ನೋ ಚಾನ್ಸ್.. ಯಾವ ಕಾರಣಕ್ಕೂ ನಿಮಗೆ ಸಿಂಧೂ ನದಿ ನೀರು ಬಿಡಲ್ಲ: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಠಿಣ ಸಂದೇಶ ರವಾನಿಸಿದ್ದಾರೆ. ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿಯ ನೀರನ್ನು ತಲುಪಲು ಬಿಡುವುದಿಲ್ಲ ಎಂದು ಅವರು ಪುನರುಚ್ಚರಿಸಿದರು. ಪಾಕಿಸ್ತಾನ ಗಡಿಯಾಚೆಯ ಭಯೋತ್ಪಾದನೆ ನಿಲ್ಲಿಸುವವರೆಗೂ ಸಿಂಧೂ ನೀರು ಹಂಚಿಕೆ ಒಪ್ಪಂದವನ್ನು ಭಾರತ ತಡೆಹಿಡಿದಿದೆ. ಆರ್ಟಿಕಲ್ 370 ರದ್ದತಿ, ಕಾಶ್ಮೀರದ ಪ್ರಗತಿ ಸೇರಿದಂತೆ ಎನ್‌ಡಿಎ ಸರ್ಕಾರದ ಪ್ರಮುಖ ಸಾಧನೆಗಳನ್ನು ಸಿಂಗ್ ಎತ್ತಿ ತೋರಿಸಿದರು.

ನೋ ಚಾನ್ಸ್.. ಯಾವ ಕಾರಣಕ್ಕೂ ನಿಮಗೆ ಸಿಂಧೂ ನದಿ ನೀರು ಬಿಡಲ್ಲ: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
ರಾಜನಾಥ್ ಸಿಂಗ್

Updated on: Jun 13, 2026 | 12:01 PM

ಹೈದರಾಬಾದ್, ಜೂ.13: ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಭಯೋತ್ಪಾದನೆಯನ್ನು ಪ್ರಾಯೋಜಿಸುವವರಿಗೆ ಸಿಂಧೂ ನದಿಯ ನೀರನ್ನು ತಲುಪಲು ಎನ್‌ಡಿಎ (NDA) ಸರ್ಕಾರ ಎಂದಿಗೂ ಬಿಡುವುದಿಲ್ಲ” ಎಂದು ಅವರು ಶುಕ್ರವಾರ (ಜೂ.12) ಖಡಕ್ ಆಗಿ ಹೇಳಿದ್ದಾರೆ. ತೆಲಂಗಾಣ ಬಿಜೆಪಿಯು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ Intellectuals Meet ಉದ್ದೇಶಿಸಿ ಮಾತನಾಡಿದ ಅವರು, ಶಾಂತಿ ಮತ್ತು ಸೌಹಾರ್ದತೆಯ ಭಾಷೆಯನ್ನು ಅರ್ಥಮಾಡಿಕೊಳ್ಳದವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತು ಎಂಬುದನ್ನು ‘ಆಪರೇಷನ್ ಸಿಂಧೂರ್’ (Operation Sindoor) ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದರು.

“ಕಳೆದ ವರ್ಷ ನಡೆದ ಭೀಕರ ಪಹಲ್ಗಾಮ್ ಉಗ್ರರ ದಾಳಿಯ ನಂತರ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ನಾವು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದೇವೆ. ಯಾರ ಕಣ್ಣೀರು ಒಣಗಿ ಹೋಗಿದೆಯೋ, ಅವರು ನಮ್ಮಿಂದ ನೀರನ್ನು ನಿರೀಕ್ಷಿಸಬಾರದು. ಮಾನವೀಯತೆಯ ಶತ್ರುಗಳಿಗೆ ಮತ್ತು ಭಯೋತ್ಪಾದಕರ ಪೋಷಕರಿಗೆ ಸಿಂಧೂ ನೀರನ್ನು ಕೊಡುವುದಿಲ್ಲ” ಎಂದು ಸಿಂಗ್ ಪುನರುಚ್ಚರಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂಬ ಐತಿಹಾಸಿಕ ಘೋಷಣೆಯನ್ನು ರಾಜನಾಥ್ ಸಿಂಗ್ ಅವರ ಈ ಹೇಳಿಕೆಯನ್ನು ನೆನಪಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ 1960 ರ ಸೆಪ್ಟೆಂಬರ್ 19 ರಂದು ಸಿಂಧೂ ನದಿ ವ್ಯವಸ್ಥೆಯ ಬಳಕೆಯ ಕುರಿತು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ, ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಸಾರ್ವಭೌಮ ಹಕ್ಕನ್ನು ಚಲಾಯಿಸಿರುವ ಭಾರತವು ಈ ಒಪ್ಪಂದವನ್ನು ಸದ್ಯಕ್ಕೆ ತಡೆಹಿಡಿದಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಎನ್‌ಡಿಎ ಸರ್ಕಾರ ಸಾಧಿಸಿರುವ ಪ್ರಮುಖ ಮೈಲಿಗಲ್ಲುಗಳನ್ನು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕಾಂಗ್ರೆಸ್ ಒಮ್ಮೆ ಆರ್ಟಿಕಲ್ 370 ಅನ್ನು ಯಾರೂ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಆದರೆ ನಮ್ಮ ಸರ್ಕಾರ ಅದನ್ನು ಅತ್ಯಂತ ಸಲೀಸಾಗಿ ರದ್ದುಗೊಳಿಸಿದ್ದನ್ನು ನೀವು ನೋಡಿದ್ದೀರಿ. ಇನ್ನು ನಕ್ಸಲ್ ಮುಕ್ತ ಭಾರತ ಮಾಡುವ ಬಗ್ಗೆ ದೇಶವನ್ನು ಬಹುತೇಕ ನಕ್ಸಲ್ ಮುಕ್ತಗೊಳಿಸುವತ್ತ ಸರ್ಕಾರ ಗಣನೀಯ ಪ್ರಗತಿ ಸಾಧಿಸಿದೆ. ದೇಶಾದ್ಯಂತ ಜಿಎಸ್‌ಟಿ ಜಾರಿ, ಮನೆ ಮನೆಗೆ ವಿದ್ಯುದ್ದೀಕರಣ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆ ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಅಮರನಾಥ ಯಾತ್ರೆ ಭದ್ರತೆ ಪರಿಶೀಲನೆ; ಯಾತ್ರಾರ್ಥಿಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಅಮಿತ್ ಶಾ ಆದೇಶ

ಒಂದು ಕಾಲದಲ್ಲಿ ಭಯೋತ್ಪಾದನೆಗೆ ಹೆಸರಾಗಿದ್ದ ಕಾಶ್ಮೀರದಲ್ಲಿ ಇಂದು ಪ್ರವಾಸೋದ್ಯಮ, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಇಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಅಲ್ಲಿ ಮೊದಲ ಬಾರಿಗೆ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಮೊಹರಂ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುತ್ತಿವೆ ಮತ್ತು ದಶಕಗಳಿಂದ ಮುಚ್ಚಲ್ಪಟ್ಟಿದ್ದ ಸಿನಿಮಾ ಹಾಲ್‌ಗಳು ಈಗ ಮತ್ತೆ ಬಾಗಿಲು ತೆರೆಯುತ್ತಿವೆ ಎಂದು ಕಾಶ್ಮೀರದ ಬದಲಾದ ಸುಂದರ ಚಿತ್ರಣವನ್ನು ರಾಜನಾಥ್ ಸಿಂಗ್ ಬಿಚ್ಚಿಟ್ಟರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:46 am, Sat, 13 June 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us