ಕಾಂಗ್ರೆಸ್-ಆರ್​​ಜೆಡಿಯಿಂದ ದೇಶದ ಎಲ್ಲ ತಾಯಂದಿರಿಗೆ ಅವಮಾನ; ಅಮ್ಮನನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ

ಬಿಹಾರದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಹಾಗೂ ಆರ್​​ಜೆಡಿ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ಬಗ್ಗೆ ಕಾರ್ಯಕರ್ತರು ಅಶ್ಲೀಲ ಪದಗಳ ಘೋಷಣೆಗಳನ್ನು ಕೂಗಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ಇಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಈ ಘಟನೆ ದೇಶದ ಎಲ್ಲಾ ತಾಯಂದಿರಿಗೆ ಮಾಡಿದ ಅವಮಾನ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನವದೆಹಲಿ, ಸೆಪ್ಟೆಂಬರ್ 2: ಬಿಹಾರದಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ (Bihar Rally) ತಮ್ಮ ಮತ್ತು ತಮ್ಮ ತಾಯಿಯ ವಿರುದ್ಧ ಅಶ್ಲೀಲ ಪದಗಳಿಂದ ಕೂಡಿದ ಘೋಷಣೆಗಳನ್ನು ಕೂಗಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು (ಮಂಗಳವಾರ) ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳ ಈ ವರ್ತನೆ ದೇಶಾದ್ಯಂತ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಹಾಗೂ ಅವಮಾನ ಎಂದು ಟೀಕಿಸಿದ ಪ್ರಧಾನಿ ಮೋದಿ, ಇತ್ತೀಚೆಗೆ ಮೃತರಾದ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ರಾಜಕೀಯ ವೇದಿಕೆಯಿಂದ ನನ್ನ ಮೃತ ತಾಯಿಯನ್ನು ಈ ರೀತಿ ಅವಮಾನಿಸಲಾಗುತ್ತದೆ ಎಂದು ನಾನು ಎಂದೂ ಊಹಿಸಿರಲಿಲ್ಲ ಎಂದು ಅವರು ಹೇಳಿದರು.

“ತಾಯಿಯೇ ನಮ್ಮ ಜಗತ್ತು. ತಾಯಿ ನಮ್ಮ ಸ್ವಾಭಿಮಾನ. ಈ ಸಂಪ್ರದಾಯ ಸಮೃದ್ಧವಾದ ಬಿಹಾರದ ನೆಲದಲ್ಲಿ ಕೆಲವು ದಿನಗಳ ಹಿಂದೆ ಏನಾಯಿತೋ ಅದನ್ನು ನಾನು ಊಹಿಸಿರಲಿಲ್ಲ. ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್ ವೇದಿಕೆಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು” ಎಂದು ಮೋದಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದ್ದಾರೆ.


“ಈ ನಿಂದನೆ ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ದೇಶದ ಎಲ್ಲ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ. ಬಿಹಾರದ ಪ್ರತಿಯೊಬ್ಬ ತಾಯಿಯೂ ಇದನ್ನು ನೋಡಿದ ಮತ್ತು ಕೇಳಿದ ನಂತರ ಎಷ್ಟು ಬೇಸರಪಟ್ಟುಕೊಂಡಿದ್ದೀರಿ, ತಲೆ ತಗ್ಗಿಸಿದ್ದೀರಿ ಎಂದು ನನಗೆ ತಿಳಿದಿದೆ. ಆ ಘಟನೆ ಬಗ್ಗೆ ನನಗೆ ಎಷ್ಟು ನೋವಾಗಿದೆಯೋ ಅಷ್ಟೇ ನೋವನ್ನು ಬಿಹಾರದ ಜನರು ಸಹ ಅನುಭವಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ, ರಷ್ಯಾದ ಅಧ್ಯಕ್ಷರಿಗೆ ಹಸ್ತಲಾಘವ, ಅಪ್ಪುಗೆ, ತಮಾಷೆ; ಟ್ರಂಪ್ ನಿದ್ರೆಗೆಡಿಸಿದ ಮೋದಿಯ ವಿಡಿಯೋ ಇಲ್ಲಿದೆ

ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ನನ್ನ ತಾಯಿಯನ್ನು ಈ ರೀತಿ ನಿಮ್ಮ ಕೆಟ್ಟ ರಾಜಕೀಯದೊಳಗೆ ಏಕೆ ಎಳೆದಿರಿ? ಎಂದು ಮೋದಿ ಪ್ರಶ್ನಿಸಿದ್ದಾರೆ. “ನನ್ನ ತಾಯಿಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ, ಹಾಗಾದರೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಅವರನ್ನು ಏಕೆ ನಿಂದಿಸಿತು?” ಎಂದು ಅವರು ಕೇಳಿದ್ದಾರೆ.


ತಾಯಂದಿರ ಹೋರಾಟಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಒಬ್ಬ ಬಡ ತಾಯಿ ತನ್ನ ಹೋರಾಟಗಳ ಮೂಲಕ, ತನ್ನ ಮಕ್ಕಳಿಗೆ ಶಿಕ್ಷಣ ಮತ್ತು ಮೌಲ್ಯಗಳನ್ನು ಒದಗಿಸುತ್ತಾಳೆ, ಉದಾತ್ತ ಸದ್ಗುಣಗಳನ್ನು ತುಂಬುತ್ತಾಳೆ. ಅದಕ್ಕಾಗಿಯೇ ತಾಯಿಯ ಸ್ಥಾನವನ್ನು ದೇವರು ಮತ್ತು ದೇವತೆಗಳಿಗಿಂತಲೂ ಹೆಚ್ಚಿನದಾಗಿ ಪರಿಗಣಿಸಲಾಗುತ್ತದೆ. ಆದರೆ, ಇಂತಹ ಸಾಮಾನ್ಯ ತಾಯಿಯ ತ್ಯಾಗ ಮತ್ತು ಆಕೆಯ ಮಗನ ಕಷ್ಟಗಳನ್ನು ರಾಜಮನೆತನಗಳಲ್ಲಿ ಜನಿಸಿದ ಯುವ ರಾಜಕುಮಾರರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರೆಲ್ಲರೂ ಹುಟ್ಟುವಾಗಲೇ ಬಾಯಿಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವರು. ಅವರಿಗೆ ಎಲ್ಲವೂ ರಾಜಕೀಯವೇ. ಈ ಘಟನೆ ನನಗೆ ಬಹಳ ನೋವುಂಟುಮಾಡಿದೆ ಎಂದು ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನು ಮೋದಿ ಟೀಕಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿಯ ಬಿಹಾರ ಯಾತ್ರೆಯಲ್ಲಿ ಮೋದಿಯ ತಾಯಿಯ ನಿಂದನೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಬಿಹಾರದ ದರ್ಭಾಂಗದಲ್ಲಿ ರಾಹುಲ್ ಗಾಂಧಿಯವರ ‘ಮತದಾನ ಅಧಿಕಾರ ಯಾತ್ರೆ’ಯ ಸಂದರ್ಭದಲ್ಲಿ ಗದ್ದಲ ಭುಗಿಲೆದ್ದಿತು. ಆ ವೇಳೆ ಪ್ರಧಾನಿ ಮೋದಿ ಅವರ ತಾಯಿಯನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಘೋಷಣೆಗಳನ್ನು ಕೂಗಲಾಯಿತು. ಕಾಂಗ್ರೆಸ್-ಆರ್‌ಜೆಡಿ ವೇದಿಕೆಯಿಂದ ಪ್ರಧಾನಿ ಮೋದಿಯ ತಾಯಿಯನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಘೋಷಣೆಗಳನ್ನು ಕೂಗಲಾಯಿತು. ಇದು ತೀವ್ರ ವಿವಾದಕ್ಕೆ ಕಾರಣವಾಯಿತು. ಬಳಿಕ, ನಿಂದನಾತ್ಮಕ ಘೋಷಣೆ ಕೂಗಿದ ಮೊಹಮ್ಮದ್ ರಿಜ್ವಿ ಅಲಿಯಾಸ್ ರಜಾ (20) ಎಂದು ಗುರುತಿಸಲಾದ ಆರೋಪಿಯನ್ನು ನಂತರ ದರ್ಭಾಂಗ ಪಟ್ಟಣದ ಸಿಂಗ್ವಾರಾ ಪ್ರದೇಶದಿಂದ ಬಂಧಿಸಲಾಯಿತು. ಬಿಜೆಪಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿತ್ತು. ಕಾಂಗ್ರೆಸ್ ಅಥವಾ ಆರ್​ಜೆಡಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Tue, 2 September 25