AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vice President Election: ರಾಧಾಕೃಷ್ಣನ್ ವರ್ಸಸ್ ಸುದರ್ಶನ್ ರೆಡ್ಡಿ; ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಗೆಲ್ಲುವ ಸಾಧ್ಯತೆ ಹೆಚ್ಚು?

ಉಪರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಬಣದಿಂದ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿಯ ಬಣದಿಂದ ಬಿ. ಸುದರ್ಶನ್ ರೆಡ್ಡಿ ಸ್ಪರ್ಧಿಸಲಿದ್ದಾರೆ. ಈ ಮೂಲಕ ಸರ್ವಾನುಮತದಿಂದ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಮೋದಿ ಸರ್ಕಾರದ ಪ್ರಯತ್ನಗಳು ವಿಫಲವಾಗಿವೆ. ಹಾಗಾದರೆ, ಸದ್ಯಕ್ಕೆ ಯಾವ ಬಣದ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ? ಎಂಬುದರ ಮಾಹಿತಿ ಇಲ್ಲಿದೆ.

Vice President Election: ರಾಧಾಕೃಷ್ಣನ್ ವರ್ಸಸ್ ಸುದರ್ಶನ್ ರೆಡ್ಡಿ; ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಗೆಲ್ಲುವ ಸಾಧ್ಯತೆ ಹೆಚ್ಚು?
Sudershan Reddy - Cp Radhakrishnan
ಸುಷ್ಮಾ ಚಕ್ರೆ
|

Updated on: Aug 19, 2025 | 7:48 PM

Share

ನವದೆಹಲಿ, ಆಗಸ್ಟ್ 19: ವಿರೋಧ ಪಕ್ಷದವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ (Vice President Election) ಜಂಟಿ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿರೋಧ ಪಕ್ಷದ ಇಂಡಿಯ ಬಣದ ನಡುವೆ ಹೊಸ ಚುನಾವಣಾ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಸುದರ್ಶನ್ ರೆಡ್ಡಿ (Sudershan Reddy) ಅವರು ಹಿರಿಯ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.

ಜುಲೈ 21ರಂದು ಜಗದೀಪ್ ಧಂಖರ್ ಅನಿರೀಕ್ಷಿತ ರಾಜೀನಾಮೆ ನೀಡಿದ್ದರಿಂದ ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ಕ್ಕೆ ನಿಗದಿಯಾಗಿದೆ. ಉಪರಾಷ್ಟ್ರಪತಿ ಹುದ್ದೆಗೆ ಇದುವರೆಗೆ ನಡೆದ ಒಟ್ಟು 16 ಚುನಾವಣೆಗಳಲ್ಲಿ 4 ಅವಿರೋಧವಾಗಿ ಅಭ್ಯರ್ಥಿ ಗೆದ್ದಿದ್ದರು. ಪ್ರತಿಸ್ಪರ್ಧಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡ ಕಾರಣ 3 ಚುನಾವಣೆಗಳಲ್ಲಿ ಅವಿರೋಧ ಆಯ್ಕೆಯಾಗಿದ್ದರೆ ಯಾವುದೇ ಎದುರಾಳಿ ಇಲ್ಲದ ಕಾರಣ ಒಂದು ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದರು.

ಉಪರಾಷ್ಟ್ರಪತಿ ತಮ್ಮ ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ 5 ವರ್ಷಗಳ ಕಾಲ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ, ಸಂವಿಧಾನದ 68(2)ನೇ ವಿಧಿಯು ಉಪರಾಷ್ಟ್ರಪತಿಗಳ ಮರಣ, ರಾಜೀನಾಮೆ ಅಥವಾ ಪದಚ್ಯುತಗೊಳಿಸುವಿಕೆ ಅಥವಾ ಇನ್ಯಾವುದೇ ರೀತಿಯ ಸಂದರ್ಭದಲ್ಲಿ, ಖಾಲಿ ಹುದ್ದೆ ಉಂಟಾದ ನಂತರ ಸಾಧ್ಯವಾದಷ್ಟು ಬೇಗ ಚುನಾವಣೆಯನ್ನು ನಡೆಸಬೇಕು ಎಂದು ಹೇಳುತ್ತದೆ.

ರಾಧಾಕೃಷ್ಣನ್ ವರ್ಸಸ್ ಸುದರ್ಶನ್ ರೆಡ್ಡಿ:

ಎನ್‌ಡಿಎ ಮತ್ತು ಇಂಡಿಯ ಬಣಗಳೆರಡೂ ಉಪರಾಷ್ಟ್ರಪತಿ ಹುದ್ದೆಗೆ ದಕ್ಷಿಣ ಭಾರತದಿಂದ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಸಿ.ಪಿ. ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದರೆ, ಸುದರ್ಶನ್ ರೆಡ್ಡಿ ಆಂಧ್ರಪ್ರದೇಶದವರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಎರಡು ಬಾರಿ ಕೊಯಮತ್ತೂರು ಸಂಸದರಾಗಿರುವ ರಾಧಾಕೃಷ್ಣನ್ ಅವರ ಉಮೇದುವಾರಿಕೆಯನ್ನು ಸ್ವಾಗತಿಸಿದ್ದಾರೆ. ಆದರೆ, ಇದೀಗ ವಿಪಕ್ಷಗಳು ಆಂಧ್ರದವರೇ ಆದ ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಿರುವುದರಿಂದ ಆ ಬಗ್ಗೆ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಇಂಡಿಯ ಬಣದ ಅಭ್ಯರ್ಥಿಯ ಆಯ್ಕೆಯ ನಂತರ ಎನ್​ಡಿಎ ಮಿತ್ರಪಕ್ಷಗಳ ಅಥವಾ ಬಿಜೆಪಿಗೆ ಬಾಹ್ಯ ಬೆಂಬಲ ನೀಡುತ್ತಿರುವ ಪಕ್ಷಗಳ ನಿರ್ಧಾರ ಬದಲಾಗುವ ಸಾಧ್ಯತೆಯಿದೆಯೇ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: ಇಂಡಿಯ ಬ್ಲಾಕ್ ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಯಾರು?

ಇಂಡಿಯ ಬಣಗಳ ಮಿತ್ರ ಪಕ್ಷ ಡಿಎಂಕೆ ಈ ಚುನಾವಣೆಯನ್ನು ಸೈದ್ಧಾಂತಿಕ ಹೋರಾಟ ಎಂದು ಕರೆದಿದೆ. “ವಿರೋಧ ಪಕ್ಷವು ಆಯ್ಕೆ ಮಾಡಿರುವ ಅಭ್ಯರ್ಥಿ ಸುದರ್ಶನ್ ರೆಡ್ಡಿ ಸಂವಿಧಾನವನ್ನು ಗೌರವಿಸುವ ವ್ಯಕ್ತಿ. ಬಿಜೆಪಿಯವರು ತಮಿಳುನಾಡಿನಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದ ಮಾತ್ರಕ್ಕೆ ನೀವು ತಮಿಳುನಾಡು, ತಮಿಳು ಭಾಷೆ ಅಥವಾ ರಾಜ್ಯದ ಮೌಲ್ಯಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದರ್ಥವಲ್ಲ” ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದಾರೆ.

ಯಾರಿಗೆ ಗೆಲುವಿನ ಸಾಧ್ಯತೆ ಹೆಚ್ಚು?:

ಪ್ರಸ್ತುತ, ಸಂಸತ್ತಿನ ಬಲವು ಎರಡೂ ಸದನಗಳನ್ನು ಒಳಗೊಂಡಂತೆ 787ರಷ್ಟಿದೆ. ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲು ಅಭ್ಯರ್ಥಿಗೆ ಕನಿಷ್ಠ 394 ಮತಗಳು ಬೇಕಾಗುತ್ತವೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಸಂಖ್ಯೆಗಳ ಆಧಾರದ ಮೇಲೆ ಮುನ್ನಡೆ ಸಾಧಿಸುತ್ತಿರುವಂತೆ ತೋರುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಿಂದಲೂ 788 ಸದಸ್ಯರನ್ನು ಒಳಗೊಳ್ಳಲಾಗಿದೆ. ಪ್ರಸ್ತುತ 6 ಸ್ಥಾನಗಳು ಖಾಲಿಯಿದ್ದು, ಪರಿಣಾಮಕಾರಿ ಮತದಾನದ ಬಲ 782 ಸಂಸದರಿಗೆ ತಲುಪಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು, ಅಭ್ಯರ್ಥಿಯು ಒಟ್ಟು ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು (392 ಮತಗಳು) ಪಡೆಯಬೇಕು. ಬಿಜೆಪಿ ನೇತೃತ್ವದ ಎನ್‌ಡಿಎ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವ ನಾಮನಿರ್ದೇಶಿತ ಸದಸ್ಯರು ಸೇರಿದಂತೆ 422 ಸಂಸದರನ್ನು ಹೊಂದಿದೆ. ಎನ್‌ಡಿಎಯ ಒಟ್ಟು ಸಂಖ್ಯೆ 542. ಇದು ಲೋಕಸಭೆಯಲ್ಲಿ 293 ಸಂಸದರು ಮತ್ತು ರಾಜ್ಯಸಭೆಯಲ್ಲಿ 129 ಸಂಸದರನ್ನು ಒಳಗೊಂಡಿದೆ. ಸದನದ ಪರಿಣಾಮಕಾರಿ ಬಲ ಪ್ರಸ್ತುತ 245 ಆಗಿದೆ.

ಇದನ್ನೂ ಓದಿ: CP Radhakrishnan: ಎನ್​​ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಯಾರು?

ಇಂಡಿಯ ಬಣದ ಪ್ರಸ್ತುತ ಬಲ ಸುಮಾರು 300. ಈ ಬಣದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್), ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಎಎಪಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸೇರಿವೆ.

ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಸುದರ್ಶನ್ ರೆಡ್ಡಿ ಅವರ ಉಮೇದುವಾರಿಕೆಗೆ ಬೆಂಬಲ ನೀಡುತ್ತಿವೆ ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಹೇಳಿದ್ದಾರೆ. ಇಂಡಿಯ ಬಣವು 7 ರಾಜ್ಯಸಭಾ ಸದಸ್ಯರು ಮತ್ತು 5 ಲೋಕಸಭಾ ಸದಸ್ಯರನ್ನು ಹೊಂದಿರುವ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಲು ಸಹ ಯೋಜಿಸುತ್ತಿದೆ. 7 ರಾಜ್ಯಸಭಾ ಸಂಸದರನ್ನು ಹೊಂದಿರುವ ಮತ್ತು ಹಿಂದೆ ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸಿರುವ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ (ಬಿಜೆಡಿ) ಯಾರನ್ನು ಬೆಂಬಲಿಸಬೇಕು ಎಂಬುದನ್ನು ಇನ್ನೂ ಆಯ್ಕೆ ಮಾಡಿಲ್ಲ. ಆದರೆ, ವಿರೋಧ ಪಕ್ಷಗಳು ಜಗನ್ ರೆಡ್ಡಿ ಮತ್ತು ನವೀನ್ ಪಟ್ನಾಯಕ್ ಇಬ್ಬರನ್ನೂ ಮನವೊಲಿಸುವಲ್ಲಿ ಯಶಸ್ವಿಯಾದರೂ ಎನ್​ಡಿಎ ಮತ್ತು ಇಂಡಿಯ ಬಣದ ನಡುವಿನ ಅಂತರವು ತುಂಬಾ ದೊಡ್ಡದಾಗಿದೆ.

ಆದ್ದರಿಂದ, ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಎನ್​ಡಿಎಯ ರಾಧಾಕೃಷ್ಣನ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ, ಒಂದುವೇಳೆ ಕೆಲವು ಬಿಜೆಪಿ ಮಿತ್ರಪಕ್ಷಗಳು ಇಂಡಿಯ ಬಣದ ಕಡೆಗೆ ತಿರುಗುವ ಅನಿರೀಕ್ಷಿತ ಸನ್ನಿವೇಶ ಸೃಷ್ಟಿಯಾದರೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ