
ನವದೆಹಲಿ, ಆಗಸ್ಟ್ 22: ಬಾರ್ ಕೌನ್ಸಿಲ್ ಆಫ್ ಇಂಡಿಯಾದ (BCI) ಆಡಳಿತ ವ್ಯವಸ್ಥೆಯಲ್ಲಿ ಭಾರಿ ಕೋಲಾಹಲ ಎದ್ದಿದ್ದು, ಬಿಸಿಐ ಸಹ-ಅಧ್ಯಕ್ಷ ವೈ.ಆರ್. ಸದಾಶಿವ ರೆಡ್ಡಿ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ ಪತ್ರ ಬರೆದು 15 ದಿನಗಳ ಒಳಗಾಗಿ ಹುದ್ದೆಗೆ ರಾಜೀನಾಮೆ ನೀಡುವಂತೆ ಗಡುವು ನೀಡಿದ್ದಾರೆ. ಬಾರ್ ಕೌನ್ಸಿಲ್ ಅನ್ನು ಸಂಸ್ಥೆಯಾಗಿ ನಡೆಸುವ ಬದಲು ವೈಯಕ್ತಿಕ ಸ್ವತ್ತಿನಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಸದಾಶಿವ ರೆಡ್ಡಿ, ತಕ್ಷಣವೇ ಕೌನ್ಸಿಲ್ನ ಸಂಪೂರ್ಣ ಸಭೆಯನ್ನು ಕರೆಯಬೇಕು, ಎಲ್ಲಾ ಅನುಮಾನಾಸ್ಪದ ಪಾವತಿಗಳನ್ನು ತಡೆಹಿಡಿಯಬೇಕು ಮತ್ತು ಸ್ವತಂತ್ರ ಲೆಕ್ಕ ಪರಿಶೋಧನೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಸಿಐ ಅಧ್ಯಕ್ಷರ ವಿರುದ್ಧದ ಪ್ರಮುಖ ಆರೋಪಗಳು:
150 ಕೋಟಿ ರೂ. ನಿಧಿ ವರ್ಗಾವಣೆ:
ಮೂಲ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್’ ಅನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಿ, ಸೆಪ್ಟೆಂಬರ್ 2020ರಲ್ಲಿ ‘BCI Trust PEARL First’ ಎಂಬ ಖಾಸಗಿ ಸ್ವರೂಪದ ನೂತನ ಟ್ರಸ್ಟ್ ನೋಂದಾಯಿಸಲಾಗಿದೆ. ಮನನ್ ಕುಮಾರ್ ಮಿಶ್ರಾ ಅವರು ತಮಗೆ ಬೇಕಾದವರನ್ನೇ ಟ್ರಸ್ಟಿಗಳನ್ನಾಗಿ ನೇಮಿಸಿಕೊಂಡಿದ್ದು, ಬಿಸಿಐನ ಸುಮಾರು 150 ಕೋಟಿ ರೂ. ಹಣವನ್ನು ಈ ಟ್ರಸ್ಟ್ಗೆ ವರ್ಗಾಯಿಸಲು ನಿರ್ಣಯ ಅಂಗೀಕರಿಸಿದ್ದಾರೆ. ಇತರ ಸದಸ್ಯರ ವಿರೋಧವನ್ನೂ ಲೆಕ್ಕಿಸದೆ ಈ ನಿಧಿ ವರ್ಗಾವಣೆ ನಡೆಸಲಾಗಿದೆ.
ಇದನ್ನೂ ಓದಿ: ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಿಸಬೇಡಿ ಎಂದಿದ್ದ ನಲ್ಸಾರ್ ವಿದ್ಯಾರ್ಥಿಗಳ ಈ ವರ್ಷದ ನೋಂದಣಿ ತಡೆಹಿಡಿದ ಬಾರ್ ಕೌನ್ಸಿಲ್!
ಕಾನೂನು ಕಾಲೇಜುಗಳಿಂದ ಭಾರಿ ವಸೂಲಿ:
ದೇಶದ ಕಾನೂನು ಕಾಲೇಜುಗಳಿಗೆ ಬಿಸಿಐ ಮಾನ್ಯತೆ ನೀಡಲು ಅಥವಾ ನವೀಕರಿಸಲು ಭಾರಿ ಮೊತ್ತದ ಹಣವನ್ನು ನೀಡುವಂತೆ ಒತ್ತಡ ಹೇರಲಾಗುತ್ತಿದೆ. ನಿಯಂತ್ರಕ ಸಂಸ್ಥೆಯೊಂದು ತಾನು ನಿಯಂತ್ರಿಸುವ ಕಾಲೇಜುಗಳಿಂದಲೇ ಹಣ ಪಡೆಯುವುದು ವಿಪರ್ಯಾಸ.
ಅಕ್ರಮ ನೇಮಕಾತಿ:
ಬಾರ್ ಕೌನ್ಸಿಲ್ ಮತ್ತು ಅದರ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ತೀವ್ರ ಸ್ವಜನಪಕ್ಷಪಾತ ನಡೆದಿದೆ. ಯಾವುದೇ ಅಧಿಕೃತ ಜಾಹೀರಾತು ಅಥವಾ ಅರ್ಹತಾ ಪಟ್ಟಿ ಪ್ರಕಟಿಸದೇ, ಮಿಶ್ರಾ ಅವರ ಹತ್ತಿರದ ಸಂಬಂಧಿಕರು ಮತ್ತು ಕುಟುಂಬದವರನ್ನೇ ಉನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ತಾನು ಸಿಎಂ ಆಗಲು ಇಡೀ ರಾಜ್ಯವನ್ನು ಹಾಳುಮಾಡಲು ಹೊರಟಿದ್ದಾರೆ: ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಬಾರ್ ಕೌನ್ಸಿಲ್ ಅಧ್ಯಕ್ಷ
ವೃತ್ತಿಪರ ಸಂಸ್ಥೆಯ ಸಾರ್ವಭೌಮತ್ವ:
“ಬಾರ್ ಕೌನ್ಸಿಲ್ ಎನ್ನುವುದು ಇಡೀ ವಕೀಲರ ವೃತ್ತಿಪರ ಸಮುದಾಯಕ್ಕೆ ಸೇರಿದ್ದೇ ಹೊರತು, ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ” ಎಂದು ಸದಾಶಿವ ರೆಡ್ಡಿ ತಮ್ಮ ಪತ್ರದಲ್ಲಿ ಕಿಡಿಕಾರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ