TV9 Kannada News Live: ಬಂಗಾಳದಲ್ಲಿ ‘ದೀದಿ’ ಹಠ; ನಾನು ರಾಜೀನಾಮೆ ನೀಡುವುದಿಲ್ಲ: ಜೀವರಾಜ್ ವಿರುದ್ಧ ಎಫ್ಐಆರ್ಗೆ ಹೈಕೋರ್ಟ್ ತಡೆ!
ಈ ಹೊತ್ತಿನ ಪ್ರಮುಖ ಸುದ್ದಿಗಳೆಂದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ನಿರಾಕರಿಸಿದ್ದು, ಬಿಜೆಪಿ ಅಕ್ರಮ ಆರೋಪಿಸಿದ್ದಾರೆ. ರಾಜ್ಯದಲ್ಲಿ ಶೃಂಗೇರಿ ಅಂಚೆ ಮತ ವಿವಾದದಲ್ಲಿ ಡಿ.ಎನ್. ಜೀವರಾಜ್ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ. ಕಾಸರಗೋಡಿನಲ್ಲಿ ಕೇರೆ ಹಾವಿನ ಮೈಗೆ ಚಿನ್ನದ ಉಂಗುರ ಸಿಕ್ಕಿಹಾಕಿಕೊಂಡಿದ್ದು ವೈರಲ್ ಆಗಿದೆ. ದಳಪತಿ ವಿಜಯ್ಗೆ ರಿಷಬ್ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು, ಮೇ.5: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಸ್ಥಿರತೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿವಾದ ಕೂಡ ಭಾರೀ ಸುದ್ದಿಯಾಗುತ್ತಿದೆ. ಕಾಸರಗೋಡಿನ ಅಡೂರ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮನೆಯ ಡ್ರಾಯರ್ನಲ್ಲಿ ಸಿಕ್ಕಿದ ಕೇರೆ ಹಾವಿನ ಮೈಗೆ ಚಿನ್ನದ ಉಂಗುರ ಬಿಗಿಯಾಗಿ ಸಿಲುಕಿತ್ತು. ಇದು ಕೂಡ ಭಾರೀ ಸುದ್ದಿಯಾಗಿದೆ. ಇನ್ನು ಸಿನಿಮಾದಲ್ಲಿ ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.
ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ; ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲು ಅನುಭವಿಸಿ, ಬಿಜೆಪಿ ಭರ್ಜರಿ ದಿಗ್ವಿಜಯ ಸಾಧಿಸಿದೆ. ಆದರೆ, ಈ ಫಲಿತಾಂಶವನ್ನು ಒಪ್ಪದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸುವ ಮೂಲಕ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ. ಫಲಿತಾಂಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಚುನಾವಣೆಯಲ್ಲಿ ಬಿಜೆಪಿ ಅಕ್ರಮವಾಗಿ 100 ಸ್ಥಾನಗಳನ್ನು ಕದ್ದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. “ನಾವು ಚುನಾವಣೆಯಲ್ಲಿ ಸೋತಿಲ್ಲ, ಜನಾದೇಶವನ್ನು ಕದಿಯಲಾಗಿದೆ. ಹಾಗಾಗಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಪಟ್ಟು ಹಿಡಿದಿದ್ದಾರೆ.
ಡಿ.ಎನ್. ಜೀವರಾಜ್ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ!:
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ನಡೆದಿದೆ ಎನ್ನಲಾದ ಗಲಾಟೆ ಮತ್ತು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ಸಮಾಧಾನ ನೀಡಿದೆ. ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ (FIR) ಪ್ರಕ್ರಿಯೆಗೆ ಕೋರ್ಟ್ ಈಗ ತಡೆ ನೀಡಿದೆ. ಡಿ.ಎನ್. ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡುವ ಮೂಲಕ ಕಾನೂನು ಹೋರಾಟದಲ್ಲಿ ಅವರಿಗೆ ಮೊದಲ ಜಯ ಸಿಕ್ಕಂತಾಗಿದೆ. ಕೇವಲ ರಾಜಕೀಯ ಒತ್ತಡಗಳಿಗೆ ಮಣಿದು ಎಫ್ಐಆರ್ ದಾಖಲಿಸಬಾರದು. ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯವು ಗಂಭೀರವಾಗಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಉಪಚುನಾವಣೆ ಗೆದ್ದರೂ ‘ಕೈ’ಗೆ ಹೊಸ ಚಿಂತೆ, ಟಿವಿಕೆ ಮೈತ್ರಿ ಬಗ್ಗೆ ಅಂತೆಕಂತೆ
ಕೇರೆ ಹಾವಿನ ಮೈಗೆ ಸಿಲುಕಿತು ಚಿನ್ನದ ಉಂಗುರ!:
ದೈನಂದಿನ ಜೀವನದಲ್ಲಿ ಅನಿರೀಕ್ಷಿತ ಎಂಬಂತೆ ಕಾಸರಗೋಡು ಜಿಲ್ಲೆಯ ಅಡೂರ್ ನಿವಾಸಿ ರವಿ ಎಂಬುವವರ ಮನೆಯಲ್ಲಿ ಮೈನವಿರೇಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯ ಡ್ರಾಯರ್ ಒಳಗೆ ಸೇರಿಕೊಂಡಿದ್ದ ಕೇರೆ ಹಾವಿನ ದೇಹಕ್ಕೆ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿಕೊಂಡಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮನೆಯ ಮಕ್ಕಳು ಆಟವಾಡುತ್ತಾ ಟೇಬಲ್ನ ಡ್ರಾಯರ್ ತೆರೆದಾಗ ಅದರೊಳಗೆ ಹಾವಿರುವುದನ್ನು ಕಂಡು ತಕ್ಷಣವೇ ದೊಡ್ಡವರಿಗೆ ವಿಷಯ ಮುಟ್ಟಿಸಿದ್ದಾರೆ. ಮಕ್ಕಳ ಈ ಸಮಯೋಚಿತ ನಿರ್ಧಾರದಿಂದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ. ಹಾವನ್ನು ಗಮನಿಸಿದಾಗ ಅದರ ದೇಹದ ಮಧ್ಯಭಾಗದಲ್ಲಿ ಚಿನ್ನದ ಉಂಗುರವೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಬಹುಶಃ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಾ ಸಣ್ಣ ಸೀಳಿನ ಮೂಲಕ ಡ್ರಾಯರ್ ಒಳಗೆ ಹೋಗುವಾಗ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆ: ರಿಷಬ್ ಶೆಟ್ಟಿ
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. ವಿಜಯ್ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದು ಅವರು ಹಾರೈಸಿದ್ದಾರೆ. ವಿಜಯ್ ಅವರ ಈ ಅಸಾಧಾರಣ ಸಾಧನೆಯು ಇನ್ನಷ್ಟು ಯುವ ಜನರಿಗೆ ಸ್ಫೂರ್ತಿಯಾಗಲಿ ಎಂದು ರಿಷಬ್ ಶೆಟ್ಟಿ ಅವರು ತಮ್ಮ ಪೋಸ್ಟ್ನಲ್ಲಿ ಆಶಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Tue, 5 May 26




