ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜತೆ ಉಕ್ರೇನ್, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಮೋದಿ ಚರ್ಚೆ

|

Updated on: Jul 10, 2024 | 5:12 PM

ಇದು ಯುದ್ಧದ ಸಮಯವಲ್ಲ, ಯುದ್ಧ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗುವುದಿಲ್ಲ. ಅದು ಎಲ್ಲೇ ಇದ್ದರೂ, ಅಮಾಯಕರನ್ನು ಕೊಲ್ಲುವುದು ಸ್ವೀಕಾರಾರ್ಹವಲ್ಲ. ಭಾರತ ಮತ್ತು ಆಸ್ಟ್ರಿಯಾ ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಒತ್ತು ನೀಡುತ್ತವೆ. ಅದಕ್ಕಾಗಿ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜತೆ ಉಕ್ರೇನ್, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಮೋದಿ ಚರ್ಚೆ
ಮೋದಿ- ಕಾರ್ಲ್ ನೆಹಮ್ಮರ್
Follow us on

ವಿಯೆನ್ನಾ ಜುಲೈ 10: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಆಸ್ಟ್ರಿಯಾದ (Austria) ಚಾನ್ಸೆಲರ್ ಕಾರ್ಲ್ ನೆಹಮ್ಮರ್ (Karl Nehammer) ಅವರೊಂದಿಗೆ ಉಕ್ರೇನ್‌ನಲ್ಲಿನ ಯುದ್ಧ ಮತ್ತು ಭಾರತ-ಆಸ್ಟ್ರಿಯಾದ ಕಾರ್ಯತಂತ್ರದ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ. ಮೋದಿಯವರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮಾಸ್ಕೋದಲ್ಲಿ ರಷ್ಯಾ  ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭೇಟಿಯಾದ ನಂತರ ಆಸ್ಟ್ರಿಯಾಗೆ ತೆರಳಿದ ಪ್ರಧಾನಿ ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಜಗತ್ತಿನಲ್ಲಿ ಯುದ್ಧಕ್ಕೆ ಸ್ಥಾನವಿಲ್ಲ ಎಂದು ಪುನರುಚ್ಚರಿಸಿದರು. ಅದೇ ವೇಳೆ ಮೂಲಸೌಕರ್ಯ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ, ಹೈಡ್ರೋಜನ್, ನೀರು ಮತ್ತು ತ್ಯಾಜ್ಯ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಆಸ್ಟ್ರಿಯಾದೊಂದಿಗೆ ಸಂಬಂಧವನ್ನು ಬಲಪಡಿಸುವ ಬಗ್ಗೆಯೂ ಪ್ರಧಾನಿ ಮೋದಿ ಚರ್ಚಿಸಿದ್ದಾರೆ.

ನನ್ನ ಮೂರನೇ ಅವಧಿಯ ಆರಂಭದಲ್ಲಿಯೇ ನನಗೆ ಆಸ್ಟ್ರಿಯಾಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ಈ ಪ್ರವಾಸ ಐತಿಹಾಸಿಕ ಮತ್ತು ವಿಶೇಷವಾಗಿದೆ. 41 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದಾರೆ. ಇಂದು ಮಹತ್ವದ ಚರ್ಚೆ ನಡೆದಿದೆ. ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜತೆ ಮಾತುಕತೆ ನಡೆದಿದ್ದು, ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಹೊಸ ಸಾಧ್ಯತೆಗಳನ್ನು ನಾವು ಚರ್ಚಿಸಿದ್ದೇವೆ. ನಾವು ಪರಸ್ಪರರ ಸಾಮರ್ಥ್ಯಗಳನ್ನು ಜೋಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉಕ್ರೇನ್ ಯುದ್ಧ ಬಗ್ಗೆ ಮೋದಿ ಹೇಳಿದ್ದೇನು?

ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆ ಆಸ್ಟ್ರಿಯಾದ ನಾಯಕನೊಂದಿಗೆ ಚರ್ಚಿಸಿರುವುದಾಗಿ ಮೋದಿ ಹೇಳಿದ್ದಾರೆ. ನಾನು ನಿಮಗೆ ಮೊದಲೇ ಹೇಳಿದ್ದೇನೆ, ಇದು ಯುದ್ಧದ ಸಮಯವಲ್ಲ, ಯುದ್ಧ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗುವುದಿಲ್ಲ. ಅದು ಎಲ್ಲೇ ಇದ್ದರೂ, ಅಮಾಯಕರನ್ನು ಕೊಲ್ಲುವುದು ಸ್ವೀಕಾರಾರ್ಹವಲ್ಲ. ಭಾರತ ಮತ್ತು ಆಸ್ಟ್ರಿಯಾ ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಒತ್ತು ನೀಡುತ್ತವೆ. ಅದಕ್ಕಾಗಿ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ.  ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಯಂತಹ ಮೌಲ್ಯಗಳಲ್ಲಿ ಹಂಚಿಕೊಂಡ ನಂಬಿಕೆಗಳು ಭಾರತ ಮತ್ತು ಆಸ್ಟ್ರಿಯಾದ ಸಂಬಂಧಗಳ ಬಲವಾದ ಅಡಿಪಾಯಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ

ಎರಡೂ ದೇಶಗಳು ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತವೆ ಎಂದು ಮೋದಿ ಹೇಳಿದ್ದಾರೆ. ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆ ಸೇರಿದಂತೆ ಮಾನವೀಯತೆಯು ಇದೀಗ ಎದುರಿಸುತ್ತಿರುವ ದೊಡ್ಡ ಸವಾಲುಗಳನ್ನು ನಾವು ಚರ್ಚಿಸಿದ್ದೇವೆ. ಹವಾಮಾನ ವಿಷಯದಲ್ಲಿ, ನಾವು ಆಸ್ಟ್ರಿಯಾವನ್ನು ಅಂತರರಾಷ್ಟ್ರೀಯ ಸೌರ ಮೈತ್ರಿ, ವಿಪತ್ತು ಎದುರಿಸುವ ಮೂಲಸೌಕರ್ಯ ಮತ್ತು ಜೈವಿಕ ಇಂಧನ ಮೈತ್ರಿಯಂತಹ ನಮ್ಮ ಉಪಕ್ರಮಗಳಿಗೆ ಸೇರಲು ಆಹ್ವಾನಿಸುತ್ತಿದ್ದೇವೆ. ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇವೆ, ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಪುಟಿನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಭಾರತವು ಶಾಂತಿಯೊಂದಿಗೆ ನಿಂತಿದೆ ಎಂದು ಪ್ರಧಾನಿ ಮೋದಿ ಜಗತ್ತಿಗೆ ಭರವಸೆ ನೀಡಿದ್ದು, ಬಾಂಬ್, ಬಂದೂಕು ಮತ್ತು ಗುಂಡುಗಳ ನಡುವೆ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Raaj Kumar Anand Joins BJP: ಎಎಪಿಯ ಮಾಜಿ ಸಚಿವ ರಾಜ್​ಕುಮಾರ್ ಆನಂದ್ ಬಿಜೆಪಿ ಸೇರ್ಪಡೆ

ಆಸ್ಟ್ರಿಯನ್ ನಾಯಕ ನೆಹಮ್ಮರ್ ಹೇಳಿದ್ದೇನು?

“ನನಗೆ, ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯರಾಗಿ ಭಾರತವು ಸ್ವಿಸ್ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಿದೆ ಎಂಬುದು ಒಂದು ಪ್ರಮುಖ ಸಂಕೇತವಾಗಿದೆ. ಇಂದು ನಾವು ಇನ್ನೂ ಬಲವಾದ ಬದ್ಧತೆಯ ಬಗ್ಗೆ ಮತ್ತು ಶಾಂತಿ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರಧಾನಿ ಮೋದಿ ಮತ್ತು ನಾನು ಜಾಗತಿಕ ದಕ್ಷಿಣದಲ್ಲಿ ಭಾರತದ ವಿಶಿಷ್ಟ ಸ್ಥಾನವನ್ನು ಚರ್ಚಿಸಿದ್ದೇವೆ. ಭಾರತವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದೆ, ವಿಶೇಷವಾಗಿ ಆಸ್ಟ್ರಿಯಾಕ್ಕೆ ಶಾಂತಿ ಪ್ರಕ್ರಿಯೆ ಮತ್ತು ಭವಿಷ್ಯದ ಶಾಂತಿ ಶೃಂಗಸಭೆಗಳಿಗೆ ಬಂದಾಗ ಅದು ಮುಖ್ಯವಾಗಿದೆ ಎಂದು ನೆಹಮ್ಮರ್ ಹೇಳಿದ್ದಾರೆ.

ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬೆಳವಣಿಗೆಯು ಭಾರತ ಮತ್ತು ಆಸ್ಟ್ರಿಯಾವನ್ನು ಒಂದುಗೂಡಿಸುತ್ತದೆ. ಕಳೆದ ರಾತ್ರಿ ಮತ್ತು ಇಂದು ಬೆಳಿಗ್ಗೆ, ನಾವು ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣಕಾರಿ ಯುದ್ಧದ ಬಗ್ಗೆ ಬಹಳ ತೀವ್ರವಾದ ಮಾತುಕತೆಗಳನ್ನು ನಡೆಸಿದ್ದೇವೆ. ಆಸ್ಟ್ರಿಯಾದ ಫೆಡರಲ್ ಚಾನ್ಸೆಲರ್ ಆಗಿರುವ ನನಗೆ, ಭಾರತದ ಮೌಲ್ಯಮಾಪನವನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ಮತ್ತು ಯುರೋಪಿಯನ್ ದೇಶದೊಂದಿಗೆ ಭಾರತವನ್ನು ಪರಿಚಯಿಸುವುದು ಮುಖ್ಯವಾಗಿದೆ. ಆತಂಕಗಳು ಮತ್ತು ಚಿಂತೆಗಳ ನಡುವೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಒಂದು ಪ್ರಮುಖ ವಿಷಯವಾಗಿದೆ. ಈ ಸವಾಲಿನ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಜೊತೆಗೆ, ನಾವು ನಮ್ಮ ಸಹಕಾರದ ಸಕಾರಾತ್ಮಕ ಅಂಶಗಳನ್ನು ಸಹ ಉಲ್ಲೇಖಿಸಿದ್ದೇವೆ ಎಂದು ಆಸ್ಟ್ರಿಯಾದ ನಾಯಕ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ