ದೀದಿಗೆ ಶಿವಸೇನಾ ಬೆಂಬಲ; ಮಮತಾ ಬ್ಯಾನರ್ಜಿಯನ್ನು ಬಂಗಾಳದ ಹುಲಿ ಎಂದ ಶಿವಸೇನಾ ಸಂಸದ

West Bengal Assembly elections 2021: ಈ ಬಾರಿಯ ಮಾರ್ಚ್ 27ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ  ನೈಜ  ಹುಲಿ ಘರ್ಜಿಸಲಿ ಎಂದು ಶಿವಸೇನೆ ಆಶಯ ವ್ಯಕ್ತಪಡಿಸಿದೆ.

ದೀದಿಗೆ ಶಿವಸೇನಾ ಬೆಂಬಲ; ಮಮತಾ ಬ್ಯಾನರ್ಜಿಯನ್ನು ಬಂಗಾಳದ ಹುಲಿ ಎಂದ ಶಿವಸೇನಾ ಸಂಸದ
ಮಮತಾ ಬ್ಯಾನರ್ಜಿ ಬಂಗಾಳದ ಹುಲಿ; ಟಿಎಂಸಿ ಸಂಸದ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 04, 2021 | 6:19 PM

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಅವರನ್ನು ಬಂಗಾಳದ ನೈಜ ಹುಲಿ ಎಂದು ಕರೆದಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ದೀದೀ ಮತ್ತು ಇತರೆಲ್ಲರ ನಡುವಿನ ಕದನವೆಂದು ವ್ಯಾಖ್ಯಾನಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಈ ಬಾರಿ ಶಿವಸೇನೆ ಸ್ಪರ್ಧಿಸದೇ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಿವಸೇನಾ ಮುಖಂಡ, ಈ ಬಾರಿಯ ಮಾರ್ಚ್ 27ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ  ನೈಜ ಹುಲಿ ಘರ್ಜಿಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಮೂಲದ ಶಿವಸೇನೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೆ ನಡೆಸಲಿದೆ ಎಂಬ ಮಾತುಗಳಿಗೆ ತೆರೆಬಿದ್ದಂತಾಗಿದೆ.

ಬಿಜೆಪಿಯ ಸುದೀರ್ಘಾವಧಿಯ ದೋಸ್ತನಾಗಿದ್ದ ಶಿವಸೇನೆ 2019ರಲ್ಲಿ ಸಖ್ಯ ತೊರೆದಿತ್ತು. ಅದುವರೆಗೂ ಕೆಲ ವಿಷಯಗಳಿಗೆ ಆಗಾಗ ಬಿಜೆಪಿಯ ನಿರ್ಧಾರಗಳಿಗೆ ಅಪಸ್ವರ ತೆಗೆಯುತ್ತಲೇ ಬಂದಿದ್ದರೂ ಸಹ ಐತಿಹಾಸಿಕ ಶಿವಸೇನೆ-ಬಿಜೆಪಿ ಮೈತ್ರಿ ಮುಂದುವರೆದಿತ್ತು. ಆದರೆ 2019ರ ವಿಧಾನಸಭೆ ಚುನಾವಣೆಯ ನಂತರ ಶಿವಸೇನೆಯು ಬಿಜೆಪಿಯ ಮೈತ್ರಿ ತೊರೆದು ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಹಾರಾಷ್ಟ್ರ ವಿಕಾಸ್ ಅಘಾಡಿಯ ಭಾಗವಾಯಿತು. ಕಾಂಗ್ರೆಸ್, ಎನ್​ಸಿಪಿ ಮತ್ತು ಶಿವಸೇನೆಗಳು ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದವು.

ಶಿವಸೇನೆ ಬೆಂಬಲ ಎಷ್ಟು ಸಹಕಾರಿ? ಮಹಾರಾಷ್ಟ್ರ ಮೂಲದ ಶಿವಸೇನೆಯ ಬೆಂಬಲ ತೃಣಮೂಲ ಕಾಂಗ್ರೆಸ್​ಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದೇನೂ ಹೇಳಲಾಗದು. ಆದರೆ, ಒಂದಾನುವೇಳೆ ಶಿವಸೇನೆ ಸ್ಪರ್ಧೆ ನಡೆಸಿದ್ದೇ ಹೌದಾದಲ್ಲಿ ಕೊಂಚ ಮತ ವಿಭಜನೆ ಆಗುವ ಸಂದರ್ಭಗಳಿತ್ತು. ಆದರೆ ಈ ಮತಗಳು ಟಿಎಂಸಿಗಿಂತ ಹೆಚ್ಚಾಗಿ ಬಿಜೆಪಿಗೆ ಬೀಳಬಹುದಿದ್ದ ಮತಗಳೇ ಆಗಿದ್ದವು. ಹಿಂದುತ್ವವನ್ನು ಬಿಜೆಪಿಗಿಂತ ಅತಿ ಪ್ರಬಲವಾಗಿ ಪ್ರತಿಪಾದಿಸುವ ಶಿವಸೇನೆ ಸ್ವಲ್ಪ ಮಟ್ಟಿಗಾದರೂ ತೀಕ್ಷ್ಣ ಹಿಂದೂವಾದಿಗಳ ಮತಬೇಟೆ ನಡೆಸುವ ಸಾಧ್ಯತೆಯಿತ್ತು.

ಎಂದು ನಡೆಯಲಿದೆ ಚುನಾವಣೆ? ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.

ಬಿರುಸಿನ ಪ್ರಚಾರ ಈಗಾಗಲೇ ಚುನಾವಣಾ ಪ್ರಚಾರಗಳು ಭರದಿಂದ ನಡೆಯುತ್ತಿದ್ದು ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಟೀಕೆ-ವಾಗ್ವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೋಲ್ ಕೀಪರ್ ಆಗಲಿದ್ದು, ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದೇ ವೇಳೆ ಮೆರವಣಿಗೆ, ರೋಡ್ ಶೋಗಳನ್ನು ನಡೆಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸೋನರ್ ಬಾಂಗ್ಲಾ ಮಾಡುವುದಾದಿ ಭರವಸೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಎತ್ತಿ ತೋರಿಸಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಗೆದ್ದರೆ ಮಮತಾ ಬ್ಯಾನರ್ಜಿ ಮೂರನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ. ಬಿಜೆಪಿ ಇಲ್ಲಿಯವರೆಗೆ ಯಾವುದೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಬಿಜೆಪಿ ಇಲ್ಲಿ ಖಾತೆ ತೆರೆದರೆ ಅದು ರಾಜಕೀಯವಲಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ.

78,000 ಮತಗಟ್ಟೆ ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಅವಲೋಕನ ನಡೆಸಸಲು ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಂಗಾಳದಾದ್ಯಂತವಿರುವ 78,000 ಮತಗಟ್ಟೆಗಳನ್ನು ಇವರು ಪರಿಶೀಲಿಸಿದ್ದು, ಅಲ್ಲಿ ನೀರು, ಶೌಚಾಲಯ ಮತ್ತು ಇನ್ನಿತರ ಸೌಕರ್ಯಗಳು ಇರುವುದಾಗಿ ಖಾತ್ರಿ ಪಡಿಸಿದ್ದಾರೆ.

ಕೊವಿಡ್ ಸಂಕ್ರಾಮಿಕದ ಹೊತ್ತಲ್ಲಿ ನಡೆಯುವ ಚುನಾವಣೆ ಇದಾಗಿರುವ ಕಾರಣ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮತಗಟ್ಟೆಯಲ್ಲಿರುವ ಸಿಬ್ಬಂದಿಗಳು ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಮತ್ತು ಸ್ಯಾನಿಟೈಸರ್​ಗಳನ್ನು ಬಳಸಬೇಕು. ಮತದಾರರ ದೇಹದ ಉಷ್ಣತೆ ಪರೀಕ್ಷಿಸಿದ ನಂತರವೇ ಮತದಾನಕ್ಕೆ ಅವಕಾಶ ನೀಡಲಾಗುವುದು.

ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 209 ಸ್ಥಾನ ಪಡೆದಿದೆ. ಟಿಎಂಸಿ ಮೈತ್ರಿ ಪಕ್ಷ ಜಿಜೆಎಂ 2 ಸ್ಥಾನ ಹೊಂದಿದೆ. ಬಿಜೆಪಿ 27, ಕಾಂಗ್ರೆಸ್ 23, ಸಿಪಿಎಂ 19 ಸ್ಥಾನ ಪಡೆದಿದೆ. 10 ಕ್ಷೇತ್ರಗಳು ಖಾಲಿಯಿವೆ.

ಇದನ್ನೂ ಓದಿ: ಪಶ್ಚಿಮ ಬಂಗಾಳವನ್ನು ಸೋನಾರ್ ಬಾಂಗ್ಲಾ ಮಾಡುತ್ತೇವೆ; ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭರವಸೆ

ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ