ರೈತರು-ಸರಕಾರದ ನಡುವಿನ ಮಾತುಕತೆ ವಿಫಲಗೊಳಿಸಲು ಅಂತರಾಷ್ಟ್ರೀಯ ಸಂಚೇ ಕಾರಣ; ಆರ್​ಎಸ್​ಎಸ್​

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಕುರಿತಾಗಿ ಆರ್​ಎಸ್​ಎಸ್​ ವಿಭಿನ್ನ ನಿಲುವು ತಳೆದಿರುವಂತಿದೆ. ಈ ನಿಲುವು ಕೇಂದ್ರ ಸರಕಾರದ ನೀತಿಗಿಂತ ವಿಭಿನ್ನವಾಗಿರುವುದು ವಿಶೇಷ. ಈ ಕುರಿತಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ

ರೈತರು-ಸರಕಾರದ ನಡುವಿನ ಮಾತುಕತೆ ವಿಫಲಗೊಳಿಸಲು ಅಂತರಾಷ್ಟ್ರೀಯ ಸಂಚೇ ಕಾರಣ; ಆರ್​ಎಸ್​ಎಸ್​
ಮುಷ್ಕರನಿರತ ರೈತರು
Edited By:

Updated on: Mar 20, 2021 | 7:23 PM

ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ದ್ವೈವಾರ್ಷಿಕ, ಅಖಿಲ ಭಾರತ ಪ್ರತಿನಿಧಿಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ರಾಜಕೀಯ ಕೂಸು, ಭಾರತೀಯ ಜನತಾ ಪಕ್ಷದ ನಿಲುವಿಗಿಂತ ಭಿನ್ನ ನಿಲುವು ತಳೆದಿದೆ. ಭಾರತೀಯ ಜನತಾ ಪಕ್ಷ ರೈತ ಚಳುವಳಿಗೆ ದೇಶ ವಿರೋಧಿ ಸಂಘಟನೆಗಳ ಸಂಬಂಧ ಇದೆ, ಬೇರೆ ದೇಶಗಳಲ್ಲಿ ಇರುವ ಇಂಥ ಸಂಘಟನೆಗಳಿಂದ ಹಣಕಾಸಿನ ನೆರವು ಹರಿದು ಬರುತ್ತಿದೆ ಎಂದು ಹೇಳಿದೆ. ಆದರೆ ಆರ್​ಎಸ್​ಎಸ್​ ರೈತರ ಚಳುವಳಿಯನ್ನು ಟೀಕಿಸದೇ, ಅಂತರಾಷ್ಟ್ರೀಯ ಮಟ್ಟದ ಶಕ್ತಿಗಳು ಕೇಂದ್ರ ಸರಕಾರ ಮತ್ತು ರೈತ ಚಳುವಳಿ ನಾಯಕರ ನಡುವಿನ ಮಾತುಕತೆ ಸಫಲವಾಗದಂತೆ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಯಾವಾಗ ದೇಶವಿರೋಧಿ ಶಕ್ತಿಗಳು ಈ ಸಮಸ್ಯೆಗೆ (ರೈತರ ಬೇಡಿಕೆ) ಒಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಕಲ್ಲು ಹಾಕುತ್ತಾರೋ, ಆಗ ಸಮಸ್ಯೆ ಮತ್ತಷ್ಟು ಕಗ್ಗಂಟಾಗುವುದು ಖಂಡಿತ. ರೈತ ಚಳುವಳಿಯನ್ನು ನಡೆಸುತ್ತಿರುವ ನಾಯಕರು ಇದಕ್ಕೆ ಅವಕಾಶ ಕೊಡಬಾರದು ಎಂದು ಅಖಿಲ ಭಾರತ ಪ್ರತಿನಿಧಿಗಳ ಸಭೆಗೆ ನೀಡಿದ ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರಕಾರದ ನಿಲುವಿಗಿಂತ ಭಿನ್ನವಾಗಿದೆ.

ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದಿದ್ದ ಮೂರು ರೈತರ ಕಾನೂನನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಕಳೆದ 110 ದಿನಗಳಿಂದ ರೈತರು ಚಳುವಳಿ ನಡೆಸುತ್ತಿದ್ದಾರೆ. ಅವರ ಪ್ರಕಾರ, ಆ ಮೂರು ಕಾನೂನುಗಳು ರೈತರ ವಿರೋಧಿಯಾಗಿವೆ. ರೈತರಿಗೆ ಅನುಕೂಲ ಮಾಡಿಕೊಡುವಂಥ ಕೆಲವು ವಿಚಾರಗಳು ಆ ಕಾನೂನುಗಳಲ್ಲಿ ಇಲ್ಲ ಎಂಬುದು ಅವರ ವಾದ.

ಆದರೆ ಸ್ವದೇಶಿ ಜಾಗರಣ ಮಂಚ್ ಮತ್ತು ಭಾರತೀಯ ಕಿಸಾನ್​ ಸಂಘ ರೈತ ಚಳುವಳಿಯನ್ನು ಬೆಂಬಲಿಸಿವೆ. ಈ ಮೂರು ಕಾನೂನುಗಳು ಕಾರ್ಪೋರೇಟ್​ ಜಗತ್ತಿನ ಬಲಾಢ್ಯ ಶಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡಲು ಮುಂದಾಗಿವೆ. ತಾವು ಯಾರು ಕೂಡ ಈಗ ನಡೆಯುತ್ತಿರುವ ಚಳುವಳಿಯಲ್ಲಿ ಭಾಗವಹಿಸುವುದಿಲ್ಲ. ಆದರೆ, ನೈತಿಕ ಬೆಂಬಲ ನೀಡುತ್ತೇವೆ ಎಂದು ಬಿಕೆಎಸ್​ನ ಬದರಿ ನಾರಾಯಣ್​ ಸಿಂಗ್ ಈ ಹಿಂದೆ ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು.

 

(Report given to RSS ABPS meet says that international forces thwarted the talks between government farmers leaders)

Dr Bhaskar Hegde

ಟಿವಿ9 ಡಿಜಿಟಲ್​ ಸಂಪಾದಕ. 28 ವರ್ಷಗಳಿಂದ ಇಂಗ್ಲಿಷ್ ಮುದ್ರಣ ಮಾಧ್ಯಮ​ ಮತ್ತು ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಸುದ್ದಿ, ದೀರ್ಘ ಲೇಖನ, ನುಡಿಚಿತ್ರ, ವಿಶ್ಲೇಷಣೆ, ಅಂಕಣ ಸ್ಕೂಪ್​ ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಎರಡು ಕಥಾ ಸಂಕಲನಗಳ ಪ್ರಕಟಣೆ. ಸಾರ್ವಜನಿಕ ನೀತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್​ಡಿ ಪದವಿ. ಹಿಂದೂಸ್ತಾನಿ ಸಂಗೀತ, ಕ್ರಿಕೆಟ್​, ತತ್ವಶಾಸ್ತ್ರ ಮತ್ತು ಕಾನೂನಿನ ವಿಷಯದ ತೀವ್ರ ಆಸಕ್ತಿ.

Read More
Follow Us