
ಅಕೋಲಾ, ಡಿಸೆಂಬರ್ 07: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅದರಲ್ಲೂ 15 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳ ಆತ್ಮಹತ್ಯೆ(Suicide) ಪ್ರಕರಣಗಳು ಹೆಚ್ಚುತ್ತಿದ್ದು, ಪೋಷಕರಲ್ಲಿ ಕಳವಳ ಹುಟ್ಟುಹಾಕಿದೆ. ಮಕ್ಕಳು ತೀರಾ ಸೂಕ್ಷ್ಮವಾಗುತ್ತಾ ಹೋಗುತ್ತಿದ್ದಾರೆ. ಪೋಷಕರು ಗದರಿದರೆ, ಶಿಕ್ಷಕರು ಬೈದರೆ, ಸ್ನೇಹಿತರು ಹೀಯಾಳಿಸಿದರೆ ಇಂಥಾ ಚಿಕ್ಕಪುಟ್ಟ ವಿಚಾರಗಳಿಗೆ ತಪ್ಪು ದಾರಿ ತುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಹಿರಿಯ ವಿದ್ಯಾರ್ಥಿಯೊಬ್ಬ ಕಿರುಕುಳ ನೀಡಿದ ಕಾರಣಕ್ಕೆ 13 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹಿರಿಯ ವಿದ್ಯಾರ್ಥಿ ಪದೇ ಪದೇ ಕಿರುಕುಳ ನೀಡುತ್ತಿದ್ದ, ಇನ್ಸ್ಟಾಗ್ರಾಮ್ನಲ್ಲಿ ನಿರಂತರ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಿಸಿದೆ. ಹಿನ್ನೆಲೆಯಲ್ಲಿ ಪೊಲೀಸರು ಅಪ್ರಾಪ್ತ ಬಾಲಕನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿ ಶುಕ್ರವಾರ ಶಾಲೆಯಿಂದ ಮನೆಗೆ ಹಿಂತಿರುಗಿ ಬಂದಿದ್ದಳು ಎರಡನೇ ಮಹಡಿಯಲ್ಲಿರುವ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಳು. ಆಕೆಯ ಕುಟುಂಬಕ್ಕೆ ಪದೇ ಪದೇ ಕರೆ ಮಾಡಿದರೂ ಪ್ರತಿಕ್ರಿಯಿಸದಿದ್ದಾಗ, ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಮತ್ತಷ್ಟು ಓದಿ: ‘ಅಪ್ಪ ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ’: 8 ಪುಟದ ಡೆತ್ನೋಟ್ ಬರೆದಿಟ್ಟು ಮಗಳು ಆತ್ಮಹತ್ಯೆಗೆ ಶರಣು
ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು, ಆದರೆ ಮರಣೋತ್ತರ ಪರೀಕ್ಷೆ ಮತ್ತು ಆಕೆಯ ತಂದೆಯ ಔಪಚಾರಿಕ ದೂರಿನ ನಂತರ ಪ್ರಕರಣ ಬೇರೆ ತಿರುವು ಪಡೆಯಿತು. ಹಿರಿಯ ವಿದ್ಯಾರ್ಥಿಯು ಹಲವಾರು ದಿನಗಳಿಂದ ತನ್ನ ಮಗಳಿಗೆ ತೊಂದರೆ ನೀಡುತ್ತಿದ್ದ.
ಬೀದಿಯಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದ, ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಬಾಲಕಿ ತಂದೆ ಆರೋಪಿಸಿದ್ದಾರೆ. ಎಚ್ಚರಿಕೆ ನೀಡಿದ್ದರೂ ಮತ್ತು ಮಧ್ಯಪ್ರವೇಶಿಸುವಂತೆ ಪೋಷಕರನ್ನು ಸಂಪರ್ಕಿಸಿದ್ದರೂ ಸಹ, ಅವನ ನಡವಳಿಕೆ ಸರಿಯಾಗಿರಲಿಲ್ಲ. ನನ್ನ ಮಗಳು ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ನಮಗೆ ಪದೇ ಪದೇ ಹೇಳುತ್ತಿದ್ದಳು. ಮಾನಸಿಕ ಒತ್ತಡವು ಅವಳನ್ನು ಈ ತೀವ್ರ ಕ್ರಮ ತೆಗೆದುಕೊಳ್ಳಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಆರೋಪಿ ವಿರುದ್ಧ ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ಪೆಕ್ಟರ್ ನಿತಿನ್ ಲೆವರ್ಕರ್ ದೃಢಪಡಿಸಿದ್ದಾರೆ. ತನಿಖೆಯ ಭಾಗವಾಗಿ ಡಿಜಿಟಲ್ ಪುರಾವೆಗಳು, ಇತರ ವಿದ್ಯಾರ್ಥಿಗಳಿಂದ ಹೇಳಿಕೆಗಳು ಮತ್ತು ಶಾಲಾ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಶಾಲಾ ಮಟ್ಟದಲ್ಲಿ ಈ ಹಿಂದೆ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಬಳಿಕ ಮಕ್ಕಳ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅವರ ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವಂತೆ ಕುಟುಂಬ ಮತ್ತು ಸ್ಥಳೀಯ ನಿವಾಸಿಗಳು ಶಾಲಾ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇಂತಹ ಘಟನೆಗಳು ಮತ್ತೆ ಸಂಭವಿಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ