
ಬಾರಾಮತಿ, ಆಗಸ್ಟ್ 23: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಎನ್ಸಿಪಿ (ಶರದ್ಚಂದ್ರ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಅವರ ಆಪ್ತ ಸಹಾಯಕ (PA) ಅಜಿತ್ ದಶಾವತಾರೆ ಅವರ 12 ವರ್ಷದ ಅಪ್ರಾಪ್ತ ಮಗಳು ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆಯಿಂದ ಇಡೀ ಪ್ರದೇಶದಲ್ಲಿ ಆತಂಕ ಮತ್ತು ಆಘಾತದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.
ತಾಯಿಯೊಂದಿಗೆ ಮುನಿಸು: ಶನಿವಾರ ಮನೆಯಲ್ಲಿ ಸಣ್ಣ ವಿಚಾರಕ್ಕೆ ತಾಯಿಯೊಂದಿಗೆ ವಾಗ್ವಾದ ನಡೆಸಿದ್ದ ಬಾಲಕಿ, ಕೋಪಗೊಂಡು ಮನೆಯಿಂದ ಹೊರಟು ಹೋಗಿದ್ದಳು. ಬಾಲಕಿ ಸಂಜೆಯಾದರೂ ಮನೆಗೆ ವಾಪಸ್ ಬಾರದಿದ್ದಾಗ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿ, ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.
ಭಾನುವಾರ ಬೆಳಗ್ಗೆ ಬಾರಾಮತಿ ತೆಹ್ಸಿಲ್ನ ರುಯಿ ಗ್ರಾಮದ ಸಾಯಿನಗರ ಪ್ರದೇಶದಲ್ಲಿರುವ ಆಕೆಯ ಮನೆಯ ಸಮೀಪದಲ್ಲೇ ಬಾಲಕಿಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪಂಚನಾಮೆ ನಡೆಸಿ, ಸಾವಿನ ನಿಖರ ಕಾರಣ ತಿಳಿಯಲು ಶವವನ್ನು ಬಾರಾಮತಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ದುರಂತ: ಬೆಟ್ಟದ ಅಂಚಿನಲ್ಲಿ ನಿಂತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿ ಸೇರಿ ಮೂವರು ಸಾವು
ಶನಿವಾರ ಸಂಜೆಯಿಂದ ಭಾನುವಾರ ಬೆಳಗಿನವರೆಗೆ ಬಾಲಕಿ ಎಲ್ಲೆಲ್ಲಿ ಹೋಗಿದ್ದಳು ಎಂಬುದನ್ನು ತಿಳಿಯಲು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದು ಆತ್ಮಹತ್ಯೆಯೋ ಅಥವಾ ಬೇರೆ ಯಾವುದಾದರೂ ದುಷ್ಕೃತ್ಯವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾರಾಮತಿಯಲ್ಲಿ ಆತಂಕ: ಪ್ರಭಾವಿ ರಾಜಕೀಯ ನಾಯಕರ ಆಪ್ತ ಸಿಬ್ಬಂದಿಯ ಕುಟುಂಬದಲ್ಲೇ ಇಂತಹ ಘಟನೆ ನಡೆದಿರುವುದರಿಂದ ಸ್ಥಳೀಯರಲ್ಲಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವೈದ್ಯಕೀಯ ವರದಿ ಬಂದ ನಂತರವೇ ಸಾವಿನ ಕಾರಣ ದೃಢಪಡಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ