AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ಗೆ ಹೊಟ್ಟೆನೋವು, ಎರಡು ದಿನಗಳ ನಂತರ ನಡೆಯಲಿದೆ ಸರ್ಜರಿ

Sharad Pawar: ಬುಧವಾರ ಶರದ್ ಪವಾರ್ ಅವರಿಗೆ ಸರ್ಜರಿ ನಡೆಯಲಿದೆ. ಈ ನಿಟ್ಟಿನಲ್ಲಿ ಅವರು ಭಾಗವಹಿಸಲಿರುವ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಎನ್​ಸಿಪಿ ಪಕ್ಷದ ನಾಯಕ ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ಗೆ ಹೊಟ್ಟೆನೋವು, ಎರಡು ದಿನಗಳ ನಂತರ ನಡೆಯಲಿದೆ ಸರ್ಜರಿ
ಶರದ್ ಪವಾರ್ (ಸಂಗ್ರಹ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on:Mar 29, 2021 | 11:55 AM

ದೆಹಲಿ: ಎನ್​ಸಿಪಿ ಮುಖ್ಯಸ್ಥ, ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಭಾನುವಾರ ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ  ಎಂದು ಪಕ್ಷದ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.  ನಮ್ಮ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಗೆ ನಿನ್ನೆ ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ವೈದ್ಯಕೀಯ ತಪಾಸಣೆಗಾಗಿ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅವರಿಗೆ ಪಿತ್ತಕೋಶದಲ್ಲಿ ಸಮಸ್ಯೆ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ ಎಂದು ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.

ಬುಧವಾರ ಪವಾರ್ ಅವರಿಗೆ ಸರ್ಜರಿ ನಡೆಯಲಿದೆ. ಈ ನಿಟ್ಟಿನಲ್ಲಿ ಅವರು ಭಾಗವಹಿಸಲಿರುವ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅವರಿಗೆ ಬ್ಲಡ್ ಥಿನ್ನಿಂಗ್ ಚಿಕಿತ್ಸೆ ನಡೆದು ಬರುತ್ತಿತ್ತು. ಇದೀಗ ಪಿತ್ತಕೋಶ ಸಮಸ್ಯೆ ಕಂಡು ಬಂದಿರುವುದರಿಂದ ಆ ಚಿಕಿತ್ಸೆಯನ್ನು ನಿಲ್ಲಿಸಲಾಗಿದೆ. 2021ಮಾರ್ಚ್ 31ಕ್ಕೆ ಅವರು  ಆಸ್ಪತ್ರೆಗೆ ದಾಖಲಾಗಲಿದ್ದು ಅಲ್ಲಿ ಎಂಡೋಸ್ಕೊಪಿ ಮತ್ತು ಸರ್ಜರಿ ನಡೆಯಲಿದೆ. ಮುಂದಿನ ಸೂಚನೆ ಸಿಗುವವರೆಗೆ ಅವರ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ ಮಲಿಕ್.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಶರದ್ ಪವಾರ್ ಅವರು ಗುಜರಾತಿನ ಅಹಮದಾಬಾದ್ ನಲ್ಲಿ ಸಭೆ ನಡೆಸಿದ್ದಾರೆ ಎಂಬ ವದಂತಿ ಶನಿವಾರ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲಾಗುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ , ಅಮಿತ್ ಶಾ ಜತೆ ಯಾವುದೇ ಸಭೆ ನಡೆದಿಲ್ಲ ಎಂದು ಎನ್​ಸಿಪಿ ಹೇಳಿದೆ.

80ರ ಹರೆಯದ ಶರದ್ ಪವಾರ್ 2004ರಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು. ಶರದ್ ಪವಾರ್ ಅವರ ಎನ್​ಸಿಪಿ ಪಕ್ಷ ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಮೈತ್ರಿ ಪಕ್ಷವಾಗಿದೆ. ಈ ಮೈತ್ರಿಕೂಟದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷ ಕೂಡಾ ಇದೆ. ಉದ್ದವ್ ಠಾಕ್ರೆ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಆಗಿದೆ. ಈ ನಡುವೆ ಮುಕೇಶ್ ಅಂಬಾನಿ ಮನೆ ಬಳಿ ಸಿಕ್ಕಿದ ಬಾಂಬ್ ಪ್ರಕರಣ ತದ ನಂತರದ ರಾಜಕೀಯ ಬೆಳವಣಿಗೆಗಳಿಂದ ಮಹಾರಾಷ್ಟ್ರ ಸರ್ಕಾರದ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆಯೇ ಶರದ್ ಪವಾರ್ ಅವರ ಅನಾರೋಗ್ಯ ಮಹಾರಾಷ್ಟ್ರ ಸರ್ಕಾರವನ್ನು ಮತ್ತಷ್ಟು ಚಿಂತೆಗೆ ದೂಡಿದೆ. ಇದನ್ನೂ ಓದಿ: ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ: ಶರದ್ ಪವಾರ್ ಭೇಟಿ ಬಗ್ಗೆ ಅಮಿತ್​ ಶಾ

Published On - 11:35 am, Mon, 29 March 21