AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಸಿಕ್ಕಿಬಿದ್ದ ನೀಟ್ ಹಗರಣದ ಕಿಂಗ್​ಪಿನ್; ಕೋಚಿಂಗ್​ ಕ್ಲಾಸ್​ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿದ್ದ ಪ್ರೊಫೆಸರ್ ಬಂಧನ

ಇಡೀ ದೇಶಾದ್ಯಂತ ನೀಟ್ ಹಗರಣ ಭಾರೀ ಚರ್ಚೆಗೆ ಒಳಗಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಈ ತಿಂಗಳ ಆರಂಭದಲ್ಲಿ ನಡೆದಿದ್ದ ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಎಲ್ಲಿಂದ ಎಂದು ಸಿಬಿಐ ತನಿಖೆ ನಡೆಸಿತ್ತು. ಕೊನೆಗೂ ಈ ಹಗರಣದ ಕಿಂಗ್​ಪಿನ್ ಸಿಕ್ಕಿಬಿದ್ದಿದ್ದಾರೆ. ಪುಣೆಯಲ್ಲಿ ಕೋಚಿಂಗ್ ತರಗತಿಯನ್ನು ನಡೆಸುತ್ತಿದ್ದ ಸಮಯದಲ್ಲಿ NEET ಯುಜಿ ಪತ್ರಿಕೆ ಹಂಚಿದ್ದ ಕೆಮಿಸ್ಟ್ರಿ ಪ್ರೊಫೆಸರ್ ಪಿ.ವಿ ಕುಲಕರ್ಣಿ ಅವರನ್ನು ಬಂಧಿಸಲಾಗಿದೆ.

ಕೊನೆಗೂ ಸಿಕ್ಕಿಬಿದ್ದ ನೀಟ್ ಹಗರಣದ ಕಿಂಗ್​ಪಿನ್; ಕೋಚಿಂಗ್​ ಕ್ಲಾಸ್​ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿದ್ದ ಪ್ರೊಫೆಸರ್ ಬಂಧನ
Pv Kulkarni
ಸುಷ್ಮಾ ಚಕ್ರೆ
|

Updated on:May 15, 2026 | 9:45 PM

Share

ನವದೆಹಲಿ, ಮೇ 15: ನೀಟ್ ಯುಜಿ (NEET UG 2026) ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ಹಿಂದಿನ ಕಿಂಗ್‌ಪಿನ್ ಯಾರೆಂದು ಕೊನೆಗೂ ಕೇಂದ್ರ ತನಿಖಾ ದಳ (ಸಿಬಿಐ) ಪತ್ತೆಹಚ್ಚಿದೆ. ಪುಣೆಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಕೆಮಿಸ್ಟ್ರಿ ಪ್ರೊಫೆಸರ್ ಪಿ.ವಿ ಕುಲಕರ್ಣಿ ಎಂಬುವವರೇ ಈ ಹಗರಣದ ರೂವಾರಿ ಎಂಬುದು ಬಯಲಾಗಿದೆ. ಅವರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪ್ರಶ್ನೆ ಪತ್ರಿಕೆ ತಯಾರಿಕೆ ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಭಾಗಿಯಾಗಿದ್ದರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಸುವ ತಂಡದಲ್ಲಿಯೂ ಅವರಿದ್ದರು. ಅವರು ತಮ್ಮದೇ ಖಾಸಗಿ ಕೋಚಿಂಗ್ ಕ್ಲಾಸ್ ಕೂಡ ನಡೆಸುತ್ತಿದ್ದರು. ಅಲ್ಲಿಯೇ ಅವರು ನೀಟ್ ಪ್ರಶ್ನೆ ಪತ್ರಿಕೆಗಳನ್ನು ಹಂಚಿದ್ದಾರೆ ಎನ್ನಲಾಗಿದೆ.

ಹಾಗೇ, ಏಜೆಂಟ್​​ಗಳಿಬ್ಬರಿಗೆ ಅವರು ಭಾರೀ ಮೊತ್ತಕ್ಕೆ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿದ್ದರು. ಅವರು ಮಹಾರಾಷ್ಟ್ರದಾದ್ಯಂತ ಅದನ್ನು ಹಂಚಿದ್ದರು. ಸಿಬಿಐ ಪೊಲೀಸರು ಒಬ್ಬೊಬ್ಬರೇ ಆರೋಪಿಗಳನ್ನು ಹಿಡಿಯುತ್ತಾ ಹೋದಾಗ ಕೊನೆಗೂ ಪ್ರಮುಖ ಆರೋಪಿಯ ಹೆಸರು ಬಯಲಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಪಿ.ವಿ ಕುಲಕರ್ಣಿ ಮತ್ತೊಬ್ಬ ಆರೋಪಿ ಮನೀಶಾ ವಾಘ್ಮಾರೆ ಸಹಾಯದಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು. ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ತನ್ನ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿಗಳನ್ನು ನಡೆಸಿದ್ದರು ಎನ್ನಲಾಗಿದೆ. ಅದಕ್ಕೆ ಸಾಕಷ್ಟು ಹೆಚ್ಚಿನ ಹಣವನ್ನೂ ಪಡೆದಿದ್ದರು.

ಇದನ್ನೂ ಓದಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಒಂದು ವಾಟ್ಸಾಪ್ ಮೆಸೇಜಿನಿಂದ ರದ್ದಾಯ್ತು ಯುಜಿ ಪರೀಕ್ಷೆ

ಕುಲಕರ್ಣಿ ಮೂಲತಃ ಲಾತೂರ್ ಜಿಲ್ಲೆಯವರು. ಮೇ 3 ರಂದು ನಡೆಸಲಾಗಿದ್ದ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಪತ್ರಿಕೆ ಸೋರಿಕೆ ಆರೋಪದ ನಂತರ ಮೇ 12 ರಂದು ರದ್ದುಗೊಳಿಸಲಾಗಿತ್ತು. ಇದಾದ ನಂತರ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು. ಈ ನೀಟ್ ಯುಜಿ ಪ್ರಶ್ನೆ ಪತ್ರಿಕೆಯನ್ನು ತಾವು ಕೋಚಿಂಗ್ ನೀಡುವ ವಿದ್ಯಾರ್ಥಿಗಳಿಗೆ ಕುಲಕರ್ಣಿ ನೀಡಿದ್ದರು.

ಈ ತರಗತಿಗಳ ಸಮಯದಲ್ಲಿ, ಕುಲಕರ್ಣಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಉತ್ತರದ ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ಡಿಕ್ಟೇಟ್ ಮಾಡುತ್ತಿದ್ದರು. ಅವರು ಅದನ್ನು ತಮ್ಮ ನೋಟ್‌ಬುಕ್‌ಗಳಲ್ಲಿ ಬರೆದುಕೊಂಡಿದ್ದರು. ಸಿಬಿಐ ಪ್ರಕಾರ, ಆ ಕೈಬರಹದ ಪ್ರಶ್ನೆಗಳು ಮತ್ತು ಉತ್ತರಗಳು ಮೇ 3ರಂದು ನಡೆಸಲಾದ ನಿಜವಾದ ನೀಟ್ ಯುಜಿ 2026 ಪ್ರಶ್ನೆ ಪತ್ರಿಕೆಗೆ ನಿಖರವಾಗಿ ಹೊಂದಿಕೆಯಾಗಿವೆ.

ಇದನ್ನೂ ಓದಿ: NEET Exam 2026 Cancelled: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರದಿಂದ ಇದುವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಪಿ.ವಿ. ಕುಲಕರ್ಣಿ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿಸಲಾದ ಒಟ್ಟು ಆರೋಪಿಗಳ ಸಂಖ್ಯೆ 8ಕ್ಕೆ ತಲುಪಿದೆ.

ಈ ಹಿಂದೆ ಬಂಧಿಸಲಾದ 7 ಜನರಲ್ಲಿ, 5 ಆರೋಪಿಗಳನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅವರನ್ನು ವಿವರವಾದ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುರುವಾರ ಬಂಧಿಸಲಾದ ಉಳಿದ ಇಬ್ಬರು ಆರೋಪಿಗಳನ್ನು ಪುಣೆಯ ನ್ಯಾಯಾಲಯಕ್ಕೆ ಟ್ರಾನ್ಸಿಟ್ ರಿಮಾಂಡ್‌ಗಾಗಿ ಹಾಜರುಪಡಿಸಲಾಗುತ್ತಿದೆ. ಇದಾದ ನಂತರ ಮುಂದಿನ ವಿಚಾರಣೆಗಾಗಿ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Fri, 15 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More