ಟಿಎಂಸಿ ಬಂಡಾಯ ಸಂಸದರಿಗೂ ಆಹ್ವಾನ ವಿರೋಧಿಸಿ ಸರ್ವಪಕ್ಷ ಸಭೆಯಿಂದ ಹೊರನಡೆದ ವಿರೋಧ ಪಕ್ಷಗಳು

ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಇದರ ಮುನ್ನ ದಿನವಾದ ಭಾನುವಾರ ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಸಾಂಪ್ರದಾಯಿಕ ಸರ್ವಪಕ್ಷ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ, ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ಸಂಸದರು ಸೇರಿರುವ ಹೊಸ ಪಕ್ಷಕ್ಕೆ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರ ಆಹ್ವಾನ ನೀಡಿದ್ದನ್ನು ವಿರೋಧಿಸಿ 'ಇಂಡಿಯಾ' (INDIA) ಮೈತ್ರಿಕೂಟದ ಪ್ರತಿಪಕ್ಷಗಳು ಸಭೆಯಿಂದ ವಾಕ್‌ಔಟ್ ನಡೆಸಿದವು. ಕಳೆದ ಜೂನ್ ತಿಂಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ 20 ಬಂಡಾಯ ಸಂಸದರು ತೀರಾ ಅಪರಿಚಿತವಾಗಿದ್ದ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಎಂಬ ಪಕ್ಷದೊಂದಿಗೆ ವಿಲೀನಗೊಂಡಿದ್ದರು.

ಟಿಎಂಸಿ ಬಂಡಾಯ ಸಂಸದರಿಗೂ ಆಹ್ವಾನ ವಿರೋಧಿಸಿ ಸರ್ವಪಕ್ಷ ಸಭೆಯಿಂದ ಹೊರನಡೆದ ವಿರೋಧ ಪಕ್ಷಗಳು
Tmc Leader Mahua Moitra

Updated on: Jul 19, 2026 | 3:23 PM

ನವದೆಹಲಿ, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನದ (Parliament Monsoon Session) ಮುನ್ನಾದಿನವಾದ ಇಂದು (ಭಾನುವಾರ) ಆಯೋಜಿಸಲಾಗಿದ್ದ ಸರ್ವಪಕ್ಷ ಸಭೆಯಿಂದ ವಿರೋಧ ಪಕ್ಷಗಳ ನಾಯಕರು ವಾಕ್‌ಔಟ್ ನಡೆಸಿದರು. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಲವು ಬಂಡಾಯ ಸಂಸದರನ್ನು ಒಳಗೊಂಡ ಹೊಸದಾಗಿ ರೂಪುಗೊಂಡಿರುವ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷವು ಸಭೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು. ಆದರೆ, ಕೆಲವೇ ನಿಮಿಷಗಳಲ್ಲಿ ಪ್ರತಿಪಕ್ಷಗಳ ಸಂಸದರು ಸಭೆಗೆ ಮರಳಿದರು.

ಕಳೆದ ತಿಂಗಳು ಸುಮಾರು 20 ಬಂಡಾಯ ಟಿಎಂಸಿ ಸಂಸದರು ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಂಡಿದ್ದರು. ಆದರೆ ಈ ವಿಲೀನಕ್ಕೆ ಇನ್ನೂ ಅಧಿಕೃತವಾಗಿ ಅನುಮೋದನೆ ಸಿಗದ ಕಾರಣ, ಆ ಪಕ್ಷವನ್ನು ಸಭೆಗೆ ಸೇರಿಸಿಕೊಂಡಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಸಂಸತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ 20 ಬಂಡಾಯ ಸಂಸದರನ್ನು ಇಂದಿಗೂ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಎಂದೇ ತೋರಿಸಲಾಗುತ್ತಿದೆ. ಹೀಗಾಗಿ ವಿರೋಧ ಪಕ್ಷಗಳ ಈ ವಾಕ್‌ಔಟ್ ಕೇವಲ ಸಾಂಕೇತಿಕ ಪ್ರತಿಭಟನೆಯಾಗಿತ್ತು.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಟಿಎಂಸಿ ನಾಯಕರ ಆಕ್ಷೇಪ:

ಈ ವೇಳೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿ, “ಸಂಸತ್ತಿನಲ್ಲಿ ತೃಣಮೂಲ ಕಾಂಗ್ರೆಸ್‌ನ ಬಲ ಇನ್ನೂ 28 ಎಂದೇ ತೋರಿಸುತ್ತಿದೆ. ಹೀಗಿರುವಾಗ ಯಾವ ಆಧಾರದ ಮೇಲೆ ಸಂಸದೀಯ ವ್ಯವಹಾರಗಳ ಸಚಿವರು ಬಂಡಾಯಗಾರರ ಪಕ್ಷವನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದಾರೆ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ

ಬಂಡಾಯ ನಾಯಕರ ಸ್ಪಷ್ಟನೆ:

ಇದೇ ವೇಳೆ, ಎನ್‌ಸಿಪಿಐ (ಬಂಡಾಯ ಬಣ) ಬಣದ ನಾಯಕಿಯಾಗಿರುವ ಕಾಕೊಲಿ ಘೋಷ್ ದಸ್ತಿದಾರ್ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಸಂಸದೀಯ ವ್ಯವಹಾರಗಳ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಟಿಎಂಸಿ ಬಂಡಾಯ ಸಂಸದ ಸುದೀಪ್ ಬಂದೋಪಾಧ್ಯಾಯ ಮಾತನಾಡಿ, “20 ಸಂಸದರನ್ನು ಹೊಂದಿರುವ ನಮ್ಮ ಹೊಸ ಪಕ್ಷವನ್ನು ಆಹ್ವಾನಿಸಲಾಗಿತ್ತು. ನಾವು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದೇವೆ. ಸದನವು ವಿರೋಧ ಪಕ್ಷಗಳಿಗೂ ಸೇರಿದ್ದು ಎಂಬುದನ್ನು ಒಪ್ಪಿಕೊಳ್ಳಬೇಕು. ಸದನ ಸುಗಮವಾಗಿ ನಡೆಯಲು ಸರ್ಕಾರವೇ ಜವಾಬ್ದಾರಿ ಹೊರಬೇಕು. ನಮ್ಮ ಪಕ್ಷವು ಜಾತ್ಯತೀತತೆ, ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಬದ್ಧವಾಗಿದೆ. ನಮ್ಮ ಪಕ್ಷದ 20 ಸಂಸದರಲ್ಲಿ ಮೂವರು ಮುಸ್ಲಿಂ ಸಂಸದರಿದ್ದಾರೆ” ಎಂದರು.


ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ:

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯ ಮುನ್ನ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಿದರು. “ಸಂಸತ್ತಿನ ಮುಂಗಾರು ಅಧಿವೇಶನ ನಾಳೆಯಿಂದ ಆರಂಭವಾಗುತ್ತಿದ್ದು, ಇಂದು ಎಲ್ಲಾ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ. ಸಂಸತ್ತು ಎಲ್ಲರಿಗೂ ಸೇರಿದ್ದಾಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಶಾಸಕಾಂಗ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಹಕರಿಸುವ ನಿರೀಕ್ಷೆಯಿದೆ. ಸಂಸತ್ತು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆಯೋ, ದೇಶಕ್ಕೆ ಅಷ್ಟೇ ಹೆಚ್ವು ಪ್ರಯೋಜನವಾಗುತ್ತದೆ. ನಾವು ವಿರೋಧ ಪಕ್ಷಗಳ ಮಾತುಗಳನ್ನು ಕೇಳುತ್ತೇವೆ, ಅವರು ಕೂಡ ನಮ್ಮ ಮಾತನ್ನು ಕೇಳುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us