Nitin Gadkari: ಭಾರತ ಮನಮೋಹನ್ ಸಿಂಗ್​ಗೆ ಋಣಿಯಾಗಿದೆ; ನಿತಿನ್ ಗಡ್ಕರಿಯಿಂದ ಕಾಂಗ್ರೆಸ್ ನಾಯಕನ​ ಗುಣಗಾನ

| Updated By: ಸುಷ್ಮಾ ಚಕ್ರೆ

Updated on: Nov 09, 2022 | 11:35 AM

1991ರಲ್ಲಿ ವಿತ್ತ ಸಚಿವರಾಗಿ ಮನಮೋಹನ್ ಸಿಂಗ್ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು. ಅದು ಭಾರತದ ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Nitin Gadkari: ಭಾರತ ಮನಮೋಹನ್ ಸಿಂಗ್​ಗೆ ಋಣಿಯಾಗಿದೆ; ನಿತಿನ್ ಗಡ್ಕರಿಯಿಂದ ಕಾಂಗ್ರೆಸ್ ನಾಯಕನ​ ಗುಣಗಾನ
ನಿತಿನ್ ಗಡ್ಕರಿ
Follow us on

ನವದೆಹಲಿ: ಆರ್ಥಿಕ ಸುಧಾರಣೆಗಳ ಕಾರಣಕ್ಕಾಗಿ ಭಾರತ ದೇಶವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರಿಗೆ ಋಣಿಯಾಗಿದೆ ಎನ್ನುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ ಅವರ ಗುಣಗಾನ ಮಾಡಿದ್ದಾರೆ. ಬಡವರಿಗೆ ಆರ್ಥಿಕ ಸುಧಾರಣೆಗಳ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಟಿಐಒಎಲ್ ಅವಾರ್ಡ್ಸ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, 1991ರಲ್ಲಿ ವಿತ್ತ ಸಚಿವರಾಗಿ ಮನಮೋಹನ್ ಸಿಂಗ್ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು. ಅದು ಭಾರತದ ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ಹೇಳಿದ್ದಾರೆ.

1990ರ ದಶಕದ ಮಧ್ಯಭಾಗದಲ್ಲಿ ನಾನು ಮಹಾರಾಷ್ಟ್ರದಲ್ಲಿ ಸಚಿವನಾಗಿದ್ದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳಿಂದಾಗಿ ಮಹಾರಾಷ್ಟ್ರದಲ್ಲಿ ರಸ್ತೆಗಳನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದು ನಿತಿನ್ ಗಡ್ಕರಿ ನೆನಪಿಸಿಕೊಂಡಿದ್ದಾರೆ. ಉದಾರ ಆರ್ಥಿಕ ನೀತಿಯು ರೈತರು ಮತ್ತು ಬಡವರಿಗಾಗಿಯೇ ಇರುವಂತಹ ವ್ಯವಸ್ಥೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: Breaking News: ಮುಂದಿನ ವರ್ಷದಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳು ನಿಯಮ ಜಾರಿಗೆ ಬರಲಿದೆ: ನಿತಿನ್ ಗಡ್ಕರಿ

ರಸ್ತೆ ಸಾರಿಗೆ ಸಚಿವಾಲಯವು 26 ಹಸಿರು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದೆ. ನಾವು ಯಾವುದೇ ರೀತಿಯ ಹಣದ ಕೊರತೆಯನ್ನು ಎದುರಿಸುತ್ತಿಲ್ಲ. NHAIನ ಟೋಲ್ ಆದಾಯವು ಪ್ರಸ್ತುತ ವಾರ್ಷಿಕ 40,000 ಕೋಟಿ ರೂ.ಗಳಿಂದ 2024ರ ಅಂತ್ಯದ ವೇಳೆಗೆ 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ದೇಶದ ಅಭಿವೃದ್ಧಿಗೆ ಉದಾರ ಆರ್ಥಿಕ ನೀತಿ ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಚೀನಾ ಉತ್ತಮ ಉದಾಹರಣೆಯಾಗಿದೆ. ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಭಾರತಕ್ಕೆ ಹೆಚ್ಚಿನ ಕ್ಯಾಪೆಕ್ಸ್ ಹೂಡಿಕೆಯ ಅಗತ್ಯವಿದೆ. ಹೆದ್ದಾರಿಗಳ ನಿರ್ಮಾಣಕ್ಕಾಗಿ ಎನ್‌ಎಚ್‌ಎಐ ಜನಸಾಮಾನ್ಯರಿಂದ ಹಣ ಸಂಗ್ರಹಿಸುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 am, Wed, 9 November 22