ಸದನ ಸಮಿತಿಯಲ್ಲಿ ವೈಯಕ್ತಿಕ ಪ್ರಶ್ನೆ ಕೇಳಲಾಗಿದೆ; ಓಂ ಬಿರ್ಲಾಗೆ ಪತ್ರ ಬರೆದ ಮಹುವಾ ಮೊಯಿತ್ರಾ

ನೀತಿ ನಿಯಮ ಸಮಿತಿಯಲ್ಲಿ ನೀತಿಯೇ ಉಳಿದಿಲ್ಲ. ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಬದಲು, ಅಧ್ಯಕ್ಷರು ಮಾನಹಾನಿಕರ ರೀತಿಯಲ್ಲಿ ನನ್ನನ್ನು ಪ್ರಶ್ನಿಸುವ ಮೂಲಕ ದುರುದ್ದೇಶಪೂರಿತವಾಗಿ ಮತ್ತು ಸ್ಪಷ್ಟವಾಗಿ ಪೂರ್ವಾಗ್ರಹ ಪೀಡಿತ ಪಕ್ಷಪಾತವನ್ನು ಪ್ರದರ್ಶಿಸಿದರು, ಆದ್ದರಿಂದ ಹಾಜರಿದ್ದ 11 ಸದಸ್ಯರಲ್ಲಿ 5 ಸದಸ್ಯರು ಹೊರನಡೆವ ಮೂಲಕ ನಾಚಿಕೆಗೇಡಿನ ನಡವಳಿಕೆಯನ್ನು ಪ್ರತಿಭಟಿಸಿ ಕಲಾಪವನ್ನು ಬಹಿಷ್ಕರಿಸಿದರು ಎಂದು ಟಿಎಂಸಿ ಸಂಸದೆ ಹೇಳಿದ್ದಾರೆ

ಸದನ ಸಮಿತಿಯಲ್ಲಿ ವೈಯಕ್ತಿಕ ಪ್ರಶ್ನೆ ಕೇಳಲಾಗಿದೆ; ಓಂ ಬಿರ್ಲಾಗೆ ಪತ್ರ ಬರೆದ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
Follow us
|

Updated on:Nov 02, 2023 | 9:37 PM

ದೆಹಲಿ ನವೆಂಬರ್ 02: ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ (cash-for-query) ಸಂಬಂಧಿಸಿದಂತೆ ಗುರುವಾರ ಲೋಕಸಭೆಯ ನೀತಿ ನಿಯಮ ಸಮಿತಿ (Ethics Committee) ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ವಿಚಾರಣೆಯ ವೇಳೆ, ಸಮಿತಿಯ ಎಲ್ಲ ಸದಸ್ಯರ ಸಮ್ಮುಖದಲ್ಲಿ ಸಮಿತಿ ಅಧ್ಯಕ್ಷರು ಅನೈತಿಕ, ಅಸಹ್ಯ, ಅವಮಾನಕರ ಮತ್ತು ಪೂರ್ವಾಗ್ರಹ ಪೀಡಿತ ನಡವಳಿಕೆ ತೋರಿದ್ದಾರೆ. ಅವರು ಮಾತಿನಿಂದಲೇ ವಸ್ತ್ರಾಹರಣ ಮಾಡಿದರು ಎಂದು ಆರೋಪಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಲೋಕಸಭೆಯ ನೀತಿ ನಿಯಮ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ “ಅಸಭ್ಯ ವೈಯಕ್ತಿಕ” ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಮೊಯಿತ್ರಾ ಅವರೊಂದಿಗೆ ಸದನ ಸಮಿತಿಯಿಂದ ಪ್ರತಿಪಕ್ಷ ಸದಸ್ಯರು ಸಭೆಯಿಂದ ಹೊರನಡೆದಿದ್ದಾರೆ.

ಲಂಚದ ಆರೋಪಗಳಿಗೆ ನಿರಪರಾಧಿ ಎಂದು ಪ್ರತಿಪಾದಿಸಿದ ಮೊಯಿತ್ರಾ, ವಾಕ್‌ಔಟ್‌ನ ನಂತರ ಸೋಂಕರ್ ಅವರ ಪ್ರಶ್ನೆಗಳನ್ನು “ಕೊಳಕು” ಎಂದಿದ್ದಾರೆ. ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಸೋಂಕರ್ ಅವರು ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಬದಲು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ರೀತಿಯಲ್ಲಿ ಪ್ರಶ್ನಿಸುವ ಮೂಲಕ ಪೂರ್ವಗ್ರಹದ ಪ್ರದರ್ಶಿಸಿದರು ಎಂದು ಮೊಯಿತ್ರಾ ಆರೋಪಿಸಿದ್ದಾರೆ.

ಅಧ್ಯಕ್ಷರು ನೀತಿ ನಿಯಮ ಸಮಿತಿಯ ವಿಚಾರಣೆಯಲ್ಲಿ ನನಗೆ ತೋರಿದ ಅನೈತಿಕ, ಅಸಭ್ಯ ಮತ್ತು ಪೂರ್ವಾಗ್ರಹ ಪೀಡಿತ ನಡವಳಿಕೆಯ ಬಗ್ಗೆ ನಿಮಗೆ ತಿಳಿಸಲು ನಾನು ಇಂದು ಬಹಳ ದುಃಖದಿಂದ ನಿಮಗೆ ಬರೆಯುತ್ತೇನೆ. ನಾನು ಅವರ ಮಾತಿನಿಂದಲೇ ವಸ್ತ್ರಾಹರಣಗೊಳಗಾದೆ ಎಂದು ಮೊಯಿತ್ರಾ ಹೇಳಿದ್ದಾರೆ.

ನೀತಿ ನಿಯಮ ಸಮಿತಿಯಲ್ಲಿ ನೀತಿಯೇ ಉಳಿದಿಲ್ಲ. ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಬದಲು, ಅಧ್ಯಕ್ಷರು ಮಾನಹಾನಿಕರ ರೀತಿಯಲ್ಲಿ ನನ್ನನ್ನು ಪ್ರಶ್ನಿಸುವ ಮೂಲಕ ದುರುದ್ದೇಶಪೂರಿತವಾಗಿ ಮತ್ತು ಸ್ಪಷ್ಟವಾಗಿ ಪೂರ್ವಾಗ್ರಹ ಪೀಡಿತ ಪಕ್ಷಪಾತವನ್ನು ಪ್ರದರ್ಶಿಸಿದರು, ಆದ್ದರಿಂದ ಹಾಜರಿದ್ದ 11 ಸದಸ್ಯರಲ್ಲಿ 5 ಸದಸ್ಯರು ಹೊರನಡೆವ ಮೂಲಕ ನಾಚಿಕೆಗೇಡಿನ ನಡವಳಿಕೆಯನ್ನು ಪ್ರತಿಭಟಿಸಿ ಕಲಾಪವನ್ನು ಬಹಿಷ್ಕರಿಸಿದರು ಎಂದು ಟಿಎಂಸಿ ಸಂಸದೆ ಹೇಳಿದ್ದಾರೆ.

ಇದನ್ನೂ ಓದಿ:  ಪ್ರಶ್ನೆಗಾಗಿ ನಗದು ಪ್ರಕರಣ: ನೈತಿಕ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿಗೆ ವಹಿಸಲಾಗಿದೆ. ಮೊಯಿತ್ರಾ ಸಹಕರಿಸುವ ಬದಲು ವಿರೋಧ ಪಕ್ಷದ ಸದಸ್ಯರೊಂದಿಗೆ ಕೋಪಗೊಂಡರು. ಅವರು “ಆಕ್ಷೇಪಾರ್ಹ ಪದಗಳನ್ನು” ಬಳಸಿದರು ಎಂದು ಸೋಂಕರ್ ಹೇಳಿದ್ದಾರೆ.

ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ತಮ್ಮ ಸಂಸದೀಯ ಖಾತೆಯ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆ ತನ್ನ ಲಾಗಿನ್ ರುಜುವಾತುಗಳನ್ನು ದುಬೈ ಮೂಲದ ಉದ್ಯಮಿಯೊಂದಿಗೆ ಹಂಚಿಕೊಂಡಿದ್ದಾಳೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ದೂರು ದಾಖಲಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:33 pm, Thu, 2 November 23