Madhya Pradesh: ಮದುವೆ ಮನೆಯಲ್ಲಿ ಗುಂಡಿನ ದಾಳಿ; ಒಬ್ಬ ಸಾವು, ಮೂವರ ಬಂಧನ

ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಗುಂಡಿನ ದಾಳಿ ನಡೆಸಿದ ವಿಡಿಯೋಗಳು ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿವೆ. ದಾಳಿಕೋರರು ನುಗ್ಗುತ್ತಿದ್ದಂತೆ ಜನರು ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Madhya Pradesh: ಮದುವೆ ಮನೆಯಲ್ಲಿ ಗುಂಡಿನ ದಾಳಿ; ಒಬ್ಬ ಸಾವು, ಮೂವರ ಬಂಧನ
ಗುಂಡು ಹಾರಿಸುತ್ತಿರುವವನ ಫೋಟೋ
Updated By: Lakshmi Hegde

Updated on: Dec 14, 2021 | 9:34 AM

ಭೋಪಾಲ್​: ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆ ನಿನ್ನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಹತ್ಯೆಯನ್ನು ಮಾಡಿದವರು ಬಲಪಂಥೀಯ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ವ್ಯಕ್ತಿಯ ಹತ್ಯೆ ವಿರೋಧಿಸಿ ನಿನ್ನೆ ಸಂಜೆ ಪ್ರತಿಭಟನೆಗಳೂ ನಡೆದಿವೆ.  ಅಂದಹಾಗೆ ಸದ್ಯ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ರಾಂಪಾಲ್​ ಬೆಂಬಲಿಗರು ಈ ಮದುವೆ ನಡೆಸುತ್ತಿದ್ದರು. ರಾಂಪಾಲ್​ ಮೂಲತಃ ಹರ್ಯಾಣದವನಾಗಿದ್ದು, ಮಗು ಸೇರಿ ಐವರು ಮಹಿಳೆಯರ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿ ಇದ್ದಾನೆ.

ಈ ಮದುವೆಯನ್ನು ಕಾನೂನು ಬಾಹಿರವಾಗಿ ಆಯೋಜಿಸಲಾಗಿದೆ ಎಂದು ಆರೋಪಿಸಿ, ಶಸ್ತ್ರಗಳೊಂದಿಗೆ ಬಂದ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಮಿತ್​ ವರ್ಮಾ ತಿಳಿಸಿದ್ದಾರೆ. ಆದರೆ ರಾಂಪಾಲ್​​ನ ಅನುಯಾಯಿಗಳು ಹೇಳೋದು ಬೇರೆ, ನಾವು ಇಂಥ ವಿವಾಹ ಸಮಾರಂಭವನ್ನು ವಿವಿಧ ಕಡೆಗೆ ನಡೆಸುತ್ತೇವೆ. ಕೇವಲ 17 ನಿಮಿಷದಲ್ಲಿ ಈ ಮದುವೆಗಳು ನಡೆಯುತ್ತವೆ. ಆದರೆ ಇಂಥ ವಿವಾಹಗಳು ಹಿಂದು ಧರ್ಮಕ್ಕೆ ವಿರೋಧ ಎಂದು ದಾಳಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಗುಂಡಿನ ದಾಳಿ ನಡೆಸಿದ ವಿಡಿಯೋಗಳು ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿವೆ. ದಾಳಿಕೋರರು ನುಗ್ಗುತ್ತಿದ್ದಂತೆ ಜನರು ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು.  ಪುಲ್​ ಓವರ್​ ಧರಿಸಿದ ವ್ಯಕ್ತಿಯೊಬ್ಬ ಗನ್​ ಹಿಡಿದು ನಿಂತ ಫೋಟೋಗಳೂ ಕೂಡ ವೈರಲ್ ಆಗಿದೆ. ಆದರೆ ಪೊಲಿಸರು ಆತನನ್ನು ಬಂಧಿಸಿದ್ದಾರಾ? ಇಲ್ಲವಾ ಎಂಬುದು ಗೊತ್ತಾಗಿಲ್ಲ. ಈ ಘಟನೆಯಲ್ಲಿ ಗುಂಡುಬಿದ್ದಿದ್ದು ಮಾಜಿ ಸರ್​ಪಂಚ್​ ದೇವಿಲಾಲ್​ ಮೀನಾ ಅವರಿಗೆ. ತೀವ್ರವಾಗಿ ಗಾಯಗೊಂಡ ಅವನ್ನು ರಾಜಸ್ಥಾನದ ಕೋಟಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಂತರ ದಾಳಿಕೋರರನ್ನು ಅತಿಥಿಗಳೇ ಹಿಮ್ಮೆಟ್ಟಿಸಿದ್ದಾರೆ.

ಇದೀಗ ಮೃತಪಟ್ಟ ಮಾಜಿ ಸರ್​ಪಂಚ್​ ಮೀನಾ ಈ ಹಿಂದೆ 2 ಬಾರಿ ಸರ್​ಪಂಚ್ ಆಗಿದ್ದವರು. ಶಾಮ್​ಗಡ್​ ಪ್ರದೇಶದವರಾಗಿದ್ದಾರೆ. ಮದುವೆ ಸಮಾರಂಭದ ಮುಖ್ಯ ಆಯೋಜಕರು ಇವರೇ ಆಗಿದ್ದಾರೆ. ಇದೀಗ ಒಟ್ಟಾರೆ 11 ಮಂದಿ ವಿರುದ್ಧ ಕೇಸ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಒಮಿಕ್ರಾನ್​ ತಪಾಸಣೆಗೆ ನಿರ್ದಿಷ್ಟ ವಿಧಾನ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ; 90 ನಿಮಿಷದಲ್ಲಿ ವರದಿ ಪಡೆಯಬಹುದು !