ನಿಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ 22 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣ ವಜಾಗೊಳಿಸುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಒತ್ತಿ ಹೇಳಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯನ್ನು ಮಂಗಳವಾರ ರದ್ದುಗೊಳಿಸಿತ್ತು.

ನಿಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ
ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ

Updated on: May 17, 2026 | 7:21 AM

ನವದೆಹಲಿ, ಮೇ 17: ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​​ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ವಿಪಕ್ಷ ನಾಯಕ ರಾಹುಲ್​​ ಗಾಂಧಿ ಆಗ್ರಹಿಸಿದ್ದಾರೆ. 22 ಲಕ್ಷ NEET ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗಿದೆ. ಆದರೂ ಮೋದಿ ಜೀ ಒಂದು ಮಾತೂ ಆಡುತ್ತಿಲ್ಲ. ಧರ್ಮೇಂದ್ರ ಪ್ರಧಾನರನ್ನು ತಕ್ಷಣ ವಜಾಗೊಳಿಸಿ, ಇಲ್ಲವೇ ನೀವು ಹೊಣೆ ಹೊರಿ ಎಂದು ಅವರು ಎಕ್ಸ್​​ ಪೋಸ್ಟ್​​ ಮೂಲಕ ಆಗ್ರಹಿಸಿದ್ದಾರೆ.

ವಿಡಿಯೋ ಹಂಚಿಕೊಂಡ ರಾಹುಲ್​​ ಗಾಂಧಿ

ಎರಡು ವರ್ಷಗಳಿಂದ 22 ಲಕ್ಷ ವಿದ್ಯಾರ್ಥಿಗಳು ಹಗಲು-ರಾತ್ರಿ ಶ್ರಮಪಟ್ಟಿದ್ದರು. ಆದರೆ ಅವರ ಪರಿಶ್ರಮ ವ್ಯರ್ಥವಾಗಿದೆ. ಪರೀಕ್ಷೆಗೆ ಎರಡು ದಿನ ಮೊದಲೇ NEET ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಹಂಚಿಕೆಯಾಗಿದ್ದು ಇಡೀ ದೇಶಕ್ಕೆ ಗೊತ್ತಿದೆ ಎಂದು ರಾಹುಲ್​​ ಗಾಂಧಿ ಆರೋಪಿಸಿದ್ದಾರೆ.ಭಾರತದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಇದಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಸಮಿತಿ ನೀಡಿದ ಶಿಫಾರಸುಗಳನ್ನು ಅವರು ಕಸದ ಬುಟ್ಟಿಗೆ ಹಾಕಿದರು. ಸಮಿತಿಯಲ್ಲಿ ವಿರೋಧ ಪಕ್ಷದವರೂ ಇದ್ದು, ಅದಕ್ಕೆ ಅರ್ಥವೇ ಇಲ್ಲ. ನೀವು ಭಾರತದ ಮೂಲ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಪ್ರಧಾನಮಂತ್ರಿ ತಕ್ಷಣ ಆದೇಶ ನೀಡಿ ಧರ್ಮೇಂದ್ರ ಪ್ರಧಾನರನ್ನು ವಜಾಗೊಳಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಹಾಕಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯನ್ನು ಮಂಗಳವಾರ ರದ್ದುಗೊಳಿಸಿತ್ತು. ಪರೀಕ್ಷೆಯಲ್ಲಿದ್ದ ಹಲವು ಪ್ರಶ್ನೆಗಳು ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿದ್ದವು ಎಂಬ ಸಾಕ್ಷ್ಯಗಳು ತನಿಖೆಯಲ್ಲಿ ಪತ್ತೆಯಾಗಿದ್ದವು. ಬಳಿಕ ಕೇಂದ್ರ ಸರ್ಕಾರ ಪ್ರಕರಣವನ್ನು CBIಗೆ ಹಸ್ತಾಂತರಿಸಿತ್ತು. ಆ ಬೆನ್ನಲ್ಲೇ ಮರು ಪರೀಕ್ಷೆಯನ್ನು ಜೂನ್ 21ಕ್ಕೆ ನಿಗದಿಪಡಿಸಿರುವ ಬಗ್ಗೆ ತಿಳಿಸಲಾಗಿತ್ತು. ಪರೀಕ್ಷೆ ರದ್ದಾದ ಪರಿಣಾಮ ಸುಮಾರು 23 ಲಕ್ಷ ವಿದ್ಯಾರ್ಥಿಗಳಿಗೆ ತೀವ್ರ ಹಿನ್ನಡೆಯಾಗಿದೆ. 2019ರಲ್ಲಿ NTA ಪರೀಕ್ಷೆ ನಡೆಸಲು ಆರಂಭಿಸಿದ ಬಳಿಕ ಸಂಪೂರ್ಣ NEET-UG ಪರೀಕ್ಷೆಯನ್ನೇ ರದ್ದುಪಡಿಸಿರುವುದು ಇದೇ ಮೊದಲು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us