Mumbai Rains: ಮಹಾರಾಷ್ಟ್ರದ ರಾಯಘಡದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿ 36 ಜನ ಸಾವು

| Updated By: ಸುಷ್ಮಾ ಚಕ್ರೆ

Updated on: Jul 23, 2021 | 3:07 PM

ಮಹಾರಾಷ್ಟ್ರದ ರಾಯ್‌ಗಢದಲ್ಲಿ ಭೀಕರ ಭೂಕುಸಿತ ನಡೆದಿದ್ದು, 36 ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.

Mumbai Rains: ಮಹಾರಾಷ್ಟ್ರದ ರಾಯಘಡದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿ 36 ಜನ ಸಾವು
ಮಹಾರಾಷ್ಟ್ರದ ಪ್ರವಾಹದ ದೃಶ್ಯ
Follow us on

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಮಳೆಯ (Maharashtra Rains) ಆರ್ಭಟ ಜೋರಾಗಿದೆ. ಇಲ್ಲಿನ ರಾಯಘಡ (Raigad) ಜಿಲ್ಲೆಯ ಕರಾವಳಿ ಭಾಗದಲ್ಲಿ ಮೂರು ಕಡೆ ಭಾರೀ ಭೂಕುಸಿತ ಸಂಭವಿಸಿದ್ದು, 36 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ರಾಯ್‌ಗಢದಲ್ಲಿ ಭೀಕರ ದುರಂತ ನಡೆದಿದ್ದು, 36 ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಇನ್ನೂ 30 ಜನರು ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿದ್ದ 15 ಜನರನ್ನು ರಕ್ಷಿಸಲಾಗಿದೆ. ಉಳಿದ ಜನರಿಗಾಗಿ ಎನ್‌ಡಿಆರ್‌ಎಫ್‌ (NDRF) ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ತಗ್ಗು ಪ್ರದೇಶದ ಮತ್ತು ಸೂಕ್ಷ್ಮ ವಲಯದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಭೂಕುಸಿತ ಮತ್ತು ಭಾರೀ ಪ್ರವಾಹದಿಂದ ನೂರಾರು ಜನರು ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಹೆಲಿಕಾಪ್ಟರ್​ಗಳನ್ನು ಬಳಸಲಾಗುತ್ತಿದೆ. ರಾಯಘಡದಿಂದ ಹೆಲಿಕಾಪ್ಟರ್ ಮೂಲಕ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಫೋನ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿಯೂ ತಿಳಿಸಿದ್ದಾರೆ. ರಾಯಘಡದ ಪ್ರವಾಹಪೀಡಿತ ಸ್ಥಳಗಳಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಮುಂಬೈ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇನ್ನೂ ನಾಲ್ಕೈದು ದಿನಗಳ ಭಾರೀ ಮಳೆಯಾಗುವುದರಿಂದ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಭಾರಿ ಮಳೆಯ ಮಧ್ಯೆ, ರಾಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ. ಮುಂಬೈನ ಗೋವಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು ಇದರಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಬಿಎಂಸಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಮಹಾರಾಷ್ಟ್ರದ ಮಳೆಯಲ್ಲಿ ಸಿಲುಕಿದವರನ್ನು ರಕ್ಷಿಸಲು 9 ಎನ್​ಡಿಆರ್​ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರಿ‌ ಮಳೆ; ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ

ಮಲೆನಾಡಿನಲ್ಲಿ ಭಾರೀ ಮಳೆ: ಸೋರುತ್ತಿದೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ, ಮುಳುಗುತ್ತಿವೆ ಜಮೀನು, ರಸ್ತೆ; ಎಲ್ಲೆಲ್ಲೂ ಅವ್ಯವಸ್ಥೆ

(Mumbai Rains Live Updates 36 Dead more than 30 Trapped in Raigad Landslides)

Published On - 2:57 pm, Fri, 23 July 21