ರಾಯಚೂರು: ರಿಮ್ಸ್ನಲ್ಲಿ ಹೆರಿಗೆ ವೇಳೆ ಅವಳಿ ಮಕ್ಕಳ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ!
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ತಾಯಿಯ ಬಿಪಿ ಹೆಚ್ಚಾಗಿದ್ದು, ಆಸ್ಪತ್ರೆಗೆ ಬರುವಾಗಲೇ ಗರ್ಭದಲ್ಲೇ ಮಕ್ಕಳು ಮೃತಪಟ್ಟಿದ್ದವು ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ತಾಯಿಗೆ ಚಿಕಿತ್ಸೆ ಮುಂದುವರಿದಿದೆ.

ಮುಖ್ಯಾಂಶಗಳು
- ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಅವಳಿ ಮಕ್ಕಳ ಸಾವು.
- ವೈದ್ಯರ ನಿರ್ಲಕ್ಷ್ಯದಿಂದಲೇ ಮಕ್ಕಳು ಸಾವು ಎಂದು ಪೋಷಕರ ತೀವ್ರ ಆರೋಪ.
- ಆಸ್ಪತ್ರೆಗೆ ಬರುವಾಗಲೇ ಮಕ್ಕಳು ಮೃತಪಟ್ಟಿದ್ದವು ಎಂದು ವೈದ್ಯರ ಸ್ಪಷ್ಟನೆ.
ರಾಯಚೂರು, ಆಗಸ್ಟ್ 23: ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿವೆ ಎಂದು ಪೋಷಕರು ಆರೋಪಿಸಿರುವ ಘಟನೆ ರಾಯಚೂರಿನ ರಿಮ್ಸ್ (RIMS) ಬೋಧಕ ಆಸ್ಪತ್ರೆಯಲ್ಲಿ ನಡೆದಿದೆ. ಮಾನವಿ ತಾಲೂಕಿನ ಮೂಲದ ಚನ್ನಬಸವ ಹಾಗೂ ಕಾವೇರಿ ದಂಪತಿಯ ಅವಳಿ ಮಕ್ಕಳು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕಾವೇರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಮಾನ್ವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರು.
ಕುಟುಂಬಸ್ಥರ ಆರೋಪವೇನು?
ರಾತ್ರಿ 8:30ರ ಸುಮಾರಿಗೆ ರಿಮ್ಸ್ಗೆ ದಾಖಲಾದ ಕಾವೇರಿ ಅವರು ತೀವ್ರ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರು. ಆಕೆಯ ನೋವು ತಾಳಲಾರದೆ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಲ್ಲಿ ವಿನಂತಿಸಿಕೊಂಡಿದ್ದರು. ಆದರೆ ವೈದ್ಯರು ಹಾಗೂ ಸಿಬ್ಬಂದಿ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಮಧ್ಯರಾತ್ರಿ 3:30ರ ಸುಮಾರಿಗೆ ಗರ್ಭಿಣಿಯ ಸ್ಥಿತಿ ಗಂಭೀರ ಗೊಂಡಾಗ, “ಮಕ್ಕಳು ಹೋದರೂ ಪರವಾಗಿಲ್ಲ, ತಾಯಿಯ ಜೀವ ಉಳಿಸಿ” ಎಂದು ಪೋಷಕರು ಗೋಳಾಡಿದ್ದಾರೆ. ಅಂತಿಮವಾಗಿ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದು, ಪೋಷಕರ ಕಣ್ಣೀರು ಮುಗಿಲು ಮುಟ್ಟಿದೆ.
ವೈದ್ಯರ ಸ್ಪಷ್ಟನೆ
ಈ ಆರೋಪವನ್ನು ರಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ರಾಧಾ ಸಂಗಾವಿ ನಿರಾಕರಿಸಿದ್ದಾರೆ. “ನಮ್ಮ ಸಿಬ್ಬಂದಿಯ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಮಾನ್ವಿಯಿಂದ ರೆಫರ್ ಆಗಿ ಬರುವಾಗಲೇ ತಾಯಿಯ ರಕ್ತದೊತ್ತಡ (BP) ಹೆಚ್ಚಾಗಿತ್ತು ಹಾಗೂ ಗರ್ಭದಲ್ಲೇ ಮಕ್ಕಳು ಮೃತಪಟ್ಟಿದ್ದವು. ತಾಯಿಗೆ ಫಿಟ್ಸ್ ಬಾರದಂತೆ ತುರ್ತು ಚಿಕಿತ್ಸೆ ನೀಡಿ, ಗರ್ಭದಲ್ಲೇ ಮೃತಪಟ್ಟಿದ್ದ ಮಕ್ಕಳನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




