AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Viral: ಛತ್ರಪತಿ ಶಿವಾಜಿ ಭಾವಚಿತ್ರವಿರುವ 200 ರೂ. ನಕಲಿ ನೋಟನ್ನು ಹಂಚಿಕೊಂಡ ಬಿಜೆಪಿ ನಾಯಕ

ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾದ ನಿತೇಶ್ ನಾರಾಯಣ ರಾಣೆ ಅವರು ಛತ್ರಪತಿ ಶಿವಾಜಿ ಭಾವಚಿತ್ರವಿರುವ 200 ರೂ. ನಕಲಿ ನೋಟನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಯೇ ಪರ್ಫೆಕ್ಟ್ ಹೈ (ಇದು ಪರಿಪೂರ್ಣವಾಗಿದೆ) ಎಂದು ಶೀರ್ಷಿಕೆ ನೀಡಿದ್ದಾರೆ.

Photo Viral: ಛತ್ರಪತಿ ಶಿವಾಜಿ ಭಾವಚಿತ್ರವಿರುವ 200 ರೂ. ನಕಲಿ ನೋಟನ್ನು ಹಂಚಿಕೊಂಡ ಬಿಜೆಪಿ ನಾಯಕ
200 rupees with portrait of Chhatrapati Shivaji.
TV9 Web
| Edited By: |

Updated on:Oct 27, 2022 | 1:20 PM

Share

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾರತೀಯ ಕರೆನ್ಸಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳಿರುವ ಫೋಟೋಗಳನ್ನು ಮುದ್ರಿಸಬೇಕು ಎಂದು ಹೇಳಿರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದ ನಾಯಕರೊಬ್ಬರು ಹೊಸ ಬೇಡಿಕೆಯನ್ನು ಎತ್ತಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾದ ನಿತೇಶ್ ನಾರಾಯಣ ರಾಣೆ ಅವರು ಛತ್ರಪತಿ ಶಿವಾಜಿ ಭಾವಚಿತ್ರವಿರುವ 200 ರೂ. ನಕಲಿ ನೋಟನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಯೇ ಪರ್ಫೆಕ್ಟ್ ಹೈ (ಇದು ಪರಿಪೂರ್ಣವಾಗಿದೆ) ಎಂದು ಶೀರ್ಷಿಕೆ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭಾರತೀಯ ಕರೆನ್ಸಿಯಲ್ಲಿ ಲಕ್ಷ್ಮಿ-ಗಣೇಶ್ ಚಿತ್ರದ ನೋಟುಗಳನ್ನು ಮುದ್ರಣ ಮಾಡಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡುವೇ ಎಂದು ಹೇಳಿದ್ದರು. ಇದೀಗ ಈ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದೆ. ದೇಶದ ವಿವಿಧ ಭಾಗಗಳಿಂದ ವಿಭಿನ್ನ ಬೇಡಿಕೆಗಳು ಪ್ರಾರಂಭವಾಗಿವೆ. ಹೊಸ ಸರಣಿಯ ನೋಟುಗಳ ಮೇಲೆ ಭೀಮರಾವ್ ಅಂಬೇಡ್ಕರ್ ಅವರ ಫೋಟೋ ಏಕೆ ಹಾಕಬಾರದು ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದಾರೆ.

ಪಂಜಾಬ್‌ನ ಆನಂದ್‌ಪುರ ಸಾಹಿಬ್‌ನ ಕಾಂಗ್ರೆಸ್ ಸಂಸದ ತಿವಾರಿ, ಹೊಸ ಸರಣಿಯ ಕರೆನ್ಸಿ ನೋಟುಗಳಲ್ಲಿ ಡಾ ಬಾಬಾಸಾಹಿಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಏಕೆ ಹಾಕಬಾರದು? ಒಂದು ಕಡೆ ಮಹಾನ್ ಮಹಾತ್ಮ (ಗಾಂಧಿ) ಇನ್ನೊಂದು ಕಡೆ ಡಾ ಬಿಆರ್ ಅಂಬೇಡ್ಕರ್ ಎಂದು ಟ್ವೀಟ್ ಮಾಡಿದ್ದಾರೆ. ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಣ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಇದನ್ನು ಓದಿ: ಕರೆನ್ಸಿ ನೋಟಿನಲ್ಲಿ ಗಣೇಶ, ಲಕ್ಷ್ಮೀ ಚಿತ್ರವಿರಲಿ: ಅರವಿಂದ್ ಕೇಜ್ರಿವಾಲ್

ನಮ್ಮ ಕೈಲಾದಷ್ಟು ಪ್ರಯತ್ನಿಸಿದರೂ, ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನಮ್ಮ ಕರೆನ್ಸಿ (ನೋಟುಗಳು) ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಣ ಮಾಡಿ ಎಂದು ನಾನು ಪ್ರಧಾನಿ (ಮೋದಿ) ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ನೋಟುಗಳಲ್ಲಿ ಲಕ್ಷ್ಮಿ-ಗಣೇಶನ ಚಿತ್ರವಿದ್ದರೆ , ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ, ನಾನು ಈ ಬಗ್ಗೆ ಎರಡು ದಿನಗಳ ಒಳಗಾಗಿ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು.ನಾನು ಹೇಳಿದಂತೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ಆದರೆ ಅದರೊಂದಿಗೆ ನಮಗೆ ದೇವರ ಆಶೀರ್ವಾದ ಬೇಕು. ನೋಟುಗಳ ಮೇಲೆ ಫೋಟೋ ಇದ್ದರೆ ಇಡೀ ದೇಶಕ್ಕೆ ಆಶೀರ್ವಾದ ಸಿಗುತ್ತದೆ. ಒಂದು ಕಡೆ ಗಣೇಶ್ ಮತ್ತು ಲಕ್ಷ್ಮಿ ಹಾಗೂ ಇನ್ನೊಂದು ಕಡೆ ಗಾಂಧೀಜಿ ಇರುವ ನೋಟುಗಳನ್ನು ಮುದ್ರಣ ಮಾಡಲು ಮೋದಿಗೆ ಮನವಿ ಮಾಡುವೇ ಎಂದು ಕೇಜ್ರಿವಾಲ್ ತಮ್ಮ ಭಾಷಣದಲ್ಲಿ ಹೇಳಿದರು.

ಕೇಜ್ರಿವಾಲ್ ಅವರ ಈ ಬೇಡಿಕೆ ಗುಜರಾತ್ ಚುನಾವಣೆಗೆ ಮುನ್ನ ತನ್ನ ರಾಜಕೀಯ ಲಾಭಕ್ಕಾಗಿ ಮತ್ತು ಹಿಂದೂ ವಿರೋಧಿ ವಿಚಾರಗಳನ್ನು ಮರೆಮಾಚುವ ಈ ರೀತಿ ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ಕೇಜ್ರಿವಾಲ್ ಅವರು ಹೇಳಿದ್ದನ್ನು ನಿಜವಾಗಿಯೂ ಅರ್ಥೈಸಿಕೊಂಡಿದ್ದರೆ, ಹಿಂದೂ ದೇವತೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ ದೆಹಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಮತ್ತು ಎಎಪಿಯ ಗುಜರಾತ್ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮನೋಜ್ ತಿವಾರಿ ಒತ್ತಾಯಿಸಿದರು.

Published On - 1:20 pm, Thu, 27 October 22