ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ ತನಿಖೆಯು ಅಂತಿಮ ಘಟ್ಟದಲ್ಲಿದೆ. ಹಿಂದೂ ಧರ್ಮ ಸೇನೆಯ ಮುಖ್ಯಸ್ಥ ಸಂತೋಷ್ ದುಬೆ ಅವರನ್ನು ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಭ್ರಷ್ಟಾಚಾರ ಆರೋಪಗಳಿಗೆ ಸೂಕ್ತ ಪುರಾವೆಗಳನ್ನು ಸಲ್ಲಿಸಲು ಎಸ್‌ಐಟಿ ಅವರಿಗೆ ಇಂದು ಅಂತಿಮ ಗಡುವು ನೀಡಿದೆ. ಕೋಟ್ಯಂತರ ಭಕ್ತರ ಭಾವನೆಗಳನ್ನು ಕೆರಳಿಸಿರುವ ಈ ಪ್ರಕರಣದಲ್ಲಿ ಸಲ್ಲಿಸುವ ಸಾಕ್ಷ್ಯಗಳು ಟ್ರಸ್ಟ್‌ನಲ್ಲಿನ ದೊಡ್ಡ ತಲೆಗಳ ಮೇಲೆ ಪರಿಣಾಮ ಬೀರಲಿವೆ.

ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು
ರಾಮ ಮಂದಿರ

Updated on: Jul 13, 2026 | 9:14 AM

ಅಯೋಧ್ಯೆ, ಜುಲೈ 13: ಅಯೋಧ್ಯೆ ರಾಮ ಮಂದಿರ(Ram Mandir)ದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಮಂದಿರದೊಳಗಿನ ಭ್ರಷ್ಟಾಚಾರ ಮತ್ತು ಕಾಣಿಕೆ ಲೂಟಿಯನ್ನು ಸಾರ್ವಜನಿಕವಾಗಿ ಬಯಲಿಗೆಳೆದು ದೇಶಾದ್ಯಂತ ಸಂಚಲನ ಮೂಡಿಸಿದ್ದ ಹಿಂದೂ ಧರ್ಮ ಸೇನೆಯ ಮುಖ್ಯಸ್ಥ ಸಂತೋಷ್ ದುಬೆ ಅವರನ್ನು ಎಸ್​ಐಟಿ ತಂಡ (SIT) ತೀವ್ರ ವಿಚಾರಣೆಗೆ ಒಳಪಡಿಸಿದೆ.

ಅಯೋಧ್ಯೆಯ ನಗರ ಪೊಲೀಸ್ ಮುಖ್ಯಸ್ಥರ ಸಮ್ಮುಖದಲ್ಲಿ ಸಿಓ  ಸಿಟಿ ಕಚೇರಿಗೆ ಸಂತೋಷ್ ದುಬೆ ಅವರನ್ನು ಕರೆಸಲಾಗಿತ್ತು. ಅಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೂವರು ಹಿರಿಯ ಎಸ್‌ಐಟಿ ಸದಸ್ಯರು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತಾವು ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಸೂಕ್ತ ಪುರಾವೆಗಳನ್ನು ನೀಡುವಂತೆ ಎಸ್‌ಐಟಿ ಸೂಚಿಸಿದ್ದು, ಸಾಕ್ಷ್ಯಗಳನ್ನು ಹಾಜರುಪಡಿಸಲು ಸೋಮವಾರದವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ.

ಯಾರು ಈ ಸಂತೋಷ್ ದುಬೆ?

ರಾಮ ಮಂದಿರ ಚಳವಳಿಯ ಇತಿಹಾಸದಲ್ಲಿ ಸಂತೋಷ್ ದುಬೆ ಅತ್ಯಂತ ಪರಿಚಿತ ಹಾಗೂ ಪ್ರಭಾವಿ ಹೆಸರು. ಡಿಸೆಂಬರ್ 6, 1992 ರಂದು ಅಯೋಧ್ಯೆಯ ವಿವಾದಿತ ಬಾಬ್ರಿ ರಚನೆಯನ್ನು ಕೆಡವಿದ ಪ್ರಕರಣದಲ್ಲಿ ಸಿಬಿಐ (CBI) ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಸಂತೋಷ್ ದುಬೆ ಅವರನ್ನು ಪ್ರಮುಖ ಆರೋಪಿಗಳಲ್ಲಿ ಒಬ್ಬರೆಂದು ಹೆಸರಿಸಲಾಗಿತ್ತು.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?

ದಶಕಗಳ ಕಾಲ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಇವರು, ಪ್ರಸ್ತುತ ಮಂದಿರದ ಆಡಳಿತ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಪ್ರಮುಖ ದೂರುದಾರರಾಗಿದ್ದಾರೆ.

ಹಗರಣದ ತನಿಖೆಗೆ ಒತ್ತಾಯಿಸಿದ್ದ ಧೀಮಂತ ನಾಯಕ

ರಾಮ ಮಂದಿರದ ಕಾಣಿಕೆ ಕೌಂಟರ್‌ನಲ್ಲಿ ಬ್ಯಾಂಕ್ ನೌಕರರು ಮತ್ತು ಟ್ರಸ್ಟ್‌ನ ಕೆಲವರ ಸಮ್ಮತಿಯೊಂದಿಗೆ ಕೋಟ್ಯಂತರ ರೂಪಾಯಿ ನಗದು ಲೂಟಿಯಾಗುತ್ತಿದೆ ಎಂದು ದೇಶದ ಮಾಧ್ಯಮಗಳ ಮುಂದೆ ಮೊದಲು ಗಂಭೀರ ಆರೋಪ ಮಾಡಿದ್ದೇ ಸಂತೋಷ್ ದುಬೆ.

ಅಷ್ಟಕ್ಕೇ ನಿಲ್ಲದೆ, ಇವರು ಅಯೋಧ್ಯೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿ ಲಿಖಿತ ದೂರನ್ನು ದಾಖಲಿಸಿದ್ದರು. ಈ ಮೆಗಾ ಹಗರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಸಿಕ್ಕಿಬಿದ್ದಿರುವ ಆರೋಪಿಗಳಿಗೆ ಕೇವಲ ಸಾಧಾರಣ ತನಿಖೆ ಸಾಲದು, ಅವರ ಮೇಲೆ ‘ಪಾಲಿಗ್ರಾಫ್ ಪರೀಕ್ಷೆ’ ನಡೆಸಬೇಕೆಂದು ಅವರು ಪಟ್ಟು ಹಿಡಿದಿದ್ದರು. ಇವರ ದೂರಿನ ತೀವ್ರತೆಯನ್ನು ಪರಿಗಣಿಸಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಭಕ್ತರ ಭಾವನೆ ಮತ್ತು ಕಾಣಿಕೆಯ ಪವಿತ್ರತೆ

ವಿಶ್ವದ ಮೂಲೆ ಮೂಲೆಗಳಿಂದ ಬರುವ ಕೋಟ್ಯಂತರ ರಾಮಭಕ್ತರು ತಮ್ಮ ಬೆವರಿನ ದುಡಿಮೆಯ ಹಣವನ್ನು ಅತ್ಯಂತ ಭಕ್ತಿಯಿಂದ ಅಯೋಧ್ಯೆಯ ರಾಮನ ಪಾದಕ್ಕೆ ಸಮರ್ಪಿಸುತ್ತಾರೆ. ಅಂತಹ ಪವಿತ್ರ ಕಾಣಿಕೆಯನ್ನು ಮಂದಿರದ ಒಳಗಿರುವ ನೌಕರರೇ ವ್ಯವಸ್ಥಿತ ಸ್ಕೆಚ್ ಹಾಕಿ ಕದಿಯುತ್ತಿರುವುದು ದೇಶದಾದ್ಯಂತ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ.

ಈ ಹಿನ್ನೆಲೆಯಲ್ಲಿ ಸಂತೋಷ್ ದುಬೆ ಅವರು ಎಸ್‌ಐಟಿಗೆ ನೀಡಲಿರುವ ಇಂದಿನ ಸಾಕ್ಷ್ಯಗಳು ಅತ್ಯಂತ ನಿರ್ಣಾಯಕವಾಗಿದ್ದು, ಟ್ರಸ್ಟ್‌ನ ಒಳಗಿರುವ ದೊಡ್ಡ ತಲೆಗಳು ದೂಳೀಪಟವಾಗುವ ಸಾಧ್ಯತೆಯಿದೆ. ಜುಲೈ 22 ರಂದು ನಡೆಯಲಿರುವ ರಾಮ ಮಂದಿರ ಟ್ರಸ್ಟ್‌ನ ಮಹಾಸಭೆಯ ಮೇಲೂ ಈ ತನಿಖೆಯ ವರದಿ ಭಾರಿ ಪ್ರಭಾವ ಬೀರಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us