AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ತಲ್ಲಣ: ಸಶಕ್ತ ಗುಂಪುಗಳ ಕಾರ್ಯ ನಿರ್ವಹಣೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದ ಪ್ರಧಾನಿ ಮೋದಿ

ಸರಬರಾಜು ಕೊಂಡಿ ಮತ್ತು ಸಾರಿಗೆ ನಿರ್ವಹಣೆ ವ್ಯವಸ್ಥೆಯ ಸಮಸ್ಯೆಗಳಿಗೆ ನೆರವಾಗುವ ಸಶಕ್ತ ಗುಂಪು ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವ ಕ್ರಮಗಳಿಗೆ ಸಂಬಂಧಪಟ್ಟಂತೆ ಹಲವಾರು ಸಲಹೆಗಳ ಬಗ್ಗೆ ಪ್ರಾತ್ಯಕ್ಷಿತೆ ನೀಡಿತು.

ಕೊವಿಡ್ ತಲ್ಲಣ: ಸಶಕ್ತ ಗುಂಪುಗಳ ಕಾರ್ಯ ನಿರ್ವಹಣೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk|

Updated on:May 04, 2021 | 4:54 PM

Share

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರದಂದು ಬೇರೆ ಬೇರೆ ಸಶಕ್ತ ಗುಂಪುಗಳ ಕಾರ್ಯ ನಿರ್ವಹಣೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನೆ ನಡೆಸಿದರು. ಆರ್ಥಿಕ ಮತ್ತು ಕಲ್ಯಾಣ ಮೇಲಿನ ಸಶಕ್ತ ಗುಂಪು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ವಿಸ್ತರಿಸುವುದು, ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ಅನೇಕರಿಗೆ ನೆರವಾಗಿರುವ ವಿಷಯವನ್ನು ಒಳಗೊಂಡಂತೆ ಜನರಿಗೆ ಸಹಾಯ ಒದಗಿಸುವ ದಿಶೆಯಲ್ಲಿ ತೆಗೆದುಕೊಂಡ ನಾನಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿತೆ ನೀಡಿತು. ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ವಿಮೆ ಯೋಜನೆಯನ್ನು ಆರು ತಿಂಗಳ ಅವಧಿಗೆ ವಿಸ್ತರಿಸಿರುವುದನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತರಲಾಯಿತು. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಮನ್ವಯತೆಯೊಂದಿಗೆ ಆಹಾರ ಧಾನ್ಯಗಳು ಬಡ ಕುಟುಂಬಗಳಿಗೆ ಉಚಿತವಾಗಿ ಯಾವುದೇ ಸಮಸ್ಯೆಗಳಿಲ್ಲದೆ ವಿತರಣೆಯಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮಂತ್ರಿ ನಿರ್ದೇಶನ ನೀಡಿದರು, ಹಾಗೆಯೇ ಮೃತ ವ್ಯಕ್ತಿಯ ಕುಟುಂಬಕ್ಕೆ ಪೆಂಡಿಂಗ್​ನಲ್ಲಿರುವ ವಿಮಾ ಮೊತ್ತ ತ್ವರಿತವಾಗಿ ತಲುಪಲು ಕ್ರಮಗಳನ್ನು ತೆಗೆದುಕೊಂಡರೆ ಆಯಾ ಕುಟುಬದ ಸದಸ್ಯರಿಗೆ ಸಕಾಲದಲ್ಲಿ ಹಣಕಾಸಿನ ನೆರವು ಸಿಕ್ಕಂತಾಗುತ್ತದೆ ಎಂದು ಪ್ರಧಾನಿಗಳು ಸಭೆಯಲ್ಲಿ ಹೇಳಿದರು.

ಸರಬರಾಜು ಕೊಂಡಿ ಮತ್ತು ಸಾರಿಗೆ ನಿರ್ವಹಣೆ ವ್ಯವಸ್ಥೆಯ ಸಮಸ್ಯೆಗಳಿಗೆ ನೆರವಾಗುವ ಸಶಕ್ತ ಗುಂಪು ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವ ಕ್ರಮಗಳಿಗೆ ಸಂಬಂಧಪಟ್ಟಂತೆ ಹಲವಾರು ಸಲಹೆಗಳ ಬಗ್ಗೆ ಪ್ರಾತ್ಯಕ್ಷಿತೆ ನೀಡಿತು. ಸರಬರಾಜು ಸರಪಣಿ ಗೆ ಅಡಚಣೆಯಾಗದ ಹಾಗೆ ಆಹಾರ ಪದಾರ್ಥಗಳ ಸಾಗಾಣಿಕೆ ಜಾರಿಯಲ್ಲಿಡಲು ಸಮಗ್ರವಾದ ಯೋಜನೆ ರೂಪಿಸಿಕೊಳ್ಳುವಂತೆ ಪ್ರಧಾನಿ ಮೋದಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಖಾಸಗಿ ವಲಯ, ಎನ್​​ಜಿಒ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸುವ ಸಶಕ್ತ ಗುಂಪು ಸರ್ಕಾರವು ಖಾಸಗಿ ವಲಯ, ಎನ್​​ಜಿಒ ಮತ್ತು ಅಂತರರಾಷ್ಟ್ರೀಯ ಸಂಸ್ಥೆ ಸಹಭಾಗಿತ್ವದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಪ್ರಧಾನ ಮಂತ್ರಿಗಳಿಗೆ ವಿವರಿಸಿತು. ನಾಗರಿಕ ಸಮುದಾಯಗಳ ಸ್ವಯಂ ಸೇವಕರನ್ನು ಪರಿಣಿತಿಯ ಅಗತ್ಯವಿರದ ಕೆಲಸಗಳಿಗೆ ಬಳಸಿಕೊಂಡು ಆರೋಗ್ಯ ವಲಯದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಪ್ರಧಾನಿ ಹೇಳಿದರು. ಸೋಂಕಿತರು, ಅವರ ಸಂಬಂಧಿಕರು ಮತ್ತು ಅರೋಗ್ಯ ಕಾರ್ಯಕರ್ತರ ನಡುವೆ ಸಂಪರ್ಕದ ಲೈನುಗಳನ್ನು ಸ್ಥಾಪಿಸಲು ಎನ್​ಜಿಒಗಳ ಸಹಾಯ ಪಡೆದುಕೊಳ್ಳುವ ಕುರಿತು ಚರ್ಚೆ ನಡೆಯಿತು. ಹೋಮ್ ಕ್ವಾರಂಟೈನ್​ನಲ್ಲಿರುವ ರೋಗಿಗಳೊಂದಿಗೆ ಸಂಪರ್ಕ ಜಾರಿಯಲ್ಲಿಡುವುದಕ್ಕೆ ಕಾಲ್​ ಸೆಂಟರ್​ಗಳನ್ನು ನಿಭಾಯಿಸಲು ಮಾಜಿ ಯೋಧರ ಮನವೊಲಿಸಬೇಕು ಎನ್ನುವುದನ್ನು ಸಹ ಚರ್ಚಿಸಲಾಯಿತು.

ಇದನ್ನೂ ಓದಿ: PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್​ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ

Published On - 12:58 am, Sat, 1 May 21