
ಕಾನ್ಪುರ, ಆಗಸ್ಟ್ 28: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಗುರುವಾರ ಸಂಭವಿಸಿದ ತರಬೇತಿ ವಿಮಾನ ಅಪಘಾತದಲ್ಲಿ ಕರ್ನಾಟಕದ (Karnataka) ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಂಗಾ ನದಿ ಬಳಿಯ ನತ್ತುಪುರವಾ ಗ್ರಾಮದ ಸಮೀಪದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಡಬಲ್ ಎಂಜಿನ್ ವಿಮಾನ ಪತನಗೊಂಡಿದೆ. ಮೃತರನ್ನು ಗುಜರಾತ್ ಮೂಲದ ಬೋಧಕ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.
ಪೊಲೀಸ್ ಆಯುಕ್ತ ರಘುಬೀರ್ ಲಾಲ್ ನೀಡಿರುವ ಮಾಹಿತಿಯಂತೆ, ವಿಮಾನವು ಬೆಳಗ್ಗೆ ಸುಮಾರು 11.30ಕ್ಕೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿತ್ತು. ತರಬೇತಿ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಸುಮಾರು 20 ನಿಮಿಷಗಳ ಬಳಿಕ ವಿಮಾನ ಪತನಗೊಂಡಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಪತನಗೊಂಡ ಅವಳಿ ಎಂಜಿನ್ನ ಟೆಕ್ನಮ್ ವಿಮಾನವನ್ನು 2023ರಲ್ಲಿ ತರಬೇತಿ ಉದ್ದೇಶಕ್ಕಾಗಿ ಫ್ಲೈಟ್ ಟ್ರೈನಿಂಗ್ ಶಾಲೆಗೆ ತರಲಾಗಿತ್ತು. ಬೋಧಕ ಪೈಲಟ್ ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನವು ಪ್ರದೇಶದ ಹೊಲವೊಂದಕ್ಕೆ ಅಪ್ಪಳಿಸಿದ್ದು, ಅದರ ಅವಶೇಷಗಳು ಸುತ್ತಮುತ್ತ ಚದುರಿಕೊಂಡಿವೆ. ವಿಮಾನ ಪತನದ ವೇಳೆ ದೊಡ್ಡ ಶಬ್ದ ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ಗೆ ಮಾಹಿತಿ ನೀಡಲಾಗಿದೆ. ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ತಾಂತ್ರಿಕ ತನಿಖೆಯ ಮೂಲಕ ಪತ್ತೆಹಚ್ಚಲಾಗುತ್ತದೆ ಎಂದು ಡಿಜಿಸಿಎ ತಿಳಿಸಿದೆ.
ಈ ವರ್ಷದ ಜೂನ್ನಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಎರಡು ಆಸನಗಳ ತರಬೇತಿ ವಿಮಾನವೊಂದು ಹೊಲಕ್ಕೆ ಪತನಗೊಂಡಿತ್ತು. ಅಲೀಗಢ ವಿಮಾನ ನಿಲ್ದಾಣದಿಂದ ತರಬೇತಿ ಹಾರಾಟಕ್ಕೆ ತೆರಳಿದ್ದ ವಿಮಾನವು ಕಾಸ್ಗಂಜ್ ಪ್ರದೇಶದಲ್ಲಿ ಪತನವಾಗುವ ಮುನ್ನ ಹೈಟೆನ್ಷನ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ತರಬೇತಿ ಪೈಲಟ್ ಕೈನಾತ್ ಖಾನ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿತ್ತು.
ಇದಕ್ಕೂ ಮೊದಲು ಮೇ 13ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ರೆಡ್ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ ಲ್ಯಾಂಡಿಂಗ್ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದು ತುರ್ತು ರೀತಿಯಲ್ಲಿ ಇಳಿದಿತ್ತು. ವಿಮಾನದಲ್ಲಿದ್ದ ತರಬೇತಿ ಪೈಲಟ್ ಸುರಕ್ಷಿತವಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ