ವೃತ್ತಿಯಲ್ಲಿ ಬ್ಯೂಟಿಷಿಯನ್, ಗಂಡ ದಂತವೈದ್ಯ; ನೀಟ್ ಹಗರಣದಲ್ಲಿ ಸಿಕ್ಕಿಬಿದ್ದ ಮನಿಷಾ ಬಗ್ಗೆ ನಿಮಗೆಷ್ಟು ಗೊತ್ತು?

ನೀಟ್ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಏಜೆಂಟ್ ಎಂದು ಹೇಳಲಾದ ಪುಣೆ ಬ್ಯೂಟಿಷಿಯನ್ ಮನಿಷಾ ವಾಘ್ಮರೆ ಬಗ್ಗೆ ಹೊಸ ಹೊಸ ಸಂಗತಿಗಳು ಬಯಲಾಗುತ್ತಿವೆ. ನೀಟ್-ಯುಜಿ 2026 ರ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಪುಣೆ ಮೂಲದ ಬ್ಯೂಟಿಷಿಯನ್ ಆಗಿರುವ 46 ವರ್ಷದ ಮನೀಷಾ ಸಂಜಯ್ ವಾಘ್ಮೇರ್ ಅವರನ್ನು ಬಂಧಿಸಿದೆ. ಮನಿಷಾ ಪೇಪರ್ ಸೋರಿಕೆ ಮಾಡಿದ್ದಕ್ಕೆ ಆಕೆಗೆ ಕಮಿಷನ್ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಕೆಯ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ವೃತ್ತಿಯಲ್ಲಿ ಬ್ಯೂಟಿಷಿಯನ್, ಗಂಡ ದಂತವೈದ್ಯ; ನೀಟ್ ಹಗರಣದಲ್ಲಿ ಸಿಕ್ಕಿಬಿದ್ದ ಮನಿಷಾ ಬಗ್ಗೆ ನಿಮಗೆಷ್ಟು ಗೊತ್ತು?
Manisha

Updated on: May 16, 2026 | 6:59 PM

ನವದೆಹಲಿ, ಮೇ 16: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ದೇಶದ ಅತಿದೊಡ್ಡ ವೈದ್ಯಕೀಯ ಪರೀಕ್ಷೆ ನೀಟ್ ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಈ ಪ್ರಕರಣದ ಬೇರುಗಳನ್ನು ಸಿಬಿಐ ಅಗೆಯಲು ಪ್ರಾರಂಭಿಸಿದೆ. ಈ ಪ್ರಕರಣದ ಜಾಲ ರಾಜಸ್ಥಾನದಿಂದ ಮಹಾರಾಷ್ಟ್ರಕ್ಕೆ ಹರಡಿದೆ. ಮಹಾರಾಷ್ಟ್ರದಲ್ಲಿ ಸಿಬಿಐ ಮತ್ತೋರ್ವ ಮಾಸ್ಟರ್ ಮೈಂಡ್ ಅನ್ನು ಬಂಧಿಸಿದೆ. ಮಹಿಳೆಯಾಗಿರುವ ಈ ಆರೋಪಿಯ ಹೈ ಪ್ರೊಫೈಲ್ ಜೀವನಶೈಲಿ ಮತ್ತು ಬ್ಯಾಂಕ್ ವಹಿವಾಟುಗಳನ್ನು ನೋಡಿ ಸಿಬಿಐ ಕೂಡ ಆಘಾತಕ್ಕೊಳಗಾಗಿದೆ.

ಸಿಬಿಐನಿಂದ ಬಂಧಿತರಾದ ಈ ಮಹಿಳೆ ಆರ್ಥಿಕವಾಗಿ ಸ್ಥಿತಿವಂತ ಕುಟುಂಬದ ಹಿನ್ನೆಲೆಯಿಂದಲೇ ಬಂದವರು. ಅವರಿಗೆ ಹಣಕಾಸಿನ ತೊಂದರೆಯೇನೂ ಇರಲಿಲ್ಲ. ಆದರೂ ಲಕ್ಷಾಂತರ ರೂ. ಹಣದಾಸೆಗೆ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಿದ್ದಾರೆ. ಈ ಮಹಿಳೆಯ ಹೆಸರು ಮನೀಷಾ ವಾಘ್ಮರೆ. ಮನಿಷಾ ವೃತ್ತಿಯಲ್ಲಿ ಬ್ಯೂಟಿಷಿಯನ್. ಅವರು ಪುಣೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕೂಡ ನಡೆಸುತ್ತಿದ್ದರು. ವಿಶೇಷವೆಂದರೆ ಈ ಮಹಿಳೆಯ ಪತಿ ದಂತವೈದ್ಯರು. ಅವರು ಪುಣೆಯಲ್ಲಿ ತಮ್ಮದೇ ಆದ ಕ್ಲಿನಿಕ್ ಹೊಂದಿದ್ದಾರೆ.

ಇದನ್ನೂ ಓದಿ: ನೀಟ್ ಹಗರಣಕ್ಕೆ ಬಿಗ್ ಟ್ವಿಸ್ಟ್: ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಎನ್‌ಟಿಎ ತಜ್ಞೆ ಮನೀಷಾ ಮಂಢಾರೆ ಸಿಬಿಐ ಬಲೆಗೆ!

ಮೇ 3ರಂದು ನಡೆದ ನೀಟ್ ಪರೀಕ್ಷೆಯ ಮೊದಲು ಮತ್ತು ನಂತರ ಖೈರ್ನರ್ ಎಂಬ ಆರೋಪಿಯು ಯಶ್ ಯಾದವ್ ಎಂಬ ವಿದ್ಯಾರ್ಥಿಗೆ ನೀಟ್ ಪ್ರಶ್ನೆಪತ್ರಿಕೆಯನ್ನು ನೀಡಿದಾಗ ವಾಘ್ಮರೆ ಮತ್ತು ಇನ್ನೋರ್ವ ಆರೋಪಿ ಲೋಖಂಡೆ ಪರಸ್ಪರ ಸಂಪರ್ಕಕ್ಕೆ ಬಂದರು. ಅದರ ನಂತರ, ರಾಜಸ್ಥಾನದ ಬಿವಾಲ್ ಕುಟುಂಬದ ಸದಸ್ಯರಿಗೆ ಪ್ರಶ್ನೆಪತ್ರಿಕೆಯನ್ನು ನೀಡಲಾಯಿತು.

ಮನಿಷಾ ವಾಘ್ಮರೆ ಅವರ ಹಿನ್ನೆಲೆಯಲ್ಲಿ ಪರಿಶೀಲಿಸಿದ ನಂತರ, ಆಕೆಯ ಖಾತೆಗೆ ದೊಡ್ಡ ಪ್ರಮಾಣದ ಹಣ ಬರುತ್ತಿರುವುದು ಕಂಡುಬಂದಿದೆ. ನೀಟ್ ಪರೀಕ್ಷೆಗೆ ಮೊದಲು ಮತ್ತು ನಂತರ, ದೇಶದ ವಿವಿಧ ಭಾಗಗಳಿಂದ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ಹಣ ಅವರ ಖಾತೆಗೆ ಬಂದಿತ್ತು. ಆರಂಭಿಕ ತನಿಖೆಯಲ್ಲಿ ಸಿಬಿಐ 20 ಲಕ್ಷ ರೂ.ಗಳ ವಹಿವಾಟುಗಳನ್ನು ಕಂಡುಹಿಡಿದಿದೆ. ಮೂಲಗಳ ಪ್ರಕಾರ, ಮನಿಷಾ ವಾಘ್ಮರೆ ಅವರ ಖಾತೆಗೆ ಹಣ ಕಳುಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಸಂಬಂಧಿಕರು ಇತರ ರಾಜ್ಯಗಳವರು.

ಇದನ್ನೂ ಓದಿ: ಕೊನೆಗೂ ಸಿಕ್ಕಿಬಿದ್ದ ನೀಟ್ ಹಗರಣದ ಕಿಂಗ್​ಪಿನ್; ಕೋಚಿಂಗ್​ ಕ್ಲಾಸ್​ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿದ್ದ ಪ್ರೊಫೆಸರ್ ಬಂಧನ

ಈ ಹಣವು ಇತರ ರಾಜ್ಯಗಳಿಂದ ಮನಿಷಾಳ ಖಾತೆಗೆ ಬಂದಿದೆ. ಅಂತಹ 21 ಖಾತೆಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಅದಕ್ಕಾಗಿಯೇ ಈ ಎಲ್ಲಾ ಖಾತೆಗಳು ಈಗ ಸಿಬಿಐನ ಕಣ್ಗಾವಲಿನಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯ ಹೊರಬೀಳುತ್ತಿದ್ದಂತೆ ಹೆದರಿದ ಮನಿಷಾ ವಾಘ್ಮರೆ ಮತ್ತು ಲೋಖಂಡೆ ತಮ್ಮ ಮೊಬೈಲ್‌ಗಳಿಂದ ಮೆಸೇಜ್​ಗಳು ಮತ್ತು ಚಾಟ್‌ಗಳನ್ನು ಡಿಲೀಟ್ ಮಾಡಿದ್ದರು. ಆದರೆ ಸಿಬಿಐ ಮನಿಷಾ ಮತ್ತು ಇತರ ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡಿತು. ಡೇಟಾ ಮರುಪಡೆಯುವಿಕೆಗಾಗಿ ಈ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಎಲ್ಲಾ ಆರೋಪಿಗಳು ಸಿಂಡಿಕೇಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us