ರಾಮ ಮಂದಿರ ಟ್ರಸ್ಟ್‌ಗೆ ಬಿಕ್ಕಟ್ಟು: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಕುರಿತು ಇಂದು ಮಹತ್ವದ ಸಭೆ

ಅಯೋಧ್ಯೆ ಶ್ರೀರಾಮ ಮಂದಿರ ದೇಣಿಗೆ ದುರುಪಯೋಗ ಹಗರಣದ ತನಿಖೆ ತೀವ್ರಗೊಂಡಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ಕುರಿತು ಇಂದು ಮಹತ್ವದ ಸಭೆ ನಡೆಯಲಿದೆ. ಎಸ್‌ಐಟಿ ತನಿಖೆ ವರದಿ ಮತ್ತು ಆಡಿಟ್ ಪರಿಶೀಲಿಸಲಾಗುವುದು. ಹೊಸ ಆಡಳಿತ ಮಂಡಳಿ ರಚನೆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಟ್ರಸ್ಟ್‌ನ ನಿರ್ಧಾರದ ಮೇಲೆ ಎಲ್ಲರ ಗಮನ.

ರಾಮ ಮಂದಿರ ಟ್ರಸ್ಟ್‌ಗೆ ಬಿಕ್ಕಟ್ಟು: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಕುರಿತು ಇಂದು ಮಹತ್ವದ ಸಭೆ
ರಾಮ ಮಂದಿರ

Updated on: Jul 06, 2026 | 7:48 AM

ಅಯೋಧ್ಯಾ, ಜುಲೈ 06: ಅಯೋಧ್ಯೆಯ ರಾಮ ಮಂದಿರ(Ram Mandir)ದ ದೇಣಿಗೆ ಹಣ ದುರುಪಯೋಗ ಹಗರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು (ಸೋಮವಾರ) ಮಧ್ಯಾಹ್ನ 3 ಗಂಟೆಗೆ ಅತ್ಯಂತ ನಿರ್ಣಾಯಕ ಸಭೆಯನ್ನು ನಡೆಸಲಿದೆ. ದೇವಸ್ಥಾನದ ಕಾಣಿಕೆ ಕಳ್ಳತನದ ನೈತಿಕ ಹೊಣೆ ಹೊತ್ತು ಈಗಾಗಲೇ ರಾಜೀನಾಮೆ ನೀಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆ ಅಂಗೀಕಾರದ ಕುರಿತು ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಮಾಧ್ಯಮಗಳ ಕಣ್ಣು ತಪ್ಪಿಸಲು ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಸಭೆಯ ಸ್ಥಳವನ್ನು ಮಣಿ ರಾಮ್ ಚಾವ್ನಿಯಿಂದ ರಾಮ ಮಂದಿರದ ಆವರಣದೊಳಗಿನ ಅತಿಥಿ ಗೃಹಕ್ಕೆ ಬದಲಾಯಿಸಲಾಗಿದೆ. ಇತ್ತೀಚೆಗಷ್ಟೇ ಉಸಿರಾಟದ ತೊಂದರೆ ಮತ್ತು ಮೂತ್ರನಾಳದ ಸೋಂಕಿನಿಂದಾಗಿ ಲಕ್ನೋದ ಆಸ್ಪತ್ರೆಗೆ ದಾಖಲಾಗಿದ್ದ ಟ್ರಸ್ಟ್‌ನ 89 ವರ್ಷದ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರು ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಆದರೆ, ಹಿರಿಯ ಟ್ರಸ್ಟಿ ಕೆ. ಪರಾಸರನ್ ಅವರು ವಯೋಸಹಜ ಸಮಸ್ಯೆಯಿಂದಾಗಿ ಅಯೋಧ್ಯೆಗೆ ಬರಲು ಸಾಧ್ಯವಾಗದ ಕಾರಣ ಆನ್‌ಲೈನ್ (ವರ್ಚುವಲ್) ಮೂಲಕ ಸಭೆಗೆ ಹಾಜರಾಗಲಿದ್ದಾರೆ. 15 ಸದಸ್ಯರ ಈ ಟ್ರಸ್ಟ್‌ನಲ್ಲಿ ಒಂದು ವೇಳೆ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆ ಅಂಗೀಕಾರವಾದರೆ, ಹೊಸ ಆಡಳಿತ ಮಂಡಳಿಯ ರಚನೆಯ ಬಗ್ಗೆ ಚರ್ಚೆ ನಡೆಯಲಿದೆ.

ಎಸ್‌ಐಟಿ (SIT) ವರದಿ ಮೇಲಿನ ಚರ್ಚೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಈ ಹಗರಣದ ತನಿಖೆಯನ್ನು ನಡೆಸುತ್ತಿದ್ದು, ಸಭೆಯಲ್ಲಿ ಅದರ ಸಂಶೋಧನೆಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ. ಎಸ್‌ಐಟಿ ಈಗಾಗಲೇ ಚಂಪತ್ ರಾಯ್ ಅವರ ಆಪ್ತ ಸಹಾಯಕ ತಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ. ಅಲ್ಲದೆ, ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ವಿಶೇಷ ಆಹ್ವಾನಿತ ಗೋಪಾಲ್ ರಾವ್ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ, ಇವರ ವಿರುದ್ಧ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಮತ್ತಷ್ಟು ಓದಿ: ‘ಆಪರೇಷನ್ ರಾಮ ಮಂದಿರ್’; ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಗಂಭೀರ ಆರೋಪ

ಆಡಿಟ್ ವರದಿಗಳ ಪರಿಶೀಲನೆ
ಕಳೆದ ಕೆಲವು ವರ್ಷಗಳ ಟ್ರಸ್ಟ್‌ನ ಹಣಕಾಸು ಚಟುವಟಿಕೆಗಳ ಆಡಿಟ್ ವರದಿಗಳನ್ನು ಎಸ್‌ಐಟಿ ಪರಿಶೀಲಿಸುವ ಸಾಧ್ಯತೆಯಿದೆ. ಈ ನಡುವೆ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ಅವರು, ಟ್ರಸ್ಟ್‌ನ ಹಣಕಾಸು ವ್ಯವಸ್ಥೆಗಳು ಸಂಪೂರ್ಣ ಪಾರದರ್ಶಕವಾಗಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ದೇವಸ್ಥಾನದ ಹಣ ಲೂಟಿ ಮಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಂದಿನ ಸಭೆಯಲ್ಲಿ ಟ್ರಸ್ಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us