ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಎಂಕೆ ಸ್ಟಾಲಿನ್ ಆರೋಪ ‘ಸತ್ಯಕ್ಕೆ ದೂರ’ವಾದುದು: ಕೇಂದ್ರ

ತಮಿಳುನಾಡನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂಬ ಆರೋಪಕ್ಕೆ ಕೇಂದ್ರ ಪ್ರತಿಕ್ರಿಯಿಸಿದೆ. ನಿಜ ಸಂಗತಿ ಏನೆಂದರೆ ಕಳೆದ 10 ವರ್ಷಗಳಲ್ಲಿ ಪ್ರಸ್ತುತ ಎನ್‌ಡಿಎ ಸರ್ಕಾರವು ರೈಲ್ವೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ತಮಿಳುನಾಡಿನ ಸಾಮಾಜಿಕ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಧನಸಹಾಯವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ

ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಎಂಕೆ ಸ್ಟಾಲಿನ್ ಆರೋಪ ‘ಸತ್ಯಕ್ಕೆ ದೂರ’ವಾದುದು: ಕೇಂದ್ರ
ಎಂಕೆ ಸ್ಟಾಲಿನ್
ರಶ್ಮಿ ಕಲ್ಲಕಟ್ಟ

Updated on: Jul 12, 2024 | 9:12 PM

ದೆಹಲಿ ಜುಲೈ 12: ಕೇಂದ್ರದ ಯೋಜನೆಗಳ ಮಂಜೂರಾತಿಯಲ್ಲಿ ತಮಿಳುನಾಡನ್ನು (Tamil nadu) ನಿರ್ಲಕ್ಷಿಸಲಾಗಿದೆ ಎಂಬ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಆರೋಪವನ್ನು ನರೇಂದ್ರ ಮೋದಿ (Narendra Modi) ಸರ್ಕಾರ ಶುಕ್ರವಾರ ತಿರಸ್ಕರಿಸಿದೆ. ಮುಖ್ಯಮಂತ್ರಿಯವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ನಿಜ ಸಂಗತಿ ಏನೆಂದರೆ ಕಳೆದ 10 ವರ್ಷಗಳಲ್ಲಿ ಪ್ರಸ್ತುತ ಎನ್‌ಡಿಎ ಸರ್ಕಾರವು ರೈಲ್ವೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ತಮಿಳುನಾಡಿನ ಸಾಮಾಜಿಕ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಧನಸಹಾಯವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಸರ್ಕಾರದ ಮೂಲಗಳು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸರ್ಕಾರದ ಪ್ರಕಾರ, 2009 ರಿಂದ 2014 ರ ನಡುವೆ ರೈಲ್ವೆ ಅಭಿವೃದ್ಧಿಗಾಗಿ ತಮಿಳುನಾಡಿಗೆ ಮೀಸಲಿಟ್ಟ ಬಜೆಟ್ ಸರಾಸರಿ ₹ 879 ಕೋಟಿ. ಈಗ ಕೇಂದ್ರವು 2024-25ರಲ್ಲಿ ರಾಜ್ಯಕ್ಕೆ ರೈಲ್ವೆಗಾಗಿ ₹ 6,331 ಕೋಟಿಗಳ ದಾಖಲೆಯ ಬಜೆಟ್ ಅನ್ನು ನಿಗದಿಪಡಿಸಿದೆ.

ತಮಿಳುನಾಡಿನಲ್ಲಿ ಮೊದಲ ವಂದೇ ಭಾರತ್ ರೈಲನ್ನು ನವೆಂಬರ್ 11, 2022 ರಂದು ಚಾಲನೆ ಮಾಡಲಾಗಿದೆ. ಪ್ರಸ್ತುತ, ರಾಜ್ಯದಲ್ಲಿ 8 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. 2014ರಲ್ಲಿ ರಾಜ್ಯದ ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಉದ್ದ 4,985 ಕಿಲೋಮೀಟರ್‌ಗಳಾಗಿದ್ದು, ಈಗ ಶೇ.40ರಷ್ಟು ಏರಿಕೆಯಾಗಿ 6,806 ಕಿಲೋಮೀಟರ್‌ಗಳಿಗೆ ತಲುಪಿದೆ ಎಂದು ಕೇಂದ್ರ ಹೇಳಿದೆ.

₹ 64,704 ಕೋಟಿ ವೆಚ್ಚದಲ್ಲಿ 2,094 ಕಿಲೋಮೀಟರ್ ಉದ್ದದ ಯೋಜನೆಗಳನ್ನು 2014 ರಿಂದ ತಮಿಳುನಾಡಿಗೆ ನೀಡಲಾಗಿದೆ. ಭಾರತ ಸರ್ಕಾರವು ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು ₹ 2 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ನಾಗರಿಕ ವಿಮಾನಯಾನ ವಲಯದಲ್ಲಿ ತಮಿಳುನಾಡಿನಲ್ಲಿ ₹ 4,000 ಕೋಟಿ ಮೌಲ್ಯದ ಐದು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪೈಕಿ ಎರಡು ಪೂರ್ಣಗೊಂಡಿವೆ. ₹ 2,467 ಕೋಟಿ ವೆಚ್ಚದಲ್ಲಿ ಚೆನ್ನೈ ವಿಮಾನ ನಿಲ್ದಾಣದ ಆಧುನೀಕರಣವು ಎರಡು ಹಂತಗಳಲ್ಲಿ ಅನುಷ್ಠಾನದಲ್ಲಿದೆ, ಮೊದಲನೆಯದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2023 ರಲ್ಲಿ ಉದ್ಘಾಟಿಸಿದರು.

ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ₹ 1,112 ಕೋಟಿ ಮೌಲ್ಯದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ನಿರ್ಮಾಣ ಪೂರ್ಣಗೊಂಡಿದೆ. ಇದನ್ನು 2024 ರ ಜನವರಿಯಲ್ಲಿ ಪ್ರಧಾನ ಮಂತ್ರಿಯವರು ಉದ್ಘಾಟಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

62 ಪೂರ್ಣಗೊಂಡ ಯೋಜನೆಗಳಲ್ಲಿ ಬಂದರು ಮತ್ತು ಹಡಗು ವಲಯದಲ್ಲಿ ತಮಿಳುನಾಡು ಪಡೆದ ಒಟ್ಟು ಹೂಡಿಕೆ ₹10,168 ಕೋಟಿಗಳಷ್ಟಿದೆ. ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್‌ಐಡಿಎಫ್) ಅಡಿಯಲ್ಲಿ ತಮಿಳುನಾಡಿಗೆ ₹1,574 ಕೋಟಿ ಮೌಲ್ಯದ 64 ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ನೀಡಲಾಗಿದ್ದು, ಈ ಪೈಕಿ 34 ಪೂರ್ಣಗೊಂಡಿವೆ.

ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ₹ 20,000 ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಹೇಳಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ತಮಿಳುನಾಡಿನ ಬೀದಿ ವ್ಯಾಪಾರಿಗಳಿಗೆ ₹ 670 ಕೋಟಿ ಮೌಲ್ಯದ 5 ಲಕ್ಷಕ್ಕೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ, ಆದರೆ ತಮಿಳುನಾಡು 46 ಲಕ್ಷಕ್ಕೂ ಹೆಚ್ಚು ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ₹ 11 ಲಕ್ಷ ಕೋಟಿ ಮೊತ್ತದ ಲಾಭ ಪಡೆದಿದ್ದಾರೆ.

ಇದನ್ನೂ ಓದಿ: ಜುಲೈ13 ರಂದು ಮುಂಬೈಗೆ ಪ್ರಧಾನಿ ಮೋದಿ ಭೇಟಿ; ಇಲ್ಲಿದೆ ಕಾರ್ಯಕ್ರಮದ ವೇಳಾಪಟ್ಟಿ

ತಮಿಳುನಾಡಿನಲ್ಲಿ 1 ಕೋಟಿಗೂ ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. 6,500 ಗ್ರಾಮಗಳು ಜಲ ಜೀವನ್ ಮಿಷನ್ ಅಡಿಯಲ್ಲಿ 100 ಪ್ರತಿಶತ ಮನೆಗಳಲ್ಲಿ ಟ್ಯಾಪ್ ಸಂಪರ್ಕಗಳನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us