ಬಿಹಾರದ ವಲಸೆ ಬಿಕ್ಕಟ್ಟಿಗೆ ಆರ್‌ಜೆಡಿ-ಕಾಂಗ್ರೆಸ್ ಯುಗವನ್ನು ದೂಷಿಸಿದ ಪ್ರಧಾನಿ ಮೋದಿ

ಉದ್ಯೋಗ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಯುವ ಕೇಂದ್ರಿತ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಅವುಗಳಲ್ಲಿ 60,000 ಕೋಟಿ ರೂ.ಗಳ ಯೋಜನೆಯಾದ ಪಿಎಂ-ಸೇತು ಯೋಜನೆಯೂ ಸೇರಿದೆ. ಇದು 200 ಹಬ್ ಐಟಿಐಗಳು ಮತ್ತು 800 ಸ್ಪೋಕ್ ಸಂಸ್ಥೆಗಳನ್ನು ಒಳಗೊಂಡಿರುವ ಹಬ್-ಆ್ಯಂಡ್-ಸ್ಪೋಕ್ ಮಾದರಿಯನ್ನು ಬಳಸಿಕೊಂಡು ಭಾರತದಾದ್ಯಂತ 1,000 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯಾಗಿದೆ.

ಬಿಹಾರದ ವಲಸೆ ಬಿಕ್ಕಟ್ಟಿಗೆ ಆರ್‌ಜೆಡಿ-ಕಾಂಗ್ರೆಸ್ ಯುಗವನ್ನು ದೂಷಿಸಿದ ಪ್ರಧಾನಿ ಮೋದಿ
Pm Modi In Bihar

Updated on: Oct 04, 2025 | 3:59 PM

ನವದೆಹಲಿ, ಅಕ್ಟೋಬರ್ 4: ಆರ್‌ಜೆಡಿ-ಕಾಂಗ್ರೆಸ್ ಆಳ್ವಿಕೆಯಲ್ಲಿ ಸಂಪೂರ್ಣ ಅಧೋಗತಿಗೆ ಇಳಿದಿದ್ದ ಬಿಹಾರದ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಪರಿವರ್ತಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (PM Modi) ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತಮ್ಮ ಎನ್‌ಡಿಎ ಸರ್ಕಾರವನ್ನು ಶ್ಲಾಘಿಸಿದ್ದಾರೆ. 62,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಕೌಶಲ್ಯ ಮತ್ತು ಶಿಕ್ಷಣ ಯೋಜನೆಗಳ ಉದ್ಘಾಟನೆಯಲ್ಲಿ ಮಾತನಾಡಿದ ಮೋದಿ, ಶಾಲೆಗಳನ್ನು ಪುನರ್ನಿರ್ಮಿಸಲು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಲು ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈಗಿನ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಆರ್‌ಜೆಡಿ ಯುಗದಲ್ಲಿ ಶಿಕ್ಷಣ ವ್ಯವಸ್ಥೆಯ ಕುಸಿತವು ಬಿಹಾರದಿಂದ ಸಾಮೂಹಿಕ ವಲಸೆಗೆ ಕಾರಣವಾಯಿತು. ಇದರಿಂದಾಗಿ ಲೆಕ್ಕವಿಲ್ಲದಷ್ಟು ಕುಟುಂಬಗಳು ತಮ್ಮ ಮಕ್ಕಳನ್ನು ಅಧ್ಯಯನ ಮತ್ತು ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ಕಳುಹಿಸಿದರು. ಇದೇ ವಲಸೆಯ ನಿಜವಾದ ಆರಂಭವಾಯಿತು. ವಲಸೆ ಬಿಕ್ಕಟ್ಟಿಗೆ ಆಗಿನ ಸರ್ಕಾರವೇ ಮುಖ್ಯ ಕಾರಣ ಎಂದು ಮೋದಿ ಟೀಕಿಸಿದ್ದಾರೆ.


ಇಂದು ಕಾಂಗ್ರೆಸ್ ವಿರುದ್ಧ ತೀಕ್ಷ್ಣವಾಗಿ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ಕೆಲವು ರಾಜಕೀಯ ನಾಯಕರು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಒಬಿಸಿ ಐಕಾನ್ ಆಗಿರುವ ಜನನಾಯಕ್ ಕರ್ಪೂರಿ ಠಾಕೂರ್ ಅವರ ಪರಂಪರೆಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೆಸರಿಸದೆ ವಾಗ್ದಾಳಿ ನಡೆಸಿದ ಮೋದಿ, ಠಾಕೂರ್ ಅವರ ಗೌರವಾನ್ವಿತ “ಜನನಾಯಕ್” ಸಾಮಾಜಿಕ ಮಾಧ್ಯಮ ಟ್ರೋಲ್‌ಗಳ ಸೃಷ್ಟಿಯಲ್ಲ. ಅದು ಜನರ ಆಳವಾದ ಪ್ರೀತಿ ಮತ್ತು ಗೌರವದ ಪ್ರತಿಬಿಂಬವಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಬಿಹಾರದ ಯುವಕರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್: 62000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ

ಮೋದಿ ಸರ್ಕಾರವು ಕಳೆದ ವರ್ಷ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನವನ್ನು ನೀಡಿದೆ ಎಂದು ಅವರು ಸಭಿಕರಿಗೆ ನೆನಪಿಸಿದರು. ಬಿಹಾರದಲ್ಲಿ ಹೊಸದಾಗಿ ಉದ್ಘಾಟನೆಯಾದ ಜನ್ ನಾಯಕ್ ಕರ್ಪೂರಿ ಠಾಕೂರ್ ಕೌಶಲ್ಯ ವಿಶ್ವವಿದ್ಯಾಲಯವನ್ನು ಶಿಕ್ಷಣದ ಮೂಲಕ ಅವರ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಬಲೀಕರಣದ ಆದರ್ಶಗಳನ್ನು ಸಂರಕ್ಷಿಸಲು ಹೆಸರಿಸಲಾಗಿದೆ ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Sat, 4 October 25