ದೇಶದಿಂದ ಬಡತನ ನಿವಾರಿಸುತ್ತೇವೆ ಅಂತ ಅಂದಿದ್ದರು ಅಜ್ಜಿ; ಈಗ ಮೊಮ್ಮಗನ ಸರದಿ; ಇವರದು ಬಡವರ ಅವಹೇಳನ: ಪ್ರಧಾನಿ ಮೋದಿ ಗುಡುಗು

|

Updated on: Apr 14, 2024 | 5:34 PM

Narendra Modi @ Hoshangabad: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಹೊಡೆತಕ್ಕೆ ಬಡತನ ನಿವಾರಿಸುತ್ತೇವೆ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ರಾಯಲ್ ಮೆಜೀಶಿಯಲ್ ಎಂದು ಮೋದಿ ಬಣ್ಣಿಸಿದ್ದಾರೆ. ಅವರ ಅಜ್ಜಿ ಬಡತನ ನಿವಾರಿಸುತ್ತೇವೆ ಎಂದು ಹೇಳಿ 50 ವರ್ಷ ಆಯಿತು. 2014ಕ್ಕೆ ಮುಂಚೆ 10 ವರ್ಷ ಇವರು ರಿಮೋಟ್ ಆಗಿ ಆಡಳಿತ ನಡೆಸಿದ್ದರು. ಆಗ ಏನು ಮಾಡಿದ್ದರು ಎಂದು ಗಾಂಧಿ ಕುಟುಂಬವನ್ನು ಮೋದಿ ಪ್ರಶ್ನಿಸಿದ್ದಾರೆ.

ದೇಶದಿಂದ ಬಡತನ ನಿವಾರಿಸುತ್ತೇವೆ ಅಂತ ಅಂದಿದ್ದರು ಅಜ್ಜಿ; ಈಗ ಮೊಮ್ಮಗನ ಸರದಿ; ಇವರದು ಬಡವರ ಅವಹೇಳನ: ಪ್ರಧಾನಿ ಮೋದಿ ಗುಡುಗು
ನರೇಂದ್ರ ಮೋದಿ
Follow us on

ಭೋಪಾಲ್, ಏಪ್ರಿಲ್ 14: ಒಂದೇ ಏಟಿಗೆ ಬಡತನ ನಿವಾರಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಯನ್ನು ಪ್ರಧಾನಿ ಮೋದಿ ಅವರು ಮಹಾ ಮಾಂತ್ರಿಕ (Royal Magician) ಎಂದು ಬಣ್ಣಿಸಿದ್ದಾರೆ. ಮಧ್ಯಪ್ರದೇಶದ ಹೋಶಂಗಾಬಾದ್​ನಲ್ಲಿ (Hoshangabad) ನಡೆದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ (Narendra Modi), ಒಂದೇ ಏಟಿಗೆ ಬಡತನ ನಿವಾರಿಸುತ್ತೇನೆಂದು ರಾಹುಲ್ ಗಾಂಧಿ ಹೇಳಿದ್ದು ಬಡವರನ್ನು ಅವಹೇಳನ ಮಾಡಿದಂತೆ ಎಂದಿದ್ದಾರೆ.

‘2014ಕ್ಕೆ ಮುಂಚೆ ಇವರು (ಗಾಂಧಿ ಕುಟುಂಬ) 10 ವರ್ಷ ಕಾಲ ಹೊರಗಿನಿಂದ ಸರ್ಕಾರವನ್ನು ನಿಯಂತ್ರಿಸುತ್ತಿದ್ದರು. ಈಗ ಬಡತನ ನಿವಾರಿಸುವ ಮಂತ್ರ ಸಿಕ್ಕಿದೆ ಎನ್ನುತ್ತಿದ್ದಾರೆ. ಎಲ್ಲಿಂದ ಸಿಕ್ಕಿತು ಈ ಮಂತ್ರ ಇವರಿಗೆ? ಇದು ಬಡವರ ಅವಹೇಳನ ಅಲ್ಲದೇ ಇನ್ನೇನು ನೀವೇ ಹೇಳಿ. ಇಂಥ ಹೇಳಿಕೆಗಳನ್ನು ನೀಡಿ ಇವರು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇವರನ್ನು ಈ ದೇಶ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ,’ ಎಂದು ಪ್ರಧಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಏನೇನು ಭರವಸೆ?

ರಾಹುಲ್ ಗಾಂಧಿ ಕಳೆದ ವಾರ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಒಂದೇ ಏಟಿನಲ್ಲಿ ಬಡತನ ನಿವಾರಿಸುತ್ತದೆ ಎಂದು ಹೇಳಿದ್ದರು.

‘ನೀವು ಬಡತನ ರೇಖೆಯಿಂದ ಕೆಳಗಿದ್ದರೆ ಆಗ ಒಂದು ಲಕ್ಷ ರೂ ಹಣ ನಿಮ್ಮ ಖಾತೆ ಬಂದು ಬೀಳುತ್ತಿರುತ್ತದೆ. ಈ ಒಂದೇ ಹೊಡೆತದಿಂದ ಹಿಂದೂಸ್ತಾನದಿಂದ ಬಡತನವನ್ನು ತೊಲಗಿಸುತ್ತೇವೆ,’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ವೃದ್ಧರಿಗೆ ಬಿಜೆಪಿಯಿಂದ ಉಚಿತ ಆರೋಗ್ಯ ವಿಮೆ ಭರವಸೆ; ಏನಿದು ಆಯುಷ್ಮಾನ್ ಭಾರತ್ ಸ್ಕೀಮ್?

ಗರೀಬೀ ಹಠಾವೋ ಎಂದು ಹೇಳಿ 50 ವರ್ಷ ಆಯಿತು ಎಂದ ಮೋದಿ

ಒಂದೇ ಏಟಿಗೆ ಬಡತನ ನಿವಾರಿಸುತ್ತೇವೆ ಎಂದ ರಾಹುಲ್ ಗಾಂಧಿ ಹೇಳಿಕೆಗೆ ಇನ್ನಷ್ಟು ತಿರುಗೇಟು ನೀಡಿದ ನರೇಂದ್ರ ಮೋದಿ, ‘ಇಷ್ಟು ವರ್ಷ ಈ ಮಹಾ ಮಾಂತ್ರಿಕ ಎಲ್ಲಿ ಹೋಗಿದ್ದರು? ಅವರ ಅಜ್ಜಿ ಈ ದೇಶದಿಂದ ಬಡತನ ತೊಲಗಿಸುತ್ತೇವೆ ಎಂದು ಘೋಷಿಸಿ 50 ವರ್ಷ ಆಯಿತು,’ ಎಂದು ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ ಅವರ ಈ ಭಾಷಣಕ್ಕೆ ಒಂದೆರಡು ಗಂಟೆ ಮೊದಲು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಆಗಿದೆ. ಇದೀಗ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಿಂದ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರಸಭೆಗಳನ್ನು ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ