
ಭೋಪಾಲ್, ಸೆಪ್ಟೆಂಬರ್ 19: ಮಧ್ಯಪ್ರದೇಶದ ಆಗರ್ ಮಾಲ್ವಾ ಜಿಲ್ಲೆಯ ನಲ್ಖೇಡಾದಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ತೀವ್ರ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದ ಕಾಲುವೆಯ ನೀರಿನ ಸೆಳೆತಕ್ಕೆ ಭಕ್ತರಿದ್ದ ಕಾರು ಉರುಳಿಬಿದ್ದು ಕೊಚ್ಚಿಹೋಗಿದೆ. ಕಾರಿನಲ್ಲಿದ್ದ 8 ಮಂದಿ ಮೃತಪಟ್ಟಿದ್ದಾರೆ. ನಲ್ಖೇಡಾದ ಪ್ರಸಿದ್ಧ ತಾಯಿ ಬಗಲಾಮುಖಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಭಕ್ತರು ಆಗಮಿಸಿದ್ದರು. ರಾತ್ರಿಭಾರಿ ಮಳೆಯಾಗಿದ್ದು, ಇದರಿಂದ ದೇವಸ್ಥಾನದ ಸಮೀಪದ ನಾಲೆಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿದೆ. ಈ ವೇಳೆ ನಾಲೆಯ ಬಳಿ ಸಾಗುತ್ತಿದ್ದ ಕಾರು ನೀರಿನ ರಭಸಕ್ಕೆ ಸಿಲುಕಿ ನಾಲೆಗೆ ಉರುಳಿದ್ದು ಕೊಚ್ಚಿಹೋಗಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯಾಡಳಿತ ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ನಾಲೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಭಾರಿ ನೀರಿನ ಹರಿವಿನಿಂದ ರಕ್ಷಣಾ ಕಾರ್ಯಕ್ಕೂ ತೊಂದರೆಯಾಗಿದೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ 3 ಮಕ್ಕಳು, 2 ಮಹಿಳೆಯರು ಹಾಗೂ 3 ಪುರುಷರು ಸೇರಿದ್ದಾರೆ. ಮೃತರೆಲ್ಲರೂ ನಲ್ಖೇಡಾದಲ್ಲಿ ದೇವರ ದರ್ಶನಕ್ಕಾಗಿ ಬಂದಿದ್ದ ಭಕ್ತರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚಿಕ್ಕಮ್ಮನ ಕೈಯಲ್ಲಿದ್ದ 6 ತಿಂಗಳ ಮಗುವಿನ ಮೇಲೆ ಪಿಟ್ಬುಲ್ ಅಟ್ಯಾಕ್
ದುರ್ಘಟನೆಯಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ