ಕೊರೊನಾ ಲಸಿಕೆ ನೀಡಿಕೆಯಲ್ಲಿ ಹಿಂದುಳಿದ ಜಿಲ್ಲೆಗಳ ಮೇಲೆ ಪ್ರಧಾನಿ ಮೋದಿ ಕಣ್ಣು; ನವೆಂಬರ್​ 3ರಂದು ಪರಿಶೀಲನಾ ಸಭೆ

| Updated By: Lakshmi Hegde

Updated on: Oct 31, 2021 | 5:21 PM

ಜಾರ್ಖಂಡ, ಮಣಿಪುರ, ನಾಗಾಲ್ಯಾಂಡ್​​, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಸೇರಿ ಒಟ್ಟು 11  ರಾಜ್ಯಗಳಿಂದ  40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ನ.3ರಂದು ನರೇಂದ್ರ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವರು.

ಕೊರೊನಾ ಲಸಿಕೆ ನೀಡಿಕೆಯಲ್ಲಿ ಹಿಂದುಳಿದ ಜಿಲ್ಲೆಗಳ  ಮೇಲೆ ಪ್ರಧಾನಿ ಮೋದಿ ಕಣ್ಣು; ನವೆಂಬರ್​ 3ರಂದು ಪರಿಶೀಲನಾ ಸಭೆ
ನರೇಂದ್ರ ಮೋದಿ
Follow us on

ದೆಹಲಿ: ಕೊರೊನಾ ಲಸಿಕೆ ಅಭಿಯಾನ (Corona Vaccine Drive) ಒಂದೆಡೆ ಭರದಿಂದ ಸಾಗುತ್ತಿದೆ. ಆದರೆ ಕೆಲವು ರಾಜ್ಯಗಳ ಒಂದಷ್ಟು ಜಿಲ್ಲೆಗಳಲ್ಲಿ ಇನ್ನೂ  ಲಸಿಕೆ ನೀಡಿಕೆ ಕಡಿಮೆ ಪ್ರಮಾಣದಲ್ಲೇ ಇದೆ. ಅಂದರೆ  ಇಷ್ಟು ದಿನಗಳಾದರೂ ಕೊರೊನಾ ಲಸಿಕೆ ಅಭಿಯಾನ ಅಂದುಕೊಂಡಷ್ಟರ ಮಟ್ಟಿಗೆ ವೇಗ ಪಡೆದಿಲ್ಲ. ಇದೀಗ ಇಂಥ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್​ 3ರಂದು ವರ್ಚ್ಯುವಲ್​ ಸಭೆ ನಡೆಸಲಿದ್ದಾರೆ. ಆಯಾ ಜಿಲ್ಲೆಗಳ ಲಸಿಕೆ ವೇಗ, ಪ್ರಮಾಣ ಮತ್ತು ಹಿಂದುಳಿಯಲು ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.  

ಪ್ರಧಾನಿ ನರೇಂದ್ರ ಮೋದಿ ಸದ್ಯ ರೋಮ್​ ಪ್ರವಾಸದಲ್ಲಿದ್ದಾರೆ. ಅಲ್ಲಿ ಇಂದು ಜಿ20 ಶೃಂಗಸಭೆಯ ಎರಡನೇ ಸೆಷನ್ಸ್​​​ನಲ್ಲಿ ಪಾಲ್ಗೊಂಡ ಬಳಿಕ ಇಂಗ್ಲೆಂಡ್​ಗೆ ತೆರಳಿ ಅಲ್ಲಿ COP26 ಶೃಂಗಸಭೆಯಲ್ಲಿ ಭಾಗವಹಿಸುವರು. ನಂತರ ಭಾರತಕ್ಕೆ ವಾಪಸ್​ ಬಂದು ನವೆಂಬರ್​ 3ರಂದು ಮಧ್ಯಾಹ್ನ 12ಗಂಟೆಗೆ ವರ್ಚ್ಯುವಲ್​ ಸಭೆ ನಡೆಸಲಿದ್ದಾರೆ. ಇದುವರೆಗೆ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಲಸಿಕೆ ನೀಡಿಕೆಯಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಂವಾದ ನಡೆಸಲಿದ್ದಾರೆ.

ಜಾರ್ಖಂಡ, ಮಣಿಪುರ, ನಾಗಾಲ್ಯಾಂಡ್​​, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಸೇರಿ ಒಟ್ಟು 11  ರಾಜ್ಯಗಳಿಂದ  40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ನ.3ರಂದು ನರೇಂದ್ರ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವರು. ಆಯಾ ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗವಹಿಸುವರು. ಈ ವರ್ಚ್ಯುವಲ್​ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಇಲಾಖೆಯ ಹಿರಿಯ ಅಧಿಕಾರಿಗಳೂ ಇರಲಿದ್ದಾರೆ.

ದೇಶದಲ್ಲಿ ಒಟ್ಟಾರೆ ಕೊರೊನಾ ಲಸಿಕೆ ನೀಡಿಕೆ 106 ಕೋಟಿ ಡೋಸ್​ ದಾಟಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಇನ್ನೂ ಶೇ.50ನ್ನೂ ದಾಟಿಲ್ಲ. ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಜನವರಿ 16ರಂದು ಶುರುವಾಗಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಯಿತು. ಅದಾದ ಬಳಿಕ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು, ಇತರ ಆರೋಗ್ಯ ಸಮಸ್ಯೆ ಇರುವವರಿಗೆ ನೀಡಲಾಯಿತು. ಇದೀಗ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಶೇ.31ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ನೀಡಿ ಮುಗಿದಿದೆ. ಇನ್ನು ಶೇ.75ರಷ್ಟು ಜನರು ಒಂದು ಡೋಸ್​ ಕೊರೊನಾ ಲಸಿಕೆ ಪಡೆದಿದ್ದಾರೆ.

ಇದನ್ನೂ ಓದಿ:  ಅಡೆನ್​ನಲ್ಲಿ ಮತ್ತೆ ಸ್ಫೋಟ, 6 ಮಂದಿ ಸಾವು; ಈ ಬಾರಿ ಏರ್​​ಪೋರ್ಟ್​​ನಲ್ಲಿ ನಡೆದ ದುರಂತ

ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದೆ ಎನ್ನುತ್ತ ಮರಳಿ ಟಿಎಂಸಿಗೆ ಬಂದ ರಾಜೀವ್ ಬ್ಯಾನರ್ಜಿ