ಕೊರೊನಾ ವಿರುದ್ಧ ಸೂಕ್ತ ನಡವಳಿಕೆಯ ಬಗ್ಗೆ ಏಪ್ರಿಲ್ 6ರಿಂದ 21ರವರೆಗೆ ಜಾಗೃತಿ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ

| Updated By: ganapathi bhat

Updated on: Apr 05, 2022 | 12:51 PM

ಕೋವಿಡ್ ಸೂಕ್ತ ನಡವಳಿಕೆಯ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಅಭಿಯಾನವನ್ನು 2021ರ ಏಪ್ರಿಲ್ 6 ರಿಂದ 21 ರವರೆಗೆ ಆಯೋಜಿಸಲಾಗುವುದು. ಮುಂಬರುವ ದಿನಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಜಾರಿಗೊಳಿಸುವ ಅಗತ್ಯ ಮತ್ತು ಹಾಸಿಗೆಗಳ ಲಭ್ಯತೆ, ಪರೀಕ್ಷಾ ಸೌಲಭ್ಯಗಳು ಮತ್ತು ಸಮಯೋಚಿತವಾಗಿ ಆಸ್ಪತ್ರೆಗೆ ದಾಖಲು ಮಾಡುವುದು ಇತ್ಯಾದಿಗಳ ಅಗತ್ಯವನ್ನು ಪ್ರಧಾನಿ ಹೇಳಿದರು.

ಕೊರೊನಾ ವಿರುದ್ಧ ಸೂಕ್ತ ನಡವಳಿಕೆಯ ಬಗ್ಗೆ ಏಪ್ರಿಲ್ 6ರಿಂದ 21ರವರೆಗೆ ಜಾಗೃತಿ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಲಸಿಕಾ ಕಾರ್ಯಕ್ರಮದ ಉನ್ನತ ಮಟ್ಟದ ಪರಿಶೀಲನಾ ಸಭೆಯು ಇಂದು (ಏಪ್ರಿಲ್ 4) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಿತು. ಕೋವಿಡ್-19 ಸಾಂಕ್ರಾಮಿಕದ ಸುಸ್ಥಿರ ನಿರ್ವಹಣೆಗಾಗಿ, ಸಮುದಾಯದ ಜಾಗೃತಿ ಮತ್ತು ಅದರ ಭಾಗವಹಿಸುವಿಕೆ ಪ್ರಮುಖವಾಗಿದ್ದು, ಕೋವಿಡ್-19 ನಿರ್ವಹಣೆಯನ್ನು ಜನರ ಸಹಭಾಗಿತ್ವ ಮತ್ತು ಜನಾಂದೋಲನವನ್ನಾಗಿ ಮುಂದುವರಿಸುವ ಅವಶ್ಯಕತೆಯಿದೆ ಎಂದು ಪ್ರಧಾನಿ ನಿರ್ದೇಶನ ನೀಡಿದರು. ಪರೀಕ್ಷೆ, ಪತ್ತೆ, ಚಿಕಿತ್ಸೆ, ಕೋವಿಡ್-ಸೂಕ್ತ ನಡವಳಿಕೆ ಮತ್ತು ಲಸಿಕೆ ಎಂಬ ಐದು ಕಾರ್ಯತಂತ್ರಗಳನ್ನು ಅತ್ಯಂತ ಗಂಭೀರ ಮತ್ತು ಬದ್ಧತೆಯಿಂದ ಕಾರ್ಯಗತಗೊಳಿಸಿದರೆ ಸಾಂಕ್ರಾಮಿಕ ರೋಗ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಅವರು ಹೇಳಿದರು.

ಶೇ.100 ರಷ್ಟು ಮುಖಗವಸು ಬಳಕೆ, ಸಾರ್ವಜನಿಕ ನೈರ್ಮಲ್ಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ / ಕೆಲಸದ ಸ್ಥಳಗಳಲ್ಲಿ ಹಾಗೂ ಆರೋಗ್ಯ ಸೌಲಭ್ಯಗಳಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಕೋವಿಡ್ ಸೂಕ್ತ ನಡವಳಿಕೆಯ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಅಭಿಯಾನವನ್ನು 2021ರ ಏಪ್ರಿಲ್ 6 ರಿಂದ 21 ರವರೆಗೆ ಆಯೋಜಿಸಲಾಗುವುದು. ಮುಂಬರುವ ದಿನಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಜಾರಿಗೊಳಿಸುವ ಅಗತ್ಯ ಮತ್ತು ಹಾಸಿಗೆಗಳ ಲಭ್ಯತೆ, ಪರೀಕ್ಷಾ ಸೌಲಭ್ಯಗಳು ಮತ್ತು ಸಮಯೋಚಿತವಾಗಿ ಆಸ್ಪತ್ರೆಗೆ ದಾಖಲು ಮಾಡುವುದು ಇತ್ಯಾದಿಗಳ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.

ಆರೋಗ್ಯ ಮೂಲಸೌಕರ್ಯಗಳ ಹೆಚ್ಚಳ, ಆಮ್ಲಜನಕದ ಲಭ್ಯತೆ, ಅಗತ್ಯವಿರುವ ಲಾಜಿಸ್ಟಿಕ್ಸ್ ಜೊತೆಗೆ ವೆಂಟಿಲೇಟರ್‌ಗಳು ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಇರುವವರಿಗೆ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಯಾವುದೇ ಸಂದರ್ಭಗಳಲ್ಲೂ ಮರಣ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.

ಹೆಚ್ಚಿನ ಪ್ರಮಾಣದ ಪ್ರಕರಣಗಳು ಮತ್ತು ಸಾವುಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವೈದ್ಯರನ್ನು ಒಳಗೊಂಡ ಕೇಂದ್ರ ತಂಡಗಳನ್ನು ಮಹಾರಾಷ್ಟ್ರಕ್ಕೆ ಮತ್ತು ವಿಪರೀತ ಸಾವುಗಳು ವರದಿಯಾಗುತ್ತಿರುವ ಪಂಜಾಬ್ ಮತ್ತು ಛತ್ತೀಸ್‌ಗಢಕ್ಕೂ ಕಳುಹಿಸಬೇಕೆಂದು ಪ್ರಧಾನಿ ನಿರ್ದೇಶನ ನೀಡಿದರು.

ಸಕ್ರಿಯ ಪ್ರಕರಣಗಳ ಪತ್ತೆ ಮತ್ತು ನಿಯಂತ್ರಣ ವಲಯಗಳ ನಿರ್ವಹಣೆಯಲ್ಲಿ ಸಮುದಾಯ ಸ್ವಯಂಸೇವಕರ ಪಾಲ್ಗೊಳ್ಳುವಿಕೆಯ ಜೊತೆಗೆ, ನಿಯಂತ್ರಣ ಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿಯವರು ವಿಶೇಷವಾಗಿ ಹೇಳಿದರು. ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಹೆಚ್ಚು ಪ್ರಕರಣಗಳು ವರದಿಯಾದ ಸ್ಥಳಗಳಲ್ಲಿ ಸಮಗ್ರ ನಿರ್ಬಂಧಗಳೊಂದಿಗೆ ಎಲ್ಲಾ ರಾಜ್ಯಗಳು ಅಗತ್ಯವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.

ಮಹಾರಾಷ್ಟ್ರ, ಪಂಜಾಬ್, ಛತ್ತೀಸ್​ಗಢಕ್ಕೆ ವಿಶೇಷ ಕಾಳಜಿ
ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಪ್ರಮಾಣ ಅಪಾಯಕಾರಿಯಾಗಿರುವ ಹಾಗೂ 10 ರಾಜ್ಯಗಳು ಶೇ.91 ಕ್ಕಿಂತ ಹೆಚ್ಚು ಪ್ರಕರಣಗಳು ಮತ್ತು ಸಾವಿಗೆ ಕಾರಣವಾಗಿರುವ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಲಾಯಿತು.  ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್‌ಗಢದ ಪರಿಸ್ಥಿತಿ ಗಂಭೀರವಾಗಿರುವ ಬಗ್ಗೆ ಗಮನಿಸಲಾಯಿತು. ಕಳೆದ 14 ದಿನಗಳಲ್ಲಿ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.57 ಮತ್ತು ಶೇ.47 ರಷ್ಟು ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ದೈನಂದಿನ ಒಟ್ಟು ಹೊಸ ಪ್ರಕರಣಗಳ ಸಂಖ್ಯೆ 47,913 ಅನ್ನು ಮುಟ್ಟಿದೆ, ಇದು ಆ ರಾಜ್ಯದಲ್ಲಿ ಹಿಂದೆ ದಾಖಲಾಗಿದ್ದ ಗರಿಷ್ಠಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ಕಳೆದ 14 ದಿನಗಳಲ್ಲಿ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.4.5 ರಷ್ಟು ಪಂಜಾಬ್ ನಿಂದ ವರದಿಯಾಗಿವೆ. ಆದರೆ, ಒಟ್ಟು ಸಾವಿನ ಸಂಖ್ಯೆಯ ಶೇ.16.3 ರಷ್ಟು ಇಲ್ಲಿ ಸಂಭವಿಸಿರುವುದು ಗಂಭೀರವಾದ ವಿಷಯವಾಗಿದೆ. ಅದೇ ರೀತಿ, ಕಳೆದ 14 ದಿನಗಳಲ್ಲಿ ಛತ್ತೀಸ್‌ಗಢದಲ್ಲಿ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 4.3 ರಷ್ಟು ವರದಿಯಾಗಿದ್ದರೂ, ಅದೇ ಅವಧಿಯಲ್ಲಿ ಒಟ್ಟು ಸಾವಿನ ಕೊಡುಗೆ ಶೇ.7 ನ್ನು ಮೀರಿದೆ. ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 91.4 ರಷ್ಟು ಮತ್ತು ಒಟ್ಟು ಸಾವುಗಳಲ್ಲಿ ಶೇ.90.9 ರಷ್ಟು ದಾಖಲಾಗಿವೆ.

ಮುಖಗವಸುಗಳ ಬಳಕೆ ‘ಎರಡು ಗಜಗಳ ಅಂತರ’ ದಂತಹ ಕೋವಿಡ್-ಸೂಕ್ತವಾದ ನಡವಳಿಕೆಯ ಅನುಸರಣೆಯಲ್ಲಿನ ತೀವ್ರ ಕುಸಿತ ಮತ್ತು ಕ್ಷೇತ್ರ ಮಟ್ಟದಲ್ಲಿ ನಿಯಂತ್ರಕ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದಾಗಿ ಪ್ರಕರಣಗಳ ತೀವ್ರ ಏರಿಕೆಗೆ ಕಾರಣಗಳಾಗಿವೆ ಎಂದು ಹೇಳಲಾಯಿತು.

ಕೊವಿಡ್ -19 ನಿಯಂತ್ರಣಕ್ಕೆ ಸೂಕ್ತ ಶಿಷ್ಟಾಚಾರ ನಿರ್ಣಾಯಕ
ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಉಲ್ಬಣಕ್ಕೆ ವೈರಾಣುವಿನ ರೂಪಾಂತರಿ ತಳಿಗಳು ಕಾರಣವೆಂದು ಹೇಳಲಾಗುತ್ತಿದ್ದರೂ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕ್ರಮಗಳು ಒಂದೇ ಆಗಿರುತ್ತವೆ. ಆದ್ದರಿಂದ ಕೋವಿಡ್-19 ನಿರ್ವಹಣೆಗೆ ವಿವಿಧ ಶಿಷ್ಟಾಚಾರಗಳ ಅನುಷ್ಠಾನವು ಆ ಪ್ರದೇಶಗಳಲ್ಲಿ ಹೆಚ್ಚು ನಿರ್ಣಾಯಕವಾಗಿದೆ.

ಸಭೆಯಲ್ಲಿ ಕೋವಿಡ್-19 ಲಸಿಕಾ ಕಾರ್ಯಕ್ರಮದ ಕಾರ್ಯಕ್ಷಮತೆಯ ಬಗ್ಗೆ ಸಂಕ್ಷಿಪ್ತ ಪ್ರಸ್ತುತಿಯನ್ನು ಸಹ ನೀಡಲಾಯಿತು. ಇದರಲ್ಲಿ ವಿವಿಧ ಗುಂಪುಗಳಲ್ಲಿ ಲಸಿಕೆಯ ವ್ಯಾಪ್ತಿ, ಇತರ ದೇಶಗಳಿಗೆ ಸಂಬಂಧಿಸಿದಂತೆ ಕಾರ್ಯಕ್ಷಮತೆ ಮತ್ತು ರಾಜ್ಯಗಳ ಕಾರ್ಯಕ್ಷಮತೆಯ ವಿಶ್ಲೇಷಣೆಯ ವಿವರಗಳನ್ನು ನೀಡಲಾಯಿತು. ಸೂಕ್ತ ಕ್ರಮಗಳಿಗಾಗಿ ಕಾರ್ಯಕ್ಷಮತೆಯ ದೈನಂದಿನ ವಿಶ್ಲೇಷಣೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಸೂಚಿಸಲಾಯಿತು.

ಲಸಿಕೆ ತಯಾರಿ, ಪೂರೈಕೆಗೆ ಸಕಲ ಪ್ರಯತ್ನ
ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ, ಅಸ್ತಿತ್ವದಲ್ಲಿರುವ ಲಸಿಕೆ ತಯಾರಕರ ಉತ್ಪಾದನಾ ಸಾಮರ್ಥ್ಯ ಮತ್ತು ಪ್ರಯೋಗಗಳ ಹಂತದಲ್ಲಿರುವ ಲಸಿಕೆಗಳ ಸಾಮರ್ಥ್ಯದ ಬಗ್ಗೆಯೂ ಚರ್ಚಿಸಲಾಯಿತು. ಲಸಿಕೆ ತಯಾರಕರು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಇತರ ದೇಶೀಯ ಮತ್ತು ವಿದೇಶಿ ಕಂಪನಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಲಾಯಿತು. ಹೆಚ್ಚುತ್ತಿರುವ ದೇಶೀಯ ಅವಶ್ಯಕತೆಗಳನ್ನು ಪೂರೈಸಲು ಮತ್ತು ಇತರ ದೇಶಗಳ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದ ಲಸಿಕೆಗಳನ್ನು ತಯಾರಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಲಾಯಿತು.

ದೇಶದಲ್ಲಿ ಕಳೆದ 15 ತಿಂಗಳುಗಳಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಆಗಿರುವ ಸಾಮೂಹಿಕ ಲಾಭಗಳು ವ್ಯರ್ಥವಾಗದಂತೆ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಅಭಿಯಾನ ಮಾದರಿ ವಿಧಾನವನ್ನು ಮುಂದುವರಿಸಲು ಪ್ರಧಾನಿಯವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಲಸಿಕೆ ಕಾರ್ಯಕ್ರಮದ ಸಶಕ್ತ ಗುಂಪಿನ ಅಧ್ಯಕ್ಷರು, ಆರೋಗ್ಯ ಕಾರ್ಯದರ್ಶಿ, ಔಷಧ ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ ಕಾರ್ಯದರ್ಶಿ, ಆಯುಷ್ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕರು, ಭಾರತದ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಮತ್ತು ನೀತಿ ಆಯೋಗದ ಸದಸ್ಯರು ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಜಿಮ್ ಬಂದ್ ನಿರ್ಧಾರ ವಾಪಸ್; ಆದರೆ ಷರತ್ತುಗಳು ಅನ್ವಯ

Karnataka Covid-19 Update: ಕರ್ನಾಟಕದಲ್ಲಿ ಇಂದು 4,553 ಜನರಿಗೆ ಕೊರೊನಾ ದೃಢ; ಬೆಂಗಳೂರಲ್ಲಿ 2787 ಪ್ರಕರಣ ದಾಖಲು

Published On - 10:24 pm, Sun, 4 April 21