ನೆಹರು-ಅಂಬೇಡ್ಕರ್ ಕುರಿತು ಸ್ಯಾಮ್ ಪಿತ್ರೋಡಾ ಪೋಸ್ಟ್​​​ಗೆ ಬಿಜೆಪಿ ಟೀಕೆ; ಏನಿದು ಪ್ರಕರಣ?

ಸುಧೀಂದ್ರ ಕುಲಕರ್ಣಿ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಕ್ಕಾಗಿ ಸ್ಯಾಮ್ ಪಿತ್ರೋಡಾ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಅಂಬೇಡ್ಕರ್-ವಿರೋಧಿ, ದಲಿತ ವಿರೋಧಿ ಡಿಎನ್‌ಎ ಹೊಂದಿದೆ ಎಂದು ಹೇಳಿದರು

ನೆಹರು-ಅಂಬೇಡ್ಕರ್ ಕುರಿತು ಸ್ಯಾಮ್ ಪಿತ್ರೋಡಾ ಪೋಸ್ಟ್​​​ಗೆ ಬಿಜೆಪಿ ಟೀಕೆ; ಏನಿದು ಪ್ರಕರಣ?
ಸ್ಯಾಮ್ ಪಿತ್ರೋಡಾ
Follow us
|

Updated on: Jan 27, 2024 | 8:51 PM

ದೆಹಲಿ ಜನವರಿ 27: ಇಂಡಿಯನ್ ಓವರ್​​​ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಅವರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ಗೆ ಬಿಜೆಪಿ (BJP) ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಸುಧೀಂದ್ರ ಕುಲಕರ್ಣಿ (Sudheendra Kulkarni) ಅವರು ಬರೆದ ಲೇಖನದ ಲಿಂಕ್​​ನ್ನು ಪಿತ್ರೋಡಾ ಪೋಸ್ಟ್ ಮಾಡಿದ್ದು, ನೆಹರೂ ಅವರು ಸಂವಿಧಾನ ಮತ್ತು ಅದರ ಪೀಠಿಕೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ, ಅಂಬೇಡ್ಕರ್ ಅಲ್ಲ ಎಂದು ಇದರಲ್ಲಿದೆ. ಸ್ಯಾಮ್ ಪಿತ್ರೋಡಾ ಮಾತ್ರವಲ್ಲ ಲೇಖನ ಬರೆದ ರಾಜಕೀಯ ಕಾರ್ಯಕರ್ತ ಸುಧೀಂದ್ರ ಕುಲಕರ್ಣಿ ವಿರುದ್ಧವೂ ಟೀಕಾ ಪ್ರಹಾರ ನಡೆದಿದೆ. ಆದಾಗ್ಯೂ,ಕುಲಕರ್ಣಿ ಅವರು ಕ್ಷಮೆಯಾಚಿಸಲು ನಿರಾಕರಿಸಿದರು.

ಹಿಂದೂ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿದ ಡಾ.ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ.ಅವರು ಅನೇಕ ಸಾಮಾಜಿಕ ಸುಧಾರಣೆಗಳಿಗೆ ನಾಂದಿ ಹಾಡಿದ್ದಾರೆ. ಸತ್ಯಗಳ ಆಧಾರದಲ್ಲಿ ಅಂಬೇಡ್ಕರ್ ಅವರ ಕೊಡುಗೆಗಿಂತ ನೆಹರೂ ಅವರ ಕೊಡುಗೆ ಹೆಚ್ಚು ಎಂದು ನಾನು ಲೇಖನ ಬರೆದಿದ್ದೇನೆ. ಇತಿಹಾಸ ಓದಿದ ಯಾರಾದರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್ ಸಂವಿಧಾನವನ್ನು ಬರೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು, 1930 ರಲ್ಲಿ, ಜನವರಿ 26 ರಂದು ಕಾಂಗ್ರೆಸ್ ‘ಪೂರ್ಣ ಸ್ವರಾಜ್’ ನಿರ್ಣಯವನ್ನು ಅಂಗೀಕರಿಸಿತು, ಅಂದಿನಿಂದ ನೆಹರೂ ಅವರು ಸಂವಿಧಾನ ರಚನೆಗೆ ಶ್ರಮಿಸಿದರು ಎಂದು ಕುಲಕರ್ಣಿ ಹೇಳಿದರು. “ನಾನು ಈಗ ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ, ನಾನು ಒಮ್ಮೆ ಬಿಜೆಪಿಯೊಂದಿಗೆ ಇದ್ದೆ, ನನ್ನ ಪದಗಳನ್ನು ರಾಜಕೀಯವಾಗಿ ಬಳಸಬಾರದು ಅಥವಾ ದುರುಪಯೋಗಪಡಿಸಿಕೊಳ್ಳಬಾರದು. ಅಂಬೇಡ್ಕರ್ ಅವರೇ ಇದು ನನ್ನ ಸಂವಿಧಾನವಲ್ಲ ಎಂದು ಹೇಳಿದ್ದರು ಎಂದು ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

ಕುಲಕರ್ಣಿ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಕ್ಕಾಗಿ ಸ್ಯಾಮ್ ಪಿತ್ರೋಡಾ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಅಂಬೇಡ್ಕರ್-ವಿರೋಧಿ, ದಲಿತ ವಿರೋಧಿ ಡಿಎನ್‌ಎ ಹೊಂದಿದೆ ಎಂದು ಹೇಳಿದರು. “ರಾಹುಲ್ ಗಾಂಧಿಯವರ ಅಂಕಲ್ ಸ್ಯಾಮ್ (ಸ್ಯಾಮ್ ಪಿತ್ರೋಡಾ) ಅವರು ಸಂವಿಧಾನಕ್ಕೆ ಅಂಬೇಡ್ಕರ್ ಅವರ ಕೊಡುಗೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಈ ಮಾತುಗಳು ಸ್ಯಾಮ್ ಪಿತ್ರೋಡಾ ಅವರದ್ದಾಗಿರಬಹುದು, ಆದರೆ ಅದರ ಹಿಂದಿನ ಭಾವನೆಯನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ನೀಡಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ಮತ್ತು ಎಸ್‌ಸಿ ವಿರೋಧಿ. ನೆಹರೂ ಅವರ ಆಡಳಿತಾವಧಿಯಲ್ಲಿ ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ಇದೇ ಕಾಂಗ್ರೆಸ್. ಇದೇ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ವಿಳಂಬ ಮಾಡಿತು ಎಂದು ಪೂನಾವಾಲಾ ಹೇಳಿದರು.

ಈ ಮಧ್ಯೆ ಸ್ಯಾಮ್ ಪಿತ್ರೋಡಾ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಿತೀಶ್ ಕುಮಾರ್ ಬಿಜೆಪಿ ಜೊತೆ ಸೇರಿದರೆ ಡಿಸಿಎಂ ತೇಜಸ್ವಿ ಯಾದವ್ ಮುಂದಿರುವ ಆಯ್ಕೆಗಳೇನು?

ಭಾರತದ ಕಟ್ಟಕಡೆಯ ಸಮುದಾಯಗಳಿಗೆ ಆದರ್ಶವಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಗುರಿಯಾಗಿಸಿಕೊಂಡರೆ ಒಬ್ಬರನ್ನು ಹೇಗೆ ಉಳಿಸಬಹುದು? ಕಾಂಗ್ರೆಸ್‌ಗೆ ಏನಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ, ಒಂದು ಕಡೆ ಚುನಾವಣೆ ಬಂದಾಗ ಅವರು ಹಿಂದೂಗಳಾಗುತ್ತಾರೆ, ಮತ್ತೊಂದೆಡೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ಅವರು ನಿರಾಕರಿಸುತ್ತಾರೆ. ಇದಕ್ಕಾಗಿ ಕಾಂಗ್ರೆಸ್ ನಾಯಕತ್ವ ರಾಷ್ಟ್ರದ ಕ್ಷಮೆಯಾಚಿಸಬೇಕು. ಸ್ಯಾಮ್ ಪಿತ್ರೋಡಾ ಅವರ ನಿಲುವು ವೈಯಕ್ತಿಕವೇ ಅಥವಾ ಕಾಂಗ್ರೆಸ್ ಪರವಾಗಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಎಸ್‌ಪಿ ಸಂಸದ ಮಲೂಕ್ ನಾಗರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ