
ಮುಂದಿನ ಐದು ವರ್ಷಗಳಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆಗಳನ್ನು (SDRF) ಹೊಸದಾಗಿ ಸ್ಥಾಪಿಸಲು, ಸಜ್ಜುಗೊಳಿಸಲು ಮತ್ತು ತರಬೇತಿ ನೀಡಲು ಕೇಂದ್ರ ಸರ್ಕಾರವು ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕಾರಗೊಂಡ ತಿದ್ದುಪಡಿ ಮಾಡಲಾದ ದುರಂತ ನಿರ್ವಹಣಾ ಕಾಯ್ದೆ 2025ರ ಪ್ರಕಾರ, ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಶಸ್ತ್ರ SDRF ಪಡೆಗಳನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.
SDRF ಪಡೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿವೀರರು ಹಾಗೂ NCC ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ, ಪಡೆಯ ಒಟ್ಟು ಹುದ್ದೆಗಳಲ್ಲಿ ಶೇಕಡಾ 15 ರಷ್ಟನ್ನು ಮಹಿಳೆಯರಿಗೆ ಕಾಯ್ದಿರಿಸಲಾಗುತ್ತದೆ. ಪ್ರಮುಖವಾಗಿ ರಾಜ್ಯ ಸಶಸ್ತ್ರ ಪೊಲೀಸ್, ರಾಜ್ಯ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF), ಸಶಸ್ತ್ರ ಪಡೆಗಳು, ಮಾಜಿ ಸೈನಿಕರು (ವಿಶೇಷವಾಗಿ ಎಂಜಿನಿಯರ್ಗಳು) ಹಾಗೂ ಮಾಜಿ NDRF ಸಿಬ್ಬಂದಿಯಿಂದ ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪಡೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅತ್ಯಂತ ದೈಹಿಕ ಕ್ಷಮತೆ ಹೊಂದಿರುವ ಯುವಕರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (NDRF) ಮಾದರಿಯಲ್ಲೇ ಪ್ರತಿಯೊಂದು SDRF ಪಡೆಯನ್ನು ಬಟಾಲಿಯನ್ ರೂಪದಲ್ಲಿ ಸಂಘಟಿಸಲಾಗುತ್ತದೆ. ಪ್ರತಿಯೊಂದು ಬಟಾಲಿಯನ್ನಲ್ಲಿ 600 ರಿಂದ 1200 ಸಿಬ್ಬಂದಿ ಇರಲಿದ್ದು, ಇದರ ನೇತೃತ್ವವನ್ನು ಪೊಲೀಸ್ ಮಹಾನಿರ್ದೇಶಕರ (DGP) ಶ್ರೇಣಿಯ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ. ಪ್ರತಿಯೊಂದು ಬಟಾಲಿಯನ್ ಅನ್ನು 9 ರಿಂದ 10 ಬಹು-ಶಿಸ್ತಿನ ಸ್ವತಂತ್ರ ತಂಡಗಳಾಗಿ ವಿಭಾಗಿಸಲಾಗುತ್ತದೆ. ಪ್ರತಿ ತಂಡದಲ್ಲಿ ರಕ್ಷಣೆ, ವೈದ್ಯಕೀಯ ಸಹಾಯ, ಸಂವಹನ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಹೊಂದಿರುವ 45 ರಿಂದ 50 ಅರ್ಹ ರಕ್ಷಣಾ ಸಿಬ್ಬಂದಿ ಇರುತ್ತಾರೆ.
ಸಣ್ಣ ಮತ್ತು ಮಧ್ಯಮ ಪ್ರಮಾಣದ ವಿಕೋಪಗಳಿಗೂ ರಾಷ್ಟ್ರೀಯ ಪಡೆಯಾದ NDRF ಮೇಲೆಯೇ ಸದಾ ಅವಲಂಬಿತವಾಗುವುದು ರಾಷ್ಟ್ರೀಯ ಸಜ್ಜುಗೊಳಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ವಿಳಂಬಕ್ಕೆ ಕಾರಣವಾಗುತ್ತದೆ. ಆದ್ದರಿಂದ ರಾಜ್ಯ ಮಟ್ಟದಲ್ಲಿ ಸಮರ್ಥ SDRF ಪಡೆ ಇರುವುದರಿಂದ ತಕ್ಷಣವೇ ಜೀವ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಇದರಿಂದ NDRF ಪಡೆಗಳು ದೊಡ್ಡ ಪ್ರಮಾಣದ (L-3 ಹಂತದ) ಪ್ರಕೃತಿ ವಿಕೋಪಗಳತ್ತ ಹಾಗೂ ಉನ್ನತ ಮಟ್ಟದ ತರಬೇತಿ ಕಾರ್ಯಗಳತ್ತ ಸಂಪೂರ್ಣ ಗಮನ ಹರಿಸಲು ನೆರವಾಗಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ