Nepal Flood Impact: ಭಾರತ-ನೇಪಾಳ ಗಡಿಯಾಚೆಗಿನ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ: ಕುಶಿನಗರ-ಮಹಾರಾಜ್‌ಗಂಜ್‌ನಲ್ಲಿ ಎನ್‌ಡಿಆರ್‌ಎಫ್ ಕಟ್ಟೆಚ್ಚರ

ನೇಪಾಳದ ಪ್ರವಾಹದಿಂದ ಭಾರತ-ನೇಪಾಳ ಗಡಿ ವ್ಯಾಪಾರ, ಸಾರಿಗೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೋನೌಲಿ ಗಡಿಯಲ್ಲಿ 16 ಕಿ.ಮೀ ಸರಕು ಲಾರಿಗಳ ಸಾಲು ನಿಂತಿದ್ದು, ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಮೈತ್ರಿ ಬಸ್ ಸೇವೆ ರದ್ದುಗೊಳಿಸಲಾಗಿದೆ. ಕಠ್ಮಂಡುವಿನಿಂದ ವಲಸೆ ಕಾರ್ಮಿಕರು ಪಲಾಯನ ಮಾಡುತ್ತಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಷ್ಟದ ಭೀತಿ ಎದುರಾಗಿದೆ. ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

Nepal Flood Impact: ಭಾರತ-ನೇಪಾಳ ಗಡಿಯಾಚೆಗಿನ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ: ಕುಶಿನಗರ-ಮಹಾರಾಜ್‌ಗಂಜ್‌ನಲ್ಲಿ ಎನ್‌ಡಿಆರ್‌ಎಫ್ ಕಟ್ಟೆಚ್ಚರ
ಪ್ರವಾಹ

Updated on: Aug 28, 2026 | 3:43 PM

ಕಠ್ಮಂಡು,ಆಗಸ್ಟ್​ 28: ನೇಪಾಳದಲ್ಲಿ ಉಂಟಾಗಿರುವ ವಿನಾಶಕಾರಿ ಹಠಾತ್ ಪ್ರವಾಹ(Flood)ವು ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಸಾರಿಗೆ ಸಂಪರ್ಕವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಸೋನೌಲಿ ಗಡಿಯಲ್ಲಿ ನೇಪಾಳ ಪ್ರವೇಶಿಸಲು ಕಾಯುತ್ತಿರುವ ಸರಕು ಸಾಗಣೆ ಲಾರಿಗಳ ಸರತಿ ಸಾಲು ಬರೋಬ್ಬರಿ 16 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ. ರಸ್ತೆಗಳು ಜಲಾವೃತಗೊಂಡು ಕೊಚ್ಚಿಹೋಗಿರುವುದರಿಂದ ಕಠ್ಮಂಡು ಸೇರಿದಂತೆ ಪ್ರಮುಖ ನಗರಗಳಿಗೆ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತಗೊಂಡಿದೆ.

ಡಿಟಿಸಿ ಆದೇಶ: ನೇಪಾಳದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ, ದೆಹಲಿ ಸಾರಿಗೆ ನಿಗಮವು (DTC) ಭಾರತ-ನೇಪಾಳ ಅಂತಾರಾಷ್ಟ್ರೀಯ ‘ಮೈತ್ರಿ ಬಸ್ ಸೇವೆ’ಯನ್ನು ತಾತ್ಕಾಲಿಕವಾಗಿ ಎರಡು ದಿನ ರದ್ದುಗೊಳಿಸಿದೆ.

ಸಂಚಾರ ನಿರ್ಬಂಧ: ಆಗಸ್ಟ್ 28 ರಂದು ದೆಹಲಿ-ಕಠ್ಮಂಡು ಡಿಟಿಸಿ ಬಸ್‌ಗಳು ಹಾಗೂ ಆಗಸ್ಟ್ 29 ರಂದು ನಿಗದಿಯಾಗಿದ್ದ ನೇಪಾಳಿ ಬಸ್‌ಗಳ ಸಂಚಾರವನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ.

ಕುಶಿನಗರದ ನರ್ವಾಜೋತ್ ಮತ್ತು ಅಹಿರೌಲಿ ನಡುವಿನ17.5 ಉದ್ದದ ನದಿ ದಂಡೆಯ ಮೇಲೆ ಕಂದಾಯ, ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ನಿರಂತರ ನಿಗಾ ಇರಿಸಿವೆ.

ಪ್ರವಾಹದಲ್ಲಿ ಕೊಚ್ಚಿಬಂದ ವಸ್ತುಗಳು: ಛಿತೌನಿ ಮತ್ತು ವಾಲ್ಮೀಕಿನಗರದ ಬಳಿ ಗಂಡಕ್ ನದಿಯ ನೀರಿನಲ್ಲಿ ನೇಪಾಳದ ಗ್ರಾಮಗಳಿಂದ ಕೊಚ್ಚಿಬಂದ ಗ್ಯಾಸ್ ಸಿಲಿಂಡರ್‌ಗಳು, ಹಾಸಿಗೆಗಳು ಹಾಗೂ ರೆಫ್ರಿಜರೇಟರ್‌ಗಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದು, ಕೆಲವನ್ನು ದಡಕ್ಕೆ ಎಳೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ನೀರಿನಲ್ಲಿ ಕೊಚ್ಚಿ ಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನರು!

ತವರಿಗೆ ಮರಳುತ್ತಿರುವ ಕಾರ್ಮಿಕರು: ಕಠ್ಮಂಡುವಿನಲ್ಲಿ ಪೀಠೋಪಕರಣ ಕೆಲಸ ಮಾಡುತ್ತಿದ್ದ ಮಹಾರಾಜ್‌ಗಂಜ್‌ನ ಜಾಗರನಾಥಪುರ ಗ್ರಾಮದ ರಾಜ್ ಕುಮಾರ್ ಗೌತಮ್ ಎಂಬ ಕಾರ್ಮಿಕ ಪ್ರವಾಹದ ಅವ್ಯವಸ್ಥೆಯಿಂದ ಪಾರಾಗಿ ಬಿಹಾರ ಮಾರ್ಗವಾಗಿ ಸುರಕ್ಷಿತವಾಗಿ ಮನೆಗೆ ಮರಳುತ್ತಿದ್ದಾರೆ. ಪ್ರವಾಹದಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ಕಠ್ಮಂಡು ವ್ಯಾಪ್ತಿಯಲ್ಲಿ ತಿನ್ನಲು ಆಹಾರವಿಲ್ಲದೆ ಜನರು ಎತ್ತರದ ಸ್ಥಳಗಳಿಗೆ ಓಡುತ್ತಿದ್ದಾರೆ ಎಂದು ಗೌತಮ್ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ.

ಆರ್ಥಿಕ ಹೊಡೆತ: ಸೋನೌಲಿ ಗಡಿಯು ಭಾರತ ಮತ್ತು ನೇಪಾಳ ನಡುವಿನ ಪ್ರಮುಖ ವ್ಯಾಪಾರ ಕಾರಿಡಾರ್ ಆಗಿದ್ದು, ಪೆಟ್ರೋಲಿಯಂ, ತರಕಾರಿ, ಧಾನ್ಯಗಳು ಮತ್ತು ಔಷಧಿಗಳನ್ನು ಸಾಗಿಸುವ ನೂರಾರು ಟ್ರಕ್‌ಗಳು ಹೆದ್ದಾರಿಯಲ್ಲಿ ಸಿಲುಕಿರುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ದಿನಬಳಕೆಯ ವಸ್ತುಗಳು ಹಾಳಾಗುವ ಭೀತಿ ಎದುರಾಗಿದೆ.

ಭದ್ರತಾ ಕಣ್ಗಾವಲು: ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಯಾವುದೇ ಅಕ್ರಮ ನುಸುಳುವಿಕೆ ನಡೆಯದಂತೆ ಸಶಸ್ತ್ರ ಸೀಮಾ ಬಲ (SSB) ಮತ್ತು ಸ್ಥಳೀಯ ಪೊಲೀಸರು ಜಂಟಿ ಗಸ್ತು ತೀವ್ರಗೊಳಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us