ಕೋಲ್ಕತ್ತಾ ಅತ್ಯಾಚಾರ, ಕೊಲೆ ಪ್ರಕರಣ: ಪಾಲಿಗ್ರಾಫ್​ ಪರೀಕ್ಷೆ ವೇಳೆ ನಾನು ನಿರಪರಾಧಿ ಎಂದ ಆರೋಪಿ ಸಂಜಯ್

ಕೋಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ಆರೋಪಿ ಸಂಜಯ್​ ರಾಯ್​ಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಯಿತು. ಆ ಸಂದರ್ಭದಲ್ಲಿ ತಾನು ಯಾವುದೇ ಕೊಲೆ, ಅತ್ಯಾಚಾರ ಮಾಡಿಲ್ಲ ನಾನು ನಿರಪರಾಧಿ ಎಂದು ಹೇಳಿದ್ದಾನೆ. ನಾನು ಸೆಮಿನಾರ್ ಹಾಲ್​ಗೆ ಹೋಗುವ ಮುನ್ನವೇ ಆಕೆ ಸಾವನ್ನಪ್ಪಿದ್ದಳು ಎಂದು ಹೇಳಿಕೆ ಕೊಟ್ಟಿದ್ದಾನೆ.

ಕೋಲ್ಕತ್ತಾ ಅತ್ಯಾಚಾರ, ಕೊಲೆ ಪ್ರಕರಣ: ಪಾಲಿಗ್ರಾಫ್​ ಪರೀಕ್ಷೆ ವೇಳೆ ನಾನು ನಿರಪರಾಧಿ ಎಂದ ಆರೋಪಿ ಸಂಜಯ್
ಸಂಜಯ್ ರಾಯ್

Updated on: Aug 26, 2024 | 9:51 AM

ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಬಂದಾಗ ಮಹಿಳಾ ವೈದ್ಯೆ ಆಗಲೇ ಮೃತಪಟ್ಟಿದ್ದಳು ಎಂದು ಆರೋಪಿ ಸಂಜಯ್ ರಾಯ್​ ಪಾಲಿಗ್ರಾಪ್​ ಪರೀಕ್ಷೆ ವೇಳೆ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ, ಕೊಲೆ ಮಾಡಿದ್ದು ನಾನೇ ಎಂದು ಈಗಾಗಲೇ ಒಪ್ಪಿಕೊಂಡಿರುವ ಸಂಜಯ್ ರಾಯ್ ಇದೀಗ ಯೂಟರ್ನ್​ ಹೊಡೆದಿದ್ದು, ಆತನ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ಹುಟ್ಟಿದೆ. ಅಂದು ನಾನು ಸೆಮಿನಾರ್​ ಹಾಲ್​ಗೆ ಹೋಗುವ ಮೊದಲು ಆಕೆ ಸಾವನ್ನಪ್ಪಿದ್ದಳು, ನಾನು ನಿರಪರಾಧಿ ಎಂದು ಆತ ಹೇಳಿದ್ದಾನೆ.

ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ್ದರು. ಟೈಮ್ಸ್​ ಆಫ್ ಇಂಡಿಯಾ ನೀಡಿರುವ ವರದಿ ಪ್ರಕಾರ, ಸುಳ್ಳು ಪತ್ತೆ ಪರೀಕ್ಷೆ ವೇಳೆ ಸುಳ್ಳು ಹಾಗೂ ಅನುಮಾನಾಸ್ಪದ ಉತ್ತರಗಳನ್ನು ಗುರುತಿಸಲಾಗಿದೆ. ಸಂಜಯ್ ರಾಯ್ ಆ ವೇಳೆ ಆತಂಕಗೊಂಡಿದ್ದ, ಸಿಬಿಐ ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಆತ ಸಮರ್ಥನೆ ನೀಡುತ್ತಲೇ ಇದ್ದ ಎಂಬುದು ತಿಳಿದುಬಂದಿದೆ.

ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ವೈದ್ಯರನ್ನು ನೋಡಿದಾಗ ಆಕೆ ಆಗಲೇ ಮೃತಪಟ್ಟಿದ್ದಾಳೆ ಎಂದು ಆರೋಪಿ ಸಂಜಯ್ ರಾಯ್ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.ಕೋಲ್ಕತ್ತಾ ಪೊಲೀಸರ ಪ್ರಕಾರ, ಘಟನೆಯ ನಂತರ, ಸಂಜಯ್ ರಾಯ್ ಅತ್ಯಾಚಾರ ಮತ್ತು ಕೊಲೆಯ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ, ನಂತರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ತಾವು ನಿರಪರಾಧಿ ಎಂದು ಹೇಳಿದ್ದಾನೆ.

ಮತ್ತಷ್ಟು ಓದಿ:
Kolkata Murder Case: ಕತ್ತಿನಲ್ಲಿ ಬ್ಲೂಟೂತ್​, ಕೈಯಲ್ಲಿ ಹೆಲ್ಮೆಟ್​ ಸೆಮಿನಾರ್​ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ

ಅತ್ಯಾಚಾರ ಮತ್ತು ಕೊಲೆಯ ಘಟನೆಯ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಸಂಜಯ್ ರಾಯ್ ಜೈಲು ಸಿಬ್ಬಂದಿಗೆ ಹೇಳಿದ್ದ.ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಕೊಂಡೆ ಎಂದು ಆರೋಪಿ ಹೇಳಿದ್ದ.

ಆರೋಪಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾನೆ, ಆರೋಪಿಯು ತನ್ನ ಮುಖದ ಮೇಲೆ ಉಂಟಾದ ಗಾಯಗಳು ಮತ್ತು ಅಪರಾಧದ ಸಮಯದಲ್ಲಿ ಕಟ್ಟಡದಲ್ಲಿ ಇದ್ದ ಬಗ್ಗೆ ಯಾವುದೇ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 9 ರಂದು, ಆರ್‌ಜಿ ಕರ್ ಆಸ್ಪತ್ರೆಯ ಸ್ನಾತಕೋತ್ತರ ಮಹಿಳಾ ಟ್ರೈನಿ ವೈದ್ಯರೊಬ್ಬರು ಸೆಮಿನಾರ್ ಹಾಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿರುವುದು ದೃಢಪಟ್ಟಿದೆ. ಅವರ ದೇಹದ ಮೇಲೆ 25 ಗಾಯದ ಗುರುತುಗಳಿದ್ದವು. ಮಹಿಳಾ ವೈದ್ಯೆ ರಾತ್ರಿ ಪಾಳಿ ಮುಗಿಸಿ ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್‌ಗೆ ತೆರಳಿದ್ದರು ಎನ್ನಲಾಗಿದೆ. ಆಕೆಯ ಶವದ ಬಳಿ ಸಂಜಯ್​ನ ಬ್ಲೂಟೂತ್​ ಪತ್ತೆಯಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us