ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ: ಇಂದು ಸಿಜೆಐ ಎನ್​ವಿ ರಮಣ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ

ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ಗೆ ಭೇಟಿ ಕೊಟ್ಟಿದ್ದಾಗ ಉಂಟಾಗಿರುವ ಭದ್ರತಾ ಲೋಪವನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಇದು ಪಂಜಾಬ್​ ಸರ್ಕಾರದ ತಪ್ಪು ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ.

ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ: ಇಂದು ಸಿಜೆಐ ಎನ್​ವಿ ರಮಣ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Edited By:

Updated on: Jan 10, 2022 | 11:08 AM

ದೆಹಲಿ: ಪಂಜಾಬ್​ನ ಫಿರೋಜ್​ಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾಗ ನಡೆದ ಭದ್ರತಾ ಲೋಪದ(PM Security Breach) ಬಗ್ಗೆ ಕೋರ್ಟ್​ ಮೇಲ್ವಿಚಾರಿತ ತನಿಖೆ ನಡೆಸಬೇಕು ಎಂದು ಮನವಿ ಮಾಡಿ ಸಲ್ಲಿಸಲಾಗಿರುವ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಿದೆ. ಈ ಅರ್ಜಿಯನ್ನು ಲಾಯರ್ಸ್​ ವೈಸ್​ ಎಂಬ ಸಂಸ್ಥೆ ಸಲ್ಲಿಸಿದ್ದು, ಇಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್​ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ. 

ಲಾಯರ್ಸ್​ ವೈಸ್​​ ಪರ ಅರ್ಜಿ ಸಲ್ಲಿಸಿದ ಹಿರಿಯ ವಕೀಲ ಮಣೀಂದರ್​ ಸಿಂಗ್​, ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪವಾಗಿದ್ದು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಷ್ಟೇ ಅಲ್ಲ, ಇದು ವಿಶೇಷ ರಕ್ಷಣಾ ಗುಂಪುಗಳ (SPG) ಕಾಯ್ದೆಯಡಿ ಬರುವ ವಿಷಯ. ಇದೊಂದು ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಚಾರ. ಸಂಸದೀಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್​ಗೆ ಹೇಳಿದ್ದಾರೆ.

ಪ್ರಧಾನಿ ಮೋದಿ ಭದ್ರತೆ ಲೋಪ ಉದ್ದೇಶಪೂರ್ವಕ
ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ಗೆ ಭೇಟಿ ಕೊಟ್ಟಿದ್ದಾಗ ಉಂಟಾಗಿರುವ ಭದ್ರತಾ ಲೋಪವನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದು ಪಂಜಾಬ್​ ಸರ್ಕಾರದ ತಪ್ಪು. ಅಂದು ಭದ್ರತೆಯಲ್ಲಿ ಲೋಪ ಉಂಟಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.  ಪ್ರಧಾನಿ ಮೋದಿಯವರು ಸಂಚಾರ ಮಾಡಲಿದ್ದ ರಸ್ತೆ ಮಾರ್ಗದಲ್ಲಿ ಖಾಸಗಿ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ಹೇಗೆ ಕೊಡಲಾಯಿತು ಎಂದೂ ಪ್ರಶ್ನಿಸಲಾಗಿದೆ. ಪ್ರಧಾನಮಂತ್ರಿ ಸುರಕ್ಷತೆಯ ಒಟ್ಟಾರೆ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿರುತ್ತದೆ. ಆದರೆ ಅಂದು ಸ್ಥಳದಲ್ಲಿದ್ದ ಸ್ಥಳೀಯ ಪೊಲೀಸರು, ಭದ್ರತೆಗೆ ಅಪಾಯವನ್ನುಂಟು ಮಾಡಿದ ವ್ಯಕ್ತಿಗಳೊಂದಿಗೆ ನಿಂತಿದ್ದು ಕಂಡುಬಂತು. ಇದೊಂದು ಆಘಾತಕಾರಿ, ಅಪಾಯಕಾರಿ ಬೆಳವಣಿಗೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪಂಜಾಬ್​​ನ ಫಿರೋಜ್​​ಪುರದಲ್ಲಿ ಜನವರಿ 5ರಂದು ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿತ್ತು. ಹಾಗೇ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಬೇಕಿತ್ತು. ಆದರೆ ಅಂದು ಭಟಿಂಡಾ ವಿಮಾನ ನಿಲ್ದಾಣದಿಂದ ವಾಯು ಮಾರ್ಗದಲ್ಲಿ ಹೋಗಲು ಹವಾಮಾನ ಸರಿಯಿಲ್ಲದ ಕಾರಣ ಪ್ರಧಾನಿ ಮೋದಿ ರಸ್ತೆ ಮಾರ್ಗದಲ್ಲಿ ಹೊರಟಿದ್ದರು. ಆದರೆ ಹುಸ್ಸೇನಿವಾಲಾ ಬಳಿ ಫ್ಲೈಓವರ್ ಸಮೀಪ ರೈತರು ಪ್ರತಿಭಟನೆ ನಡೆಸುತ್ತಿದ್ದ ಕಾರಣ, ಅದೇ ಫ್ಲೈಓವರ್​ ಮೇಲೆ ಪ್ರಧಾನಿ ಮೋದಿ ಸುಮಾರು 20 ನಿಮಿಷ ಕಾದು, ನಂತರ ದೆಹಲಿಗೆ ವಾಪಸ್​ ಬಂದಿದ್ದರು. ಭಟಿಂಡಾ ಏರ್​ಪೋರ್ಟ್​ಗೆ ಬಂದ ಬಳಿಕ, ಸ್ಥಳೀಯ ಅಧಿಕಾರಿಗಳಿಗೆ, ನಾನು ಇಲ್ಲಿಯವರೆಗೆ ಜೀವಂತವಾಗಿಯಾದರೂ ಬಂದೆನಲ್ಲ, ಅದಕ್ಕಾಗಿ ನಿಮ್ಮ ಸಿಎಂಗೆ ಧನ್ಯವಾದ ಸಲ್ಲಿಸಿದ್ದಾಗಿ ಹೇಳಿ ಎಂದಿದ್ದರು. ಸದ್ಯ ಈ ಭದ್ರತೆ ಲೋಪಕ್ಕೆ ದೇಶದಲ್ಲಿ ಅಪಾರ ಆಕ್ಷೇಪ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Covid 19 India Update: ಭಾರತದಲ್ಲಿ 1.79 ಲಕ್ಷ ಮಂದಿಗೆ ಕೊರೊನಾ ಸೋಂಕು, ನಿನ್ನೆಗಿಂತ ಶೇ 12.5ರಷ್ಟು ಹೆಚ್ಚಳ

Published On - 10:55 am, Mon, 10 January 22

Web contact

TV9 Kannada

Read More
Follow Us