ನಮ್ಮನ್ನು ಟೀಕಿಸಿ ಪರವಾಗಿಲ್ಲ, ನಿಮ್ಮ ಕೆಲಸ ಏನೆಂದು ಮರೆಯಬೇಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

| Updated By: ಸುಷ್ಮಾ ಚಕ್ರೆ

Updated on: Feb 08, 2022 | 8:22 PM

ನನ್ನ ಮುತ್ತಜ್ಜ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸತ್ಯ. ಅದಕ್ಕೆ ಯಾರ ಪ್ರಮಾಣಪತ್ರವೂ ಬೇಕಾಗಿಲ್ಲ. ನಾವು ಸತ್ಯವನ್ನು ಹೇಳುವುದರಿಂದ ಬಿಜೆಪಿಗೆ ಕಾಂಗ್ರೆಸ್ ಕುರಿತು ಭಯವಿದೆ' ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ನಮ್ಮನ್ನು ಟೀಕಿಸಿ ಪರವಾಗಿಲ್ಲ, ನಿಮ್ಮ ಕೆಲಸ ಏನೆಂದು ಮರೆಯಬೇಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು
ರಾಹುಲ್ ಗಾಂಧಿ- ನರೇಂದ್ರ ಮೋದಿ
Follow us on

ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೌನ ಮುರಿದಿದ್ದು, ಕಾಂಗ್ರೆಸ್ ಮತ್ತು ನೆಹರು ಅವರನ್ನು ನಿಂದಿಸಿ, ಪರವಾಗಿಲ್ಲ. ಆದರೆ ನಿಮ್ಮ ಕೆಲಸವೇನಿದೆಯೋ ಅದನ್ನು ಸರಿಯಾಗಿ ಮಾಡಿ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ. ‘ನನ್ನ ಪ್ರಶ್ನೆಗಳಿಗೆ ನರೇಂದ್ರ ಮೋದಿ ಕೊನೆಗೂ ಉತ್ತರಿಸಲಿಲ್ಲ. ನಾವು ಚೀನಾ ಮತ್ತು ಪಾಕಿಸ್ತಾನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನನ್ನ ಮುತ್ತಜ್ಜ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸತ್ಯ. ಅದಕ್ಕೆ ನನಗೆ ಯಾರ ಪ್ರಮಾಣಪತ್ರವೂ ಬೇಕಾಗಿಲ್ಲ. ನಾವು ಸತ್ಯವನ್ನು ಹೇಳುವುದರಿಂದ ಬಿಜೆಪಿಗೆ ಕಾಂಗ್ರೆಸ್ ಕುರಿತು ಭಯವಿದೆ’ ಎಂದು ರಾಹುಲ್‌ ಗಾಂಧಿ (Rahul Gandhi) ಟೀಕಿಸಿದ್ದಾರೆ.

ರಾಜ್ಯಸಭೆಯಲ್ಲಿ ಭಾಷಣ ಮಾಡುವಾಗ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದರೆ ತುರ್ತು ಪರಿಸ್ಥಿತಿ, ಕುಟುಂಬ ರಾಜಕಾರಣ, ಸಿಖ್ ದಂಗೆ, ಕಾಶ್ಮೀರಿ ಪಂಡಿತರ ವಲಸೆ ಆಗುತ್ತಿರಲಿಲ್ಲ. ಕಾಂಗ್ರೆಸ್‌ಗೆ ವಂಶಾಡಳಿತದ ರಾಜಕೀಯವನ್ನು ಮೀರಿ ಯೋಚಿಸಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇತಿಹಾಸವನ್ನು ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅರ್ಬನ್ ನಕ್ಸಲ್ ಬಲೆಗೆ ಸಿಲುಕಿದೆ. ನಗರ ನಕ್ಸಲರು ಅವರ ಸಂಪೂರ್ಣ ಆಲೋಚನಾ ವಿಧಾನವನ್ನು ಸೆರೆಹಿಡಿದಿದ್ದಾರೆ. ನಗರ ನಕ್ಸಲರು ಅವರ ದುಃಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದಾರೆ. ಭಾರತದ ಉಜ್ವಲ ಭವಿಷ್ಯದಲ್ಲಿ ನಂಬಿಕೆ ಇಡುವಂತೆ ನಾನು ಎಲ್ಲರನ್ನು ವಿನಂತಿಸುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.

‘ಭಾರತವೇ ಇಂದಿರಾ, ಇಂದಿರಾ ಅವರೇ ಭಾರತ’ ಎಂಬ ಚಿಂತನೆಯ ಫಲವನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಇಲ್ಲದಿದ್ದರೆ, ತುರ್ತು ಪರಿಸ್ಥಿತಿ, ಸಿಖ್ ದಂಗೆಗಳು, ಕಾಶ್ಮೀರಿ ಪಂಡಿತರ ವಲಸೆ ನಡೆಯುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಕಾಂಗ್ರೆಸ್ ಕೇವಲ ವಂಶ ಪಾರಂಪರಿಕ ರಾಜಕಾರಣದತ್ತ ಕೇಂದ್ರೀಕರಿಸಿತೇ ವಿನಃ ದೇಶದ ಅಭಿವೃದ್ಧಿಯತ್ತ ಹೆಚ್ಚು ಗಮನ ನೀಡಲಿಲ್ಲ ಎಂದು ಮೋದಿ ಟೀಕಿಸಿದ್ದರು.

ಇದನ್ನೂ ಓದಿ: PM Modi in Parliament: ಇನ್ನು 100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ; ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೇವಡಿ

PM Modi in Parliament: ಕಾಂಗ್ರೆಸ್ ಇಲ್ಲದಿದ್ದರೆ ತುರ್ತು ಪರಿಸ್ಥಿತಿ, ಸಿಖ್ ದಂಗೆಗಳು ಸಂಭವಿಸುತ್ತಿರಲಿಲ್ಲ; ಸಂಸತ್​ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ