ಅಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ 5 ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿ

| Updated By: ganapathi bhat

Updated on: Jun 06, 2021 | 10:47 PM

ನೆರೆಯವರು, ಅರಣ್ಯ ಅಧಿಕಾರಿಗಳು ಬಂದು ಹುಡುಕಾಟ ನಡೆಸುವಷ್ಟರಲ್ಲಿ ಹುಡುಗಿ ಅಲ್ಲಿರಲಿಲ್ಲ. ಚಿರತೆ ಬಂದು ಹುಡುಗಿಯನ್ನು ಕೊಂಡೊಯ್ದ ಕುರುಹುಗಳಷ್ಟೇ ಇತ್ತು.

ಅಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ 5 ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿ
ಚಿರತೆ ( ಪ್ರಾತಿನಿಧಿಕ ಚಿತ್ರ)
Follow us on

ಶ್ರೀನಗರ: ಐದು ವರ್ಷದ ಪುಟ್ಟ ಬಾಲಕಿ ಮಿರ್ ಅಡ್ಡ ಎಂಬಾಕೆ ಬಾರ್ಬಿ ಡ್ರೆಸ್ ತೊಟ್ಟು ಅಣ್ಣನ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಸಂಭ್ರಮದಲ್ಲಿದ್ದಳು. ತನ್ನ ಕುಟುಂಬದ ಸದಸ್ಯರನ್ನು ಆ ಕ್ಷಣಕ್ಕಾಗಿ ಬಳಿಗೆ ಕರೆದಿದ್ದಳು. ಈ ಸಂತೋಷದ ನಡುವೆ, ಕೆಲವೇ ಕ್ಷಣಗಳಲ್ಲಿ ಅಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದುಬಿಟ್ಟಿತು. ಚಿರತೆಯೊಂದು ಬಂದು ಆ 5 ವರ್ಷದ ಪುಟ್ಟ ಹುಡುಗಿಯನ್ನು ಎತ್ತಿ ಕೊಂಡೊಯ್ಯಿತು. ಮಾನವ- ವನ್ಯಜೀವಿ ಸಂಘರ್ಷಕ್ಕೆ ಹೀಗೆ ಮತ್ತೊಂದು ದುರಂತ ಘಟನೆ ಸಾಕ್ಷಿಯಾದದ್ದು ಶ್ರೀನಗರದ ಬುಡ್​ಗಾಮ್​ನಲ್ಲಿ. 

ಅಡ್ಡ, ತನ್ನ ಅಣ್ಣನ ಏಳನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಉತ್ಸಾಹದಲ್ಲಿ ಇದ್ದಳು. ಎಲ್ಲವೂ ಶಾಂತ ರೀತಿಯಿಂದ, ಸಂಭ್ರಮದಿಂದ ನಡೆಯುತ್ತಿರುವಾಗ ಹೀಗೊಂದು ಅನಾಹುತ ಘಟಿಸಿತು. ನಾವು, ನೆರೆಯವರು, ಅರಣ್ಯ ಅಧಿಕಾರಿಗಳು ಬಂದು ಹುಡುಕಾಟ ನಡೆಸುವಷ್ಟರಲ್ಲಿ ಹುಡುಗಿ ಅಲ್ಲಿರಲಿಲ್ಲ. ಚಿರತೆ ಬಂದು ಹುಡುಗಿಯನ್ನು ಕೊಂಡೊಯ್ದ ಕುರುಹುಗಳಷ್ಟೇ ಇತ್ತು. ಇದು ಜೂನ್ 3ರಂದು ನಡೆದ ಘಟನೆ. ನಡೆದ ಘಟನೆಯ ಬಗ್ಗೆ ಹುಡುಗಿಯ ಮಾವ ಐಜಾಜ್ ಅಹಮದ್ ಹೀಗೆ ಹೇಳಿದ್ದಾರೆ. ಈ ಕುರಿತು ಎನ್​ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮರುದಿನ ಸಮೀಪದ ಕಾಡಿನ ಪ್ರದೇಶದಲ್ಲಿ ಆಕೆಯ ದೇಹ ಕಂಡುಬಂದಿತ್ತು. ಕೊರೊನಾ ಕಾರಣದಿಂದ ಮನೆಯವರಷ್ಟೇ ಅಂತ್ಯಕ್ರಿಯೆ ನೆರವೇರಿಸಿದ್ದರು. ಅಕ್ಕಪಕ್ಕದ ಮನೆಯವರು, ನೆಂಟರು ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಂಬನಿ ಮಿಡಿದಿದ್ದರು.

ಅಡ್ಡ ಶ್ರೀನಗರದ ಡಿಪಿಎಸ್ ಶಾಲೆಯ ವಿದ್ಯಾರ್ಥಿಯಾಗಿದ್ದಳು. ಘಟನೆಯಿಂದಾಗಿ ಶಾಲೆಯವರ ಸಹಿತ ಇತರರು, ಅರಣ್ಯ ಇಲಾಖೆ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತದ ಮೇಲೆ ವನ್ಯಮೃಗಗಳ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಮನೆಯ ಸಮೀಪದಲ್ಲೇ ಅರಣ್ಯ ಇಲಾಖೆ ಸರ್ಸರಿ ನಿರ್ಮಿಸಿತ್ತು. ಗಿಡಗಳನ್ನು ನೆಟ್ಟು, ಅವು ಬೆಳೆದ ಬಳಿಕ ಅವುಗಳನ್ನು ಕಾಡು ಪ್ರದೇಶದಲ್ಲಿ ಕೊಂಡೊಯ್ದು ನೆಡುವುದು ಅವರ ಯೋಜನೆಯ ಉದ್ದೇಶವಾಗಿತ್ತು. ಆದರೆ, ಸರಿಯಾದ ವ್ಯವಸ್ಥೆ ಇಲ್ಲದೆ ಇಲ್ಲೇ ಆ ಮರಗಳು ಬೆಳೆದು ಕಾಡಿನಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ಕಾಡುಪ್ರಾಣಿಗಳ ಹಾವಳಿಯೂ ಅಧಿಕವಾಗಿದೆ ಎಂದು ಹೇಳಿದ್ದಾರೆ.

ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಅವರು ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಆ ಪ್ರದೇಶದಲ್ಲಿ ವನ್ಯಪ್ರಾಣಿಗಳ ಸಮಸ್ಯೆ ಬಗ್ಗೆ ಮನೆಮನೆಗೆ ತೆರಳಿ ಮೊದಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸ್ಥಳೀಯ ಪ್ರದೇಶದಲ್ಲಿ ವಾರದ ಹಿಂದಷ್ಟೇ ಒಂದು ಚಿರತೆಯನ್ನು ಹಿಡಿದಿರುವ ಬಗ್ಗೆ ಅವರು ಹೇಳಿದ್ದಾರೆ.

ಅಲ್ಲಿನ ಮನೆಯವರು ಮೊಲ ಮತ್ತಿತರ ಪ್ರಾಣಿಗಳನ್ನು ಸಾಕುತ್ತಾರೆ. ಹೀಗಾಗಿ ವನ್ಯಪ್ರಾಣಿಗಳ ದಾಳಿ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೂ, ಮನುಷ್ಯ ಮತ್ತು ಕಾಡುಪ್ರಾಣಿಗಳ ಸಂಘರ್ಷಕ್ಕೆ ದೇಶ, ರಾಜ್ಯದಲ್ಲಿ ಹಲವು ಘಟನೆಗಳು ನಡೆಯುತ್ತಿರುವುದು ಖೇದಕರವಾಗಿದೆ.

ಇದನ್ನೂ ಓದಿ: ಚಿರತೆ ದಾಳಿಗೆ ಮೂರು ಕರುಗಳ ಬಲಿ: ದಾವಣಗೆರೆ ಅರಣ್ಯ ಅಧಿಕಾರಿಗಳ ಮೊರೆ ಹೋದ ಗ್ರಾಮಸ್ಥರು

ವನ್ಯ ಜೀವಿ-ಮಾನವ ಸಂಘರ್ಷ; ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಹುಲಿ, ಚಿರತೆ ದಾಳಿ

Published On - 10:40 pm, Sun, 6 June 21