ಬಗ್ಗೆ ಪ್ರಶ್ನಿಸಿದ್ದರು. ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದ ವರ್ಷ ಏಪ್ರಿಲ್ನಿಂದ ಅವರು ವಾಸಿಸುತ್ತಿದ್ದ ಸಂಸತ್ ಭವನದ ಸಂಕೀರ್ಣದ ಬಳಿಯ ಅಧಿಕೃತ ನಿವಾಸವನ್ನು ಇಂದು ಖಾಲಿ ಮಾಡಿದ್ದಾರೆ.
VIDEO | Delhi: Outgoing Vice President Jagdeep Dhankhar (@VPIndia) leaves from the Vice President’s Enclave.
(Full video available on PTI Videos – https://t.co/n147TvrpG7) pic.twitter.com/CTvQBgbepA
— Press Trust of India (@PTI_News) September 1, 2025
ಅವರು ಈಗ ರಾಷ್ಟ್ರ ರಾಜಧಾನಿಯ ಚತ್ತರ್ಪುರ್ ಎನ್ಕ್ಲೇವ್ನ ಗದೈಪುರ್ ಡಿಎಲ್ಎಫ್ ಫಾರ್ಮ್ಸ್ನಲ್ಲಿರುವ ಚೌತಲಾ ಅವರ ಫಾರ್ಮ್ಹೌಸ್ಗೆ ಸ್ಥಳಾಂತರಗೊಂಡಿದ್ದಾರೆ. ಅವರ ಅನೇಕ ವಸ್ತುಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದ್ದರೂ ಹಲವಾರು ಗೃಹೋಪಯೋಗಿ ವಸ್ತುಗಳು ಉಪರಾಷ್ಟ್ರಪತಿಯವರ ಅಧಿಕೃತ ನಿವಾಸದೊಳಗಿನ ಫ್ಲಾಟ್ನಲ್ಲಿ ಸಂಗ್ರಹವಾಗಿವೆ ಎಂದು ಮೂಲಗಳು ತಿಳಿಸಿವೆ.
ಚೌತಾಲ ಕುಟುಂಬವು ಜಗದೀಪ್ ಧನ್ಖರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ ಅವರು ಬಯಸಿದಷ್ಟು ಕಾಲ ಫಾರ್ಮ್ ಹೌಸ್ನಲ್ಲಿಯೇ ಇರಬಹುದೆಂದು ಚೌತಲ ಅವರ ಆಪ್ತ ಮೂಲಗಳು ತಿಳಿಸಿವೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಅಥವಾ ಮಾಜಿ ಉಪರಾಷ್ಟ್ರಪತಿಗಳಿಗೆ ನೀಡಲಾಗುವ ಟೈಪ್-VIII ಅಧಿಕೃತ ನಿವಾಸವನ್ನು ಪಡೆಯುವವರೆಗೆ ಅವರು ಅಲ್ಲಿಯೇ ಇರುತ್ತಾರೆ.
ಆಗಸ್ಟ್ 1ರಂದು ಭಾರತೀಯ ಚುನಾವಣಾ ಆಯೋಗ (ECI) ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. 15ನೇ ಉಪರಾಷ್ಟ್ರಪತಿ ಆಯ್ಕೆಗೆ ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶವನ್ನು ಘೋಷಿಸಲಾಗುವುದು. ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ